‘ಹೌಸ್ಫುಲ್’, ‘ನಿಂಬೆಹುಳಿ’ ಚಿತ್ರಗಳ ನಿರ್ದೇಶಕರಾದ ಹೇಮಂತ್ ಹೆಗಡೆ, ಇದೀಗ ಮತ್ತೊಂದು ಹಾಸ್ಯಪ್ರಧಾನ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಮಲೆನಾಡಿನ ಹುಡುಗರಿಗೆ ಹುಡುಗಿ ಸಿಗುತ್ತಿಲ್ಲ ಎನ್ನುವ ಅಂಶವೇ ಚಿತ್ರಕಥೆ.
ಚಿತ್ರದಲ್ಲಿ ಸ್ವತಃ ಹೇಮಂತ್ ಹೆಗಡೆಯವರೇ ನಾಯಕರಾಗಿ ನಟಿಸುತ್ತಿದ್ದು, ನಾಯಕಿಯಾಗಿ ಮರಾಠಿಯ ಲೋಪಮುದ್ರ ರಾವುತ್ ನಟಿಸಲಿದ್ದಾರೆ. ಚಿತ್ರದ ಶೀರ್ಷಿಕೆ ಜೂ.23ರಂದು ಅನಾವರಣಗೊಳ್ಳಲಿದ್ದು, ಪದ್ಮಜಾ ರಾವ್, ರಮೇಶ್ ಭಟ್, ಶರತ್ ಲೋಹಿತಾಶ್ವ ತಾರಾಗಣದಲ್ಲಿದ್ದಾರೆ.
‘ಉತ್ತರ ಕನ್ನಡ, ಶೃಂಗೇರಿ ಹಾಗೂ ಉತ್ತರ ಭಾರತದಲ್ಲಿ ಚಿತ್ರೀಕರಣಕ್ಕೆ ಚಿತ್ರತಂಡವು ನಿರ್ಧರಿಸಿದ್ದು, ಆಗಸ್ಟ್ನಿಂದ ಚಿತ್ರೀಕರಣ ಆರಂಭವಾಗಲಿದೆ. ಕೃಷಿಕನಾಗಿರುವ 35 ವರ್ಷದ ನಾಯಕ ಹುಡುಗಿ ಹುಡುಕಲು ಪಡುವ ಪಾಡನ್ನು ಅದರಲ್ಲಿರುವ ಕಿತಾಪತಿಯನ್ನು ಚಿತ್ರಕಥೆ ಹೊಂದಿದೆ. ಕಳೆದ ಐದು ವರ್ಷದಿಂದ ಕೇವಲ ಹವ್ಯಕರಿಗೆ ಎಂದಲ್ಲ ಮಲೆನಾಡಿನ ಹುಡುಗರಿಗೆ ಹುಡುಗಿ ಸಿಗುತ್ತಿಲ್ಲ. ಇದೊಂದು ಸಾಮಾಜಿಕ ಪಿಡುಗಾಗಿದೆ ಎನ್ನುತ್ತಾರೆ ಹೇಮಂತ್ ಹೆಗಡೆ. ಮೂವರು ಎನ್ಆರ್ಐಗಳು ಚಿತ್ರದ ನಿರ್ಮಾಪಕರಾಗಿದ್ದಾರೆ.