ಕಳಸ: ನಟಿ ಮಾನ್ವಿತಾ ಕಾಮತ್ ಬುಧವಾರ ಮೈಸೂರು ಮೂಲದ ಸಂಗೀತ ನಿರ್ಮಾಪಕ ಅರುಣ್ ಅವರ ಜೊತೆ ಹಸೆಮಣೆ ಏರಿದರು.
ಪಟ್ಟಣದ ಬೈನೆಕಾಡು ರೆಸಾರ್ಟ್ನಲ್ಲಿ ಸೋಮವಾರ ಮೆಹಂದಿ ಮತ್ತು ಹಳದಿ ಶಾಸ್ತ್ರ ನಡೆದಿತ್ತು. ಮೇಲಂಗಡಿ ವೆಂಕಟರಮಣ ದೇಗುಲದ ಜಿಎಸ್ಬಿ ಭವನದಲ್ಲಿ ಮಂಗಳವಾರ ಕೊಂಕಣಿ ಸಂಪ್ರದಾಯದಂತೆ ಫೂಲ್ ಮಡ್ಡಿ ಹಾಗೂ ಬುಧವಾರ ವಿವಾಹ ನಡೆಯಿತು.
ಪಟ್ಟಣದ ಕೆನರಾ ಬ್ಯಾಂಕ್ ಉದ್ಯೋಗಿ ಆಗಿದ್ದ ಹರೀಶ್ ಕಾಮತ್ ಮತ್ತು ಸುಜಾತಾ ಕಾಮತ್ ದಂಪತಿಯ ಪುತ್ರಿ ಮಾನ್ವಿತಾ, ಕಳಸದ ಪರಿಸರದಲ್ಲೇ ಬಾಲ್ಯ ಮತ್ತು ಪ್ರೌಢಶಾಲೆವರೆಗಿನ ಶಿಕ್ಷಣ ಪಡೆದಿದ್ದರು.
ಮಂಗಳೂರಿನಲ್ಲಿ ಪದವಿ ಪಡೆದ ಇವರು, ಕೆಲಕಾಲ ರೇಡಿಯೊ ಜಾಕಿ ಆಗಿದ್ದರು. ಸೂರಿ ನಿರ್ದೇಶನದ ‘ಕೆಂಡಸಂಪಿಗೆ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ‘ಟಗರು’, ‘ಚೌಕ’ ಮುಂತಾದ ಚಿತ್ರಗಳಲ್ಲೂ ನಟಿಸಿದ್ದಾರೆ. ಸದ್ಯ ಮರಾಠಿ ಮತ್ತು ಹಿಂದಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ನಟಿಯರಾದ ಶ್ರುತಿ ಹರಿಹರನ್, ನಿಧಿ ಸುಬ್ಬಯ್ಯ, ಬಾಲಿವುಡ್ ನಿರ್ದೇಶಕ ವಿಕಾಸ್ ಬೆಹ್ಲ್ ಮತ್ತಿತರ ಗಣ್ಯರು ವಿವಾಹಕ್ಕೆ ಸಾಕ್ಷಿಯಾದರು.