ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ರತ್ನ ಪುನೀತ್: ಮಾಸ್ಟರ್‌ ಲೋಹಿತ್‌ ಇಂದ 'ಪವರ್‌ ಸ್ಟಾರ್‌'ವರೆಗಿನ ಪಯಣ

Last Updated 1 ನವೆಂಬರ್ 2022, 6:41 IST
ಅಕ್ಷರ ಗಾತ್ರ

ದೊಡ್ಮನೆಯ ಹುಡುಗ, ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಇಹಲೋಹ ತ್ಯಜಿಸಿ ವರ್ಷವೊಂದು ಕಳೆದೇ ಹೋಯ್ತು. ಆದಾಗ್ಯೂ ಅಭಿಮಾನಿಗಳಲ್ಲಿ ಅವರ ಅಕಾಲಿಕ ಮರಣದ ದುಃಖ ಕಡಿಮೆಯಾಗಿಲ್ಲ. ಅವರ ಕೊನೆಯ ಚಿತ್ರ ‘ಗಂಧದ ಗುಡಿ’ಯನ್ನು ಕಣ್ತುಂಬಿಕೊಳ್ಳುವ ಮೂಲಕ ಅಭಿಮಾನಿಗಳು ಅಪ್ಪುವನ್ನು ಮತ್ತೆ ಕಂಡು ಖುಷಿಪಡುತ್ತಿದ್ದಾರೆ.

ಪುನೀತ್‌ ಸಾವನ್ನಪ್ಪಿ ವರ್ಷದ ಬೆನ್ನಲ್ಲೇ 67ನೇ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಅವರಿಗಿಂದು ಕರ್ನಾಟಕದ ಅತ್ಯುನ್ನತ ಪ್ರಶಸ್ತಿ ‘ಕರ್ನಾಟಕ ರತ್ನ’ ಪ್ರದಾನವಾಗುತ್ತಿದೆ. ಬಾಲನಟನಾಗಿ 44 ವರ್ಷಗಳ ಹಿಂದೆ ತಂದೆ ರಾಜ್‌ಕುಮಾರ್‌ ಜೊತೆ ತೆರೆ ಹಂಚಿಕೊಂಡ ಪುನೀತ್‌ ಸಾಗಿಬಂದ ದಾರಿ ದೊಡ್ಡದಿದೆ. ತಂದೆ ಡಾ. ರಾಜ್‌ಕುಮಾರ್‌ ಜೊತೆಗೆ ‘ಮಾಸ್ಟರ್‌ ಲೋಹಿತ್‌’ ಆಗಿ ಹಲವು ಸಿನಿಮಾಗಳಲ್ಲಿ ಬಾಲ ನಟನಾಗಿ ನಟಿಸಿದ್ದಾರೆ. ನಟನೆಗಿಂತ ಹೆಚ್ಚಾಗಿ ತಂದೆ ರಾಜ್‌ಕುಮಾರ್‌ ರೀತಿಯಲ್ಲೇ ಪುನೀತ್‌ ಅವರೊಳಗಿದ್ದ ಮಾನವೀಯತೆ, ಸೇವಾ ಮನೋಭಾವ, ಸರಳತೆ ಅವರನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಿತು.

1975, ಮಾರ್ಚ್ 17 ರಂದು ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ಡಾ.ರಾಜಕುಮಾರ್ ಮತ್ತು ಪಾರ್ವತಮ್ಮರವರ ಕಿರಿಯ ಪುತ್ರನಾಗಿ ಜನಿಸಿದ ಪುನೀತ್‌, ಮನೆಯಲ್ಲಿ ಕಿರಿಯವನಾದ್ದರಿಂದ ಎಲ್ಲರಿಗೂ ಅಚ್ಚುಮೆಚ್ಚಿನ ಕೂಸು. ರಾಜ್ ತಮ್ಮ ಬಹುತೇಕ ಚಿತ್ರಗಳ ಶೂಟಿಂಗ್‌ಗೆ ಪುನೀತ್‌, ಪೂರ್ಣಿಮಾ ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಚಿಕ್ಕ ಮಗುವಾಗಿದ್ದಾಗಲೇ 'ಪ್ರೇಮದ ಕಾಣಿಕೆ' ಚಿತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶ ಪುನೀತ್‌ಗೆ ಸಿಗುತ್ತದೆ.

ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತಾ, ಹೊಸ ಬೆಳಕು, ಚಲಿಸುವ ಮೋಡಗಳು, ಭಾಗ್ಯವಂತ, ಭಕ್ತ ಪ್ರಹ್ಲಾದ, ಎರಡು ನಕ್ಷತ್ರಗಳು, ಯಾರಿವನು ಮುಂತಾದ ಸಿನಿಮಾಗಳಲ್ಲಿ ನಟಿಸಿದರು. ಬಾಲ ನಟನಾಗಿ 14 ಮತ್ತು ನಾಯಕನಾಗಿ 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಭಾಗ್ಯವಂತ ಚಿತ್ರದ `ಬಾನ ದಾರಿಯಲ್ಲಿ ಸೂರ್ಯ', ಚಲಿಸುವ ಮೋಡಗಳು ಚಿತ್ರದ `ಕಾಣದಂತೆ ಮಾಯವಾದನೋ', ಯಾರಿವನು ಚಿತ್ರದ `ಕಣ್ಣಿಗೆ ಕಾಣುವ ದೇವರು' ಮುಂತಾದ ಗೀತೆಗಳನ್ನು ಹಾಡಿ ಹಿನ್ನೆಲೆ ಗಾಯಕರಾಗಿಯೂ ಯಶಸ್ಸು ಸಾಧಿಸುತ್ತಾರೆ.
ದೊರೆ-ಭಗವಾನ್‌, ಕೆ.ಎಸ್‌.ಎಲ್‌. ಸ್ವಾಮಿ, ಬಿ.ಎಸ್‌. ರಂಗ, ಸಿಂಗೀತಂ ಶ್ರೀನಿವಾಸ ರಾವ್‌ ಮುಂತಾದ ನಿರ್ದೇಶಕರೊಂದಿಗೆ ಕೆಲಸ ಮಾಡುವ ಭಾಗ್ಯ ಪುನೀತ್‌ಗೆ ಬಾಲನಟನಾಗಿದ್ದಾಗಲೇ ಸಿಕ್ಕಿತ್ತು.

'ಚಲಿಸುವ ಮೋಡಗಳು' ಚಿತ್ರದಲ್ಲಿನ ನಟನೆಗಾಗಿ ಅವರಿಗೆ 'ಅತ್ಯುತ್ತಮ ಬಾಲನಟ' ರಾಜ್ಯ ಪ್ರಶಸ್ತಿ ಲಭಿಸುತ್ತದೆ. 'ಬೆಟ್ಟದ ಹೂವು' ಚಿತ್ರದಲ್ಲಿನ ಅಭಿನಯಕ್ಕಾಗಿ 'ಅತ್ಯುತ್ತಮ ಬಾಲನಟ' ರಾಷ್ಟ್ರ ಪ್ರಶಸ್ತಿ ದೊರಕಿತು. ಪುನೀತ್‌ ಅತ್ಯಂತ ಮುದ್ದಾದ ನಟನೆಯ ‘ಬೆಟ್ಟದ ಹೂ’ ಚಿತ್ರದ ದೃಶ್ಯವೊಂದು ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತದೆ.

1989ರ ಬಳಿಕ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿದ್ದರು. ಯಾವ ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳಲಿಲ್ಲ. 13 ವರ್ಷಗಳ ಬಳಿಕ ನಾಯಕನಾಗಿ 'ಅಪ್ಪು' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. 2002ರಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡ ಚಿತ್ರ ಭರ್ಜರಿ ಹಿಟ್‌. ಪುರಿ ಜಗನ್ನಾಥ್‌ ನಿರ್ದೇಶನದ ಚಿತ್ರದಲ್ಲಿ ರಕ್ಷಿತಾ ನಾಯಕಿ. ಗುರುಕಿರಣ್‌ ಸಂಗೀತ ಚಿತ್ರಕ್ಕೊಂದು ಪ್ಲಸ್‌ ಪಾಯಿಂಟ್‌. ನಂತರ ತೆರೆಗೆ ಬಂದ ಅಭಿ, ವೀರ ಕನ್ನಡಿಗ, ಮೌರ್ಯ, ಆಕಾಶ್ ,ನಮ್ಮ ಬಸವ, ಅಜಯ್ ಮುಂತಾದ ಚಿತ್ರಗಳು ಕೂಡ ಯಶಸ್ಸಿನ ಹಾದಿ ಹಿಡಿದವು. ಮಾಸ್‌ ಮತ್ತು ಕ್ಲಾಸ್‌ ಪ್ರೇಕ್ಷಕರನ್ನು ಸೆಳೆಯುವಲ್ಲಿ ಪುನೀತ್‌ ಯಶಸ್ವಿಯಾಗುತ್ತಾರೆ. ನಾಯಕನಾಗಿ ನಟಿಸಿದ ಮೊದಲ ಹತ್ತು ಚಿತ್ರಗಳು ಶತದಿನ ಪೂರೈಸಿದ್ದು, ನಾಯಕನಾಗಿ ಎರಡು ರಾಜ್ಯ ಪ್ರಶಸ್ತಿ, ನಾಲ್ಕು ಫಿಲ್ಮಫೇರ್ ಪ್ರಶಸ್ತಿ ಪಡೆಯುತ್ತಾರೆ. ಅವರ ನಟನೆಯ ‘ರಾಜಕುಮಾರ’ ಚಿತ್ರ ಅಭಿಮಾನಿಗಳ ಮನಸೂರೆಗೊಳ್ಳುತ್ತದೆ.

ಇದಲ್ಲದೆ 'ಕನ್ನಡದ ಕೋಟ್ಯಧಿಪತಿ', 'ಫ್ಯಾಮಿಲಿ ಪವರ್‌' ಮುಂತಾದ ಕಾರ್ಯಕ್ರಮಗಳ ಮೂಲಕ ಕಿರುತೆರೆ ವೀಕ್ಷಕರನ್ನೂ ತಲುಪುತ್ತಾರೆ. ಪಿಆರ್‌ಕೆ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕುತ್ತಾರೆ. ಚಿತ್ರ ನಿರ್ಮಾಪಕರಾಗಿ `ಕವಲುದಾರಿ', `ಮಯಾಬಜಾರ್' ಸೇರಿದಂತೆ ಕೆಲವು ಚಿತ್ರಗಳನ್ನು ತಮ್ಮ ಹೋಮ್ ಬ್ಯಾನರ್‌ನಲ್ಲಿಯೇ ನಿರ್ಮಿಸುತ್ತಾರೆ. ‘ಗಂಧದಗುಡಿ’ ಅವರ ಕನಸು.

ಮೈಸೂರಿನ ‘ಶಕ್ತಿ ಧಾಮ’ ಸೇರಿದಂತೆ ಕೆಲ ಸಂಘಟನೆಗಳಿಗೆ ದೇಣಿಗೆ ನೀಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದೆಷ್ಟೋ ಅಭಿಮಾನಿಗಳಿಗೆ ಗೊತ್ತಿಲ್ಲದಂತೆಯೆ ಸಹಾಯ ಮಾಡುತ್ತಾರೆ. `ಬೆಂಗಳೂರು ಪ್ರೀಮೀಯರ್ ಪುಟ್‌ಬಾಲ್ ತಂಡದ ಒಡೆತನವನ್ನು ಹೊಂದಿದ್ದಾರೆ. ಕರ್ನಾಟಕ ಸರ್ಕಾರದ ನಂದಿನಿ ಹಾಲು ಉತ್ಪನ್ನಗಳು ಮತ್ತು ಎಲ್‌ಇಡಿ ಬಲ್ಬ್‌ಗಳ ರಾಯಭಾರಿಯಾಗಿ ಕೂಡ ಕಾಣಿಸಿಕೊಳ್ಳುತ್ತಾರೆ. ಒಂದು ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಭಾರಿಯಾಗಿದ್ದರು.

ಪುನೀತ್ ರಾಜಕುಮಾರ್ ಸಿನಿಮಾ ರಂಗಕ್ಕೆ ನೀಡಿದ ಕೊಡುಗೆ ಮತ್ತು ಸಮಾಜಮುಖಿ ಕಳಕಳಿಯನ್ನು ಗುರುತಿಸಿ ಮೈಸೂರು ವಿಶ್ವವಿದ್ಯಾನಿಲಯ 2022 ಮಾರ್ಚ್ ತಿಂಗಳಿನಲ್ಲಿ ಮರಣೋತ್ತರ `ಡಾಕ್ಟರೇಟ್' ನೀಡಿ ಗೌರವಿಸಿತು. ರಾಜ್ಯೋತ್ಸವದ ಸಂಭ್ರಮದಲ್ಲಿ ಅವರಿಗೆ ‘ಕರ್ನಾಟಕ ರತ್ನದ’ ಗೌರವ ಸಲ್ಲುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT