'ನಾನೊಮ್ಮೆ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ. ಆ ವಿಮಾನದಲ್ಲಿಯೇ ಕನ್ನಡದ ಖ್ಯಾತ ನಟರೊಬ್ಬರು ಪ್ರಯಾಣಿಸುತ್ತಿದ್ದರು. ಉಭಯಕುಶಲೋಪರಿಯ ಬಳಿಕ ಮಚ್ಚು, ಲಾಂಗ್ ಹಿಡಿದು ಹಿಂಸೆ ವೈಭವೀಕರಿಸುವ ಸಿನಿಮಾಗಳು ಸಮಾಜಕ್ಕೆ ಅಗತ್ಯ ಇದೆಯೇ ಎಂದು ನಾನು ಅವರಿಗೆ ಪ್ರಶ್ನಿಸಿದೆ. ಅಂತಹ ದೃಶ್ಯಗಳು ಜನರಿಗೆ ಇಷ್ಟ ಎಂದು ಅವರು ಹೇಳಿದಾಗ ನಾನು ಅಚ್ಚರಿಪಟ್ಟೆ. ಆದರೆ, ಯಾವ ವರ್ಗದ ಜನರಿಗೆ ಅಂತಹ ಸಿನಿಮಾಗಳು ಇಷ್ಟ ಎಂಬುದು ನನಗೆ ಇಂದಿಗೂ ಗೊತ್ತಿಲ್ಲ' ಎಂದ ಅವರು, ಆ ನಟನ ಹೆಸರನ್ನು ಬಹಿರಂಗಪಡಿಸಲಿಲ್ಲ.
ನಾವು ವರನಟ ರಾಜ್ ಕುಮಾರ್, ಗಿರೀಶ ಕಾರ್ನಾಡ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದೇವೆ. ರಾಜ್ ಕುಮಾರ್ ಅವರ ಸಿನಿಮಾಗಳಲ್ಲಿನ ಆದರ್ಶಗಳು ನಮಗೆ ಮಾದರಿಯಾಗಿದ್ದವು. ಸಮಾಜಕ್ಕೆ ಉತ್ತಮ ಶಿಕ್ಷಣ ಮತ್ತು ಸಂದೇಶ ನೀಡುವ ಸಿನಿಮಾಗಳನ್ನು ನಿರ್ಮಿಸಬೇಕು ಎಂದು ಸಲಹೆ ನೀಡಿದರು.