‘ರಾಜವೀರ ಮದಕರಿನಾಯಕ’ ಸಿನಿಮಾದಲ್ಲಿ ದರ್ಶನ್ಗೆ ಇಬ್ಬರು ನಾಯಕಿಯರು ಇರಲಿದ್ದಾರೆ ಎಂಬ ಹೊಸ ಸುದ್ದಿ ಹೊರಬಿದ್ದಿದೆ. ನಾಯಕಿಯರಿಗಾಗಿ ಚಿತ್ರತಂಡ ಹುಡುಕಾಟದಲ್ಲಿ ಮುಳುಗಿದೆ.
**
ಸಾಹಿತಿ ಬಿ.ಎಲ್. ವೇಣು ಅವರ ಐತಿಹಾಸಿಕ ಕಾದಂಬರಿ ಆಧಾರಿತ ‘ರಾಜವೀರ ಮದಕರಿನಾಯಕ’ ಚಿತ್ರದ ಮೊದಲ ಹಂತದ ಶೂಟಿಂಗ್ ಪೂರ್ಣಗೊಂಡಿದೆ. ಎಸ್.ವಿ. ರಾಜೇಂದ್ರಬಾಬು ನಿರ್ದೇಶನದ ಇದರಲ್ಲಿ ನಟ ದರ್ಶನ್ ಮದಕರಿನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಕೇರಳದ ಚಾಲುಕುಡಿ ಜಲಪಾತ ಪ್ರದೇಶದಲ್ಲಿ ಮೊದಲ ಹಂತದ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡ ಮಾರ್ಚ್ 15ರಿಂದ ಹೈದರಾಬಾದ್ನಲ್ಲಿ ಗ್ರಾಫಿಕ್ ಭಾಗದ ಶೂಟಿಂಗ್ಗೆ ಸಿದ್ಧತೆ ನಡೆಸಿದೆ.
ಈ ಸಿನಿಮಾದಲ್ಲಿ ದರ್ಶನ್ಗೆ ಇಬ್ಬರು ನಾಯಕಿಯರು ಇರಲಿದ್ದಾರೆ ಎಂಬ ಹೊಸ ಸುದ್ದಿ ಹೊರಬಿದ್ದಿದೆ. ನಾಯಕಿಯರಿಗಾಗಿ ಚಿತ್ರತಂಡ ಹುಡುಕಾಟದಲ್ಲಿ ಮುಳುಗಿದೆ. ದಕ್ಷಿಣ ಭಾರತದ ಖ್ಯಾತ ನಟಿಯರಾದ ನಯನತಾರಾ ಮತ್ತು ಕಾಜಲ್ ಅಗರ್ವಾಲ್ ಅವರನ್ನು ಕರೆತರಲು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಶತಾಯಗತಾಯ ಪ್ರಯತ್ನ ನಡೆಸಿದ್ದಾರಂತೆ. ಆದರೆ, ಈ ಇಬ್ಬರಿಗೂ ಸಮಯದ ಹೊಂದಾಣಿಕೆಯಾಗುತ್ತಿಲ್ಲ ಎನ್ನಲಾಗಿದೆ.
ಈ ಹಿಂದೆ ಉಪೇಂದ್ರ ನಟನೆಯ ‘ಸೂಪರ್’ ಚಿತ್ರದಲ್ಲಿ ನಯನತಾರಾ ನಟಿಸಿದ್ದರು. ಅಲ್ಲದೇ, ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಅವರು ನಟಿಸಿದ್ದ ನರಸಿಂಹ ರೆಡ್ಡಿಯ ಪತ್ನಿ ಸಿದ್ದಮ್ಮಳ ಪಾತ್ರ ಜನರ ಮೆಚ್ಚುಗೆಗಳಿಸಿತ್ತು. ಹಾಗಾಗಿಯೇ, ಅವರನ್ನೇ ‘ಮದಕರಿನಾಯಕ’ ಚಿತ್ರಕ್ಕೆ ಕರೆತರುವ ಇರಾದೆ ಚಿತ್ರತಂಡದ್ದು.
‘ದರ್ಬಾರ್’ ಚಿತ್ರದಲ್ಲಿ ‘ಸೂಪರ್ ಸ್ಟಾರ್’ ರಜನಿಕಾಂತ್ ಜೊತೆಗೆ ತೆರೆಹಂಚಿಕೊಂಡಿದ್ದ ನಯನತಾರಾ ಮತ್ತೆ ತಲೈವನ ‘ಅಣ್ಣಾತೆ’ ಸಿನಿಮಾಕ್ಕೂ ನಾಯಕಿಯಾಗಿದ್ದಾರೆ. ಜೊತೆಗೆ, ‘ನೆತ್ರಿಕಣ್’, ‘ಮೂಕುತಿ ಅಮ್ಮಾನ್’ ಮತ್ತು ‘ಕಾತುವಾಕುಲ ರೆಂಡು ಕಾದಲ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ, ಅವರಿಗೆ ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸಲು ಸಮಯದ ಹೊಂದಾಣಿಕೆಯಾಗುತ್ತಿಲ್ಲವಂತೆ.
ಪ್ರಸ್ತುತ ಕಾಜಲ್ ಅಗರ್ವಾಲ್ ಅವರು ಜಾನ್ ಅಬ್ರಹಾಂ ನಟನೆಯ ಹಿಂದಿಯ ‘ಮುಂಬೈ ಸಗಾ’ ಮತ್ತು ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ, ಅವರಿಗೂ ದಿನಾಂಕದ ಹೊಂದಾಣಿಕೆ ಸಮಸ್ಯೆ ಎದುರಾಗಿದೆ.
‘ಈ ಇಬ್ಬರನ್ನೂ ರಾಜವೀರ ಮದಕರಿನಾಯಕ ಚಿತ್ರಕ್ಕೆ ಕರೆತರುವ ಪ್ರಯತ್ನ ನಡೆದಿದೆ. ಕಾಜಲ್ ಅಗರ್ವಾಲ್ ಅವರನ್ನು ಸಂಪರ್ಕಿಸಲಾಗಿದೆ. ಅವರದ್ದು ಸಮಯ ಹೊಂದಾಣಿಕೆ ಸಮಸ್ಯೆ ತಲೆದೋರಿದೆ. ಇನ್ನೂ ನಯನತಾರಾ ಅವರನ್ನು ಸಂಪರ್ಕಿಸಿಲ್ಲ’ ಎಂದು ನಿರ್ದೇಶಕ ರಾಜೇಂದ್ರಸಿಂಗ್ ಬಾಬು ‘ಪ್ರಜಾಪ್ಲಸ್’ಗೆ ಸ್ಪಷ್ಟಪಡಿಸಿದರು.
ಮಣಿರತ್ನಂ ಸಿನಿಮಾ ತೊಡಕಾಯ್ತೆ?
ಮಣಿರತ್ನಂ ಆ್ಯಕ್ಷನ್ ಕಟ್ ಹೇಳಿರುವ ತಮಿಳಿನ ‘ಪೊನ್ನಿಯನ್ ಸೆಲ್ವನ್’ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಬಿಗ್ ಬಜೆಟ್ ಸಿನಿಮಾ ಇದು. ಇದಕ್ಕೆ ಲೈಕಾ ಪ್ರೊಡಕ್ಷನ್ ಮತ್ತು ಮದ್ರಾಸ್ ಟಾಕೀಸ್ ಬಂಡವಾಳ ಹೂಡಿವೆ. ತಮಿಳಿನ ಖ್ಯಾತ ಸಾಹಿತಿ ಕಲ್ಕಿ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ. ಚಿತ್ರಕ್ಕೆ ಕಾದಂಬರಿಯ ಹೆಸರನ್ನೇ ಇಡಲಾಗಿದೆ. ಚೋಳ ಸಾಮ್ರಾಜ್ಯದ ಚರಿತ್ರೆ ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ.
ಈ ಚಿತ್ರದಲ್ಲಿ ವಿಕ್ರಮ್, ಕಾರ್ತಿ, ಜಯಂ ರವಿ, ಐಶ್ವರ್ಯ ರೈ ಬಚ್ಚನ್, ತ್ರಿಷಾ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಇದರಲ್ಲಿಯೂ ಕಾಜಲ್ ಅಗರ್ವಾಲ್, ನಯನತಾರಾ ಕೂಡ ಕಾಣಿಸಿಕೊಳ್ಳುತ್ತಿದ್ದಾರೆಂಬ ಸುದ್ದಿ ಇದೆ. ಅಲ್ಲದೇ, ದಕ್ಷಿಣ ಭಾರತದ ಖ್ಯಾತ ನಟಿಯರನ್ನು ಈ ಸಿನಿಮಾದ ಮೂಲಕ ಒಂದೇ ವೇದಿಕೆಗೆ ತರುವ ಹಂಬಲ ಮಣಿರತ್ನಂ ಅವರದ್ದು. ಹಾಗಾಗಿ, ಮದಕರಿನಾಯಕ ಚಿತ್ರಕ್ಕೆ ನಾಯಕಿಯರು ಸಿಗಲು ತೊಂದರೆಯಾಗಿದೆಯಂತೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.