ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಶ್ರೀವಾಸ್ತವ ಕಾಂಬಿನೇಷನ್ನಡಿ ಬಿಡುಗಡೆಗೆ ಸಿದ್ಧವಾಗಿರುವ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಚಂದನವನದಲ್ಲಿ ನಿರೀಕ್ಷೆ ಹೆಚ್ಚಿಸಿದೆ. ‘ಕಿರಿಕ್ ಪಾರ್ಟಿ’ ಚಿತ್ರದ ಬಳಿಕ ರಕ್ಷಿತ್ ನಟನೆಯ ಯಾವುದೇ ಸಿನಿಮಾ ತೆರೆಕಂಡಿಲ್ಲ. ಹಾಗಾಗಿ, ಈ ಚಿತ್ರದ ಮೇಲೆ ಅವರ ಅಭಿಮಾನಿಗಳಲ್ಲಿ ಕುತೂಹಲ ಇಮ್ಮಡಿಗೊಂಡಿದೆ.
ಈಗಾಗಲೇ, ಡಿಸೆಂಬರ್ 27ರಂದು ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಚಿತ್ರದ ಬಿಡುಗಡೆಯ ಪ್ರಚಾರದ ಭಾಗವಾಗಿ ನವೆಂಬರ್ 25ರಂದು ಟ್ರೇಲರ್ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ. ಬಳಿಕ ಒಂದರ ನಂತರ ಒಂದೊಂದಾಗಿ ಹಾಡುಗಳನ್ನು ಬಿಡುಗಡೆಗೊಳಿಸುವುದ ತಂಡದ ಯೋಜನೆ.
ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಸಚಿನ್ ರವಿ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳದಲ್ಲಿ ಬಿಡುಗಡೆಯಾಗಲಿದೆ.
200 ದಿನಗಳ ಕಾಲ ಈ ಸಿನಿಮಾದ ಶೂಟಿಂಗ್ ನಡೆಸಲಾಗಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಅತಿಹೆಚ್ಚು ದಿನಗಳವರೆಗೆ ಚಿತ್ರೀಕರಣ ಮಾಡಿದ ಹೆಗ್ಗಳಿಕೆ ಈ ಚಿತ್ರಕ್ಕೆ ಸಲ್ಲುತ್ತದೆ.
ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರದು ಪೊಲೀಸ್ ಅಧಿಕಾರಿಯ ಪಾತ್ರ. ಅವರ ಪಾತ್ರದ ಹೆಸರು ನಾರಾಯಣ. ಆ ಪಾತ್ರವೇ ಸಿನಿಮಾದ ಕೇಂದ್ರಬಿಂದು. ನೋಡಲು ಆತ ಭ್ರಷ್ಟ ಅಧಿಕಾರಿ. ಜೊತೆಗೆ ಕಾಮಿಡಿಯನ್. ಆದರೆ, ಅತಿ ಬುದ್ಧಿವಂತ. ತನ್ನ ಬುದ್ಧಿವಂತಿಕೆಯಿಂದ ಜನರ ಸಮಸ್ಯೆಯನ್ನು ಹೇಗೆ ಪರಿಹರಿಸುತ್ತಾನೆ ಎನ್ನುವುದು ಚಿತ್ರದ ಹೂರಣ.
ಚರಣ್ ರಾಜ್ ಮತ್ತು ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಕರಂ ಚಾವ್ಲಾ ಅವರ ಛಾಯಾಗ್ರಹಣವಿದೆ. ಎಚ್.ಕೆ. ಪ್ರಕಾಶ್ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದಾರೆ. ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಬಾಲಾಜಿ ಮೋಹನ್ ತಾರಾಗಣದಲ್ಲಿದ್ದಾರೆ