ನಟಿ ಮಯೂರಿ ಕ್ಯಾತರಿ ಇತ್ತೀಚೆಗೆ ತಮ್ಮ ಬಹುಕಾಲದ ಗೆಳೆಯ ಅರುಣ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಿರುತೆರೆಯಿಂದ ನಟನಾ ಪಯಣ ಆರಂಭಿಸಿದ ಅವರು, ಹಿರಿತೆರೆಯಲ್ಲೂ ಹಲವು ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಈಗ ‘ಆದ್ಯಂತ’ ಹೆಸರಿನ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಿದ್ದಾರೆ. ಅಂದಹಾಗೆ ಇಂದು ಮಯೂರಿ ಅವರ ಜನ್ಮದಿನವೂ ಹೌದು. ಹುಟ್ಟುಹಬ್ಬದ ಕೊಡುಗೆಯಾಗಿ ‘ಆದ್ಯಂತ’ ಚಿತ್ರತಂಡವು ಈ ಚಿತ್ರದ ಫಸ್ಟ್ಲುಕ್ ಅನ್ನು ಬಿಡುಗಡೆ ಮಾಡಿದೆ.
ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಪುನೀತ್ ಶರ್ಮಾನ್. ಎಸ್.ಎಸ್. ರಾಜಮೌಳಿ ಮತ್ತು ರಾಮ್ಗೋಪಾಲ್ ವರ್ಮಾ ಅವರ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನುಭವ ಅವರ ಬೆನ್ನಿಗಿದೆ.
ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ ಇದು. ದೀಪಾ(ಮಯೂರಿ) ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಅಚಾನಕ್ ಆಗಿ ಆಕೆಗೆ ತನ್ನಜ್ಜಿ ಬರೆದ ಆಸ್ತಿಯ ವಿಲ್ ಸಿಗುತ್ತದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಆಕೆ ಆ ಆಸ್ತಿ ಮಾರಲು ಸಕಲೇಶಪುರದ ಎಸ್ಟೇಟ್ಗೆ ತನ್ನ ಪ್ರಿಯಕರನೊಂದಿಗೆ ಹೋಗುತ್ತಾಳೆ. ಎಸ್ಟೇಟ್ ಮನೆಯಲ್ಲಿ ಅವಳಿಗೆ ವಿಚಿತ್ರ ಘಟನೆಗಳ ಅನುಭವವಾಗುತ್ತದೆ. ಆ ಘಟನೆಗಳ ಸುಳಿಗೆ ಸಿಲುಕಿಕೊಳ್ಳುತ್ತಾಳೆ. ಅದರಿಂದ ಹೇಗೆ ಪಾರಾಗಿ ಹೊರಬರುತ್ತಾಳೆ ಎನ್ನುವುದೇ ಚಿತ್ರದ ಹೂರಣ.
ಈಗಾಗಲೇ, ಇದರ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಲೇಖನಾ ಕ್ರಿಯೇಷನ್ ಮತ್ತು ಆರ್.ಆರ್. ಮೂವೀಸ್ ಬ್ಯಾನರ್ನಡಿ ರಮೇಶ್ ಬಾಬು ಟಿ. ಇದಕ್ಕೆ ಬಂಡವಾಳ ಹೂಡಿದ್ದಾರೆ. ಪ್ರಕಾಶ್ ಎಲಗೂಡು ಮತ್ತು ಮೋಹನ್ ಕುಮಾರ್ ಆರ್.ಎಸ್. ಸಹ ನಿರ್ಮಾಪಕರಾಗಿದ್ದಾರೆ.
ನವೀನ್ ಕುಮಾರ್ ಚಲ್ಲ ಅವರ ಛಾಯಾಗ್ರಹಣವಿದೆ. ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ಶೀಘ್ರವೇ, ಟೀಸರ್ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ. ದಿಲೀಪ್, ರಮೇಶ್ ಭಟ್, ಶ್ರೀನಾಥ್ ವಸಿಷ್ಠ, ಪ್ರಶಾಂತ್ ನಟನಾ, ನಿಖಿಲ್ ಗೌಡ ತಾರಾಗಣದಲ್ಲಿದ್ದಾರೆ.