‘ಕಿರುಮಿನ್ಕಣಜ’. ಇದು ಒಂದು ಸಿನಿಮಾ ಹೆಸರು. ಈ ಚಿತ್ರ ಶುಕ್ರವಾರ ತೆರೆಗೆ ಬರುತ್ತಿದೆ. ಚಿತ್ರದ ಹೆಸರು ಕೇಳಿದಾಗ, ಚಿತ್ರದ ಕಥೆ ಏನು ಎಂಬುದನ್ನು ಕೇಳುವುದಕ್ಕಿಂತ, ಶೀರ್ಷಿಕೆಯ ಅರ್ಥವೇನು ಎಂದು ಕೇಳಲು ಮನಸ್ಸು ಬಯಸಬಹುದು!
‘ಕಿರುಮಿನ್ಕಣಜ’ ಅಂದರೆ ಚಿಕ್ಕ ಪೆನ್ಡ್ರೈವ್ ಎನ್ನುವ ವಿವರಣೆ ನೀಡಿದ್ದಾರೆ ನಿರ್ದೇಶಕ ಎಂ. ಮಂಜು. ಚಿತ್ರದ ಬಿಡುಗಡೆ ಕುರಿತು ಮಾಹಿತಿ ನೀಡಲು ಅವರು ಸುದ್ದಿಗಾರರ ಎದುರು ಕುಳಿತಿದ್ದರು.
‘ಪೆನ್ಡ್ರೈವ್ಗೆ ಕನ್ನಡದಲ್ಲಿ ಮಿನ್ಕಣಜ ಎನ್ನಬಹುದು. ಒಂದು ಚಿಕ್ಕ ಪೆನ್ ಡ್ರೈವ್ ಆಧರಿಸಿ ಕಥೆ ಸಾಗುತ್ತದೆ. ಹಾಗಾಗಿ, ಚಿತ್ರಕ್ಕೆ ಈ ಹೆಸರು ಇರಿಸಲಾಗಿದೆ. ಪೆನ್ಡ್ರೈವ್ ಸಣ್ಣದಾಗಿದ್ದರೂ, ಅದರಲ್ಲಿ ಏನು ಬೇಕಿದ್ದರೂ ಇರಬಹುದು’ ಎಂದು ಚಿತ್ರದ ಬಗ್ಗೆ ಕುತೂಹಲ ಹುಟ್ಟಿಸುವ ಯತ್ನ ನಡೆಸಿದರು ಮಂಜು.
ಚಿತ್ರದಲ್ಲಿ ಕೊಲೆಯ ಕಥೆ, ಪ್ರೀತಿಯ ಕಥೆ ಇದೆ. ಎಲ್ಲರಿಗೂ ಇಷ್ಟವಾಗುವ ಸಿನಿಮಾ ಇದು ಎಂದರು. ‘ಇದು ಅದ್ಭುತ ಸಿನಿಮಾ ಎನ್ನಲಾರೆ. ಆದರೆ, ನೂರು ರೂಪಾಯಿ ಕೊಟ್ಟು ಸಿನಿಮಾ ವೀಕ್ಷಿಸಿದ ಎಲ್ಲರೂ, ವಾವ್ ಎಂದು ಹೇಳುತ್ತ ಚಿತ್ರಮಂದಿರಗಳಿಂದ ಹೊರಗೆ ಬರುತ್ತಾರೆ’ ಎನ್ನುವುದು ಮಂಜು ಅವರ ವಿಶ್ವಾಸದ ಮಾತು.
ರವಿಚಂದ್ರ ವಿ. ಅವರು ಈ ಚಿತ್ರದ ನಾಯಕ ನಟ. ‘ಸಸ್ಪೆನ್ಸ್ ಜೊತೆ ಪ್ರೀತಿ, ಆ್ಯಕ್ಷನ್, ಭಾವುಕತೆ ಇವೆಲ್ಲವೂ ಸೇರಿರುವ ಚಿತ್ರ ಇದು. ಕುಟುಂಬದ ಎಲ್ಲರೂ ಜೊತೆಯಾಗಿ ಕುಳಿತು ನೋಡಬಹುದಾದ ಸಿನಿಮಾ’ ಎಂದರು ರವಿಚಂದ್ರ. ವರ್ಷಿಕಾ ನಾಯಕ್ ಅವರು ಚಿತ್ರದ ನಾಯಕಿ. ಬಿ. ಸುರೇಶ್ ಬಾಬು ಛಾಯಾಗ್ರಹಣ ಚಿತ್ರಕ್ಕಿದೆ.