ನವದೆಹಲಿ: ನಟ ಪುನೀತ್ ರಾಜಕುಮಾರ್ ಅವರ ಪುತ್ರಿ ಧೃತಿ ಅವರು ಅಮೆರಿಕದಿಂದ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಪುನೀತ್ ಸ್ನೇಹಿತರೊಬ್ಬರೊಂದಿಗೆ ಇಲ್ಲಿಗೆ ಬಂದಿಳಿದಿರುವ ಅವರು ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಏರ್ ಇಂಡಿಯಾ ವಿಮಾನದ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ.
ಅವರ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲು ಕರ್ನಾಟಕ ಭವನದ ಹಿರಿಯ ಅಧಿಕಾರಿಗಳ ತಂಡ ಸಹಕಾರ ನೀಡುತ್ತಿದೆ. ಮಧ್ಯಾಹ್ನ 1.30ಕ್ಕೆ ಇಲ್ಲಿಂದ ಬೆಂಗಳೂರಿನತ್ತ ಹಾರಾಟ ಆರಂಭಿಸಲಿರುವ ವಿಮಾನವು, ನಿಗದಿಯಂತೆ ಸಂಜೆ 4.15ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.
ವಿಮಾನ ನಿಲ್ದಾಣದಿಂದ ನೇರವಾಗಿ ಪುನೀತ್ ಅಂತ್ಯಕ್ರಿಯೆ ನಡೆಯಲಿರುವ ಕಂಠೀರವ ಸ್ಟೂಡಿಯೋಗೆ ನೇರವಾಗಿ ಧೃತಿ ಅವರು ತರೆಳಲು ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದಿಂದ ಬರಲಿದ್ದ ವಿಮಾನ ಅರ್ಧ ಗಂಟೆ ತಡವಾಗಿದೆ. ಆದರೆ, ಅವರ ಮುಂದಿನ ಪ್ರಯಾಣಕ್ಕೆ ಯಾವುದೇ ರೀತಿಯ ಸಮಸ್ಯೆ ಆಗಿಲ್ಲ ಎಂದು ಅವರು ಹೇಳಿದ್ದಾರೆ.