ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆರೆಬೇಟೆ’ಯಲ್ಲಿ ಮಲೆನಾಡಿನ ಮೀನು!

Published 4 ಜನವರಿ 2024, 23:46 IST
Last Updated 4 ಜನವರಿ 2024, 23:46 IST
ಅಕ್ಷರ ಗಾತ್ರ

ನಟ ಡಾಲಿ ಧನಂಜಯ, ನಿರ್ದೇಶಕ ದಿನಕರ್‌ ತೂಗುದೀಪ್‌ ಸೇರಿದಂತೆ ಅಲ್ಲಿದ್ದ ಗಣ್ಯರೆಲ್ಲ ಕೈಯ್ಯಲ್ಲಿ ದೊಡ್ಡ ಮೀನುಗಳನ್ನು ಹಿಡಿದುಕೊಂಡಿದ್ದರು. ಬಲೆ, ಬುಟ್ಟಿ, ಜಾಗಂಟೆ, ಒರಳುಕಲ್ಲು...ಬೆಂಗಳೂರಿನ ಮಲ್ಲತ್ತಳ್ಳಿ ಕೆರೆ ದಂಡೆ ಒಂದು ರೀತಿ ಮಲೆನಾಡಿನ ಒಂದು ಸಂಸ್ಕೃತಿಯ ಪ್ರತಿರೂಪದಂತಿತ್ತು. ಇದಕ್ಕೆಲ್ಲ ಕಾರಣವಾಗಿದ್ದು, ‘ಕೆರೆಬೇಟೆ’ ಚಿತ್ರದ ಟೀಸರ್‌ ಬಿಡುಗಡೆ ಸಮಾರಂಭ.

ಮಲೆನಾಡಿನ ರೈತಾಪಿ ಜನರೆಲ್ಲ ವರ್ಷದಲ್ಲೊಮ್ಮೆ ಊರಿನ ಕೆರೆಗೆ ಹೋಗಿ ಮೀನು ಹಿಡಿಯುವ ವಾಡಿಕೆಗೆ ‘ಕೆರೆಬೇಟೆ’ ಎನ್ನುತ್ತಾರೆ.  ವಿಶಿಷ್ಟ ಆಚರಣೆಯನ್ನೇ ತೆರೆಯ ಮೇಲೆ ತರಲು ಹೊರಟಿದ್ದಾರೆ ನಟ, ನಿರ್ಮಾಪಕ ಗೌರಿಶಂಕರ್‌.

‘ನಮ್ಮಲ್ಲಿ ಈ ರೀತಿ ಆಚರಣೆ ಇದೆ ಎಂದು ಬಯಲುನಾಡಿನಲ್ಲಿ ಬೆಳೆದ ನನಗೆ ಗೊತ್ತಿರಲಿಲ್ಲ. ನಮ್ಮ ನಾಡಿನ ಇಂಥ ವೈಶಿಷ್ಟ್ಯಗಳನ್ನು ಪರಿಚಯಿಸುವ ಸಿನಿಮಾಗಳು ರಾಜ್ಯದ ಎಲ್ಲ ಭಾಗಗಳಿಂದ ಬರಬೇಕು. ಟೀಸರ್‌ ತುಂಬ ಭರವಸೆ ಮೂಡಿಸುತ್ತಿದೆ’ ಎಂದು ತಂಡಕ್ಕೆ ಶುಭ ಹಾರೈಸಿದರು ನಟ ಡಾಲಿ ಧನಂಜಯ.

ಈ ಹಿಂದೆ ‘ರಾಜಹಂಸ’ ಸಿನಿಮಾ ಮಾಡಿದ್ದ ಗೌರಿಶಂಕರ್‌ ಚಿತ್ರದ ನಾಯಕ. ಬಿಂದು ಶಿವರಾಂ ಚಿತ್ರದ ನಾಯಕಿ. ‘ಜೆಸ್ಸಿ’ ಸೇರಿದಂತೆ ಸಾಕಷ್ಟು ಸಿನಿಮಾಗಳ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿರುವ ರಾಜ್‌ಗುರು ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಗಗನ್‌ ಬದೆರಿಯಾ ಸಂಗೀತ, ಕೀರ್ತನ್‌ ಪೂಜಾರಿ ಛಾಯಾಗ್ರಹಣ ಚಿತ್ರಕ್ಕಿದೆ. 

‘ಸಾಗರ, ಸೊರಬ, ತೀರ್ಥಹಳ್ಳಿ ಸುತ್ತಮುತ್ತ 70 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. ನಾನು ಮಲೆನಾಡಿನವನು. ಹೀಗಾಗಿ ನಮ್ಮೂರಿನ ಸೊಬಗನ್ನು ತೆರೆಯ ಮೇಲೆ ತರುವ ಕನಸು ಬಹಳ ಕಾಲದಿಂದ ಇತ್ತು. ನಿರ್ಮಾಪಕರಾದ ಗೌರಿಶಂಕರ್‌ ಹಾಗೂ ಜೈಶಂಕರ್‌ ಪಟೇಲ್‌ ನನ್ನ ಈ ಕನಸಿಗೆ ಸಾಥ್‌ ನೀಡಿದ್ದಾರೆ. ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ’ ಎಂದರು ನಿರ್ದೇಶಕ ರಾಜ್‌ಗುರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT