ಸಂಭಾವನೆ ಕಡಿಮೆ ಎಂದು ನಾಗಚೈತನ್ಯ ಚಿತ್ರದಿಂದ ಹೊರನಡೆದ ರಶ್ಮಿಕಾ

ನಾಗಚೈತನ್ಯ ನಾಯಕ ನಟನಾಗಿರುವ ಚಿತ್ರದಿಂದ ನಟಿ ರಶ್ಮಿಕಾ ಮಂದಣ್ಣ ಸಂಭಾವನೆ ವಿಚಾರದಿಂದಾಗಿ ಹೊರ ನಡೆದಿದ್ದಾರೆ. ಇದರಿಂದ ಈ ಚಿತ್ರದ ನಿರ್ಮಾಪಕ ದಿಲ್ ರಾಜು ಬೇಸರಗೊಂಡಿದ್ದು, ಅವರು ನಿರ್ಮಿಸುತ್ತಿರುವ ಮತ್ತೊಂದು ಮಹಾತ್ವಾಕಾಂಕ್ಷೆ ಚಿತ್ರದ ಅವಕಾಶವನ್ನು ರಶ್ಮಿಕಾ ಕಳೆದುಕೊಳ್ಳಲಿದ್ದಾರೆಯೇ ಎಂದು ಸುದ್ದಿ ಹರಿದಾಡಿದೆ.
ಬಹುಕಡಿಮೆ ಸಮಯದಲ್ಲಿಯೇ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡ ನಟಿಯರಲ್ಲಿ ನಟಿ ರಶ್ಮಿಕಾ ಕೂಡ ಒಬ್ಬರು. ಕನ್ನಡ ಚಿತ್ರರಂಗದಲ್ಲಿ ನಟನೆಯನ್ನು ಆರಂಭಿಸಿದ ಅವರು ದಕ್ಷಿಣ ಭಾರತದ ಖ್ಯಾತ ನಟಿಯರ ಸಾಲಿನಲ್ಲಿ ಈಗ ಗುರುತಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ಹಾಗೂ ತಮಿಳು ಚಿತ್ರರಂಗದಲ್ಲಿ ಅನೇಕ ಸಿನಿಮಾಗಳ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ರಶ್ಮಿಕಾ ಮಂದಣ್ಣ ಸಹ ಜಾಗ್ರತೆ, ವಿವೇಚನೆಯಿಂದ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ, ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದು, ಇದರಿಂದ ಕೆಲ ಸಿನಿಮಾ ನಿರ್ದೇಶಕರು ಇದರಿಂದ ಅಸಮಾಧಾನಗೊಂಡಿದ್ದಾರೆ.
ಸಂಭಾವನೆ ವಿಚಾರದಿಂದ ದಿಲ್ ರಾಜು ನಿರ್ಮಾಣದ ಹೊಸ ಚಿತ್ರದಿಂದ ರಶ್ಮಿಕಾ ಹೊರಬಂದಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ. ರಶ್ಮಿಕಾ ಈ ಸಿನಿಮಾವನ್ನು ನಿರಾಕರಿಸುವ ಮೊದಲು ಮೂರು ಬಾರಿ ಕತೆ ಕೇಳಿದ್ದರಂತೆ. ಈ ಚಿತ್ರವನ್ನು ಶಶಿ ಅವರು ನಿರ್ದೇಶಿಸುತ್ತಿದ್ದು, ಅವರಿಗೆ ಇದು ಚೊಚ್ಚಲ ಚಿತ್ರ.
ಈ ಚಿತ್ರವನ್ನು ನಿರಾಕರಿಸುವುದರ ಜೊತೆಗೆ ಮತ್ತೊಂದು ಚಿನ್ನದಂತಹ ಅವಕಾಶವನ್ನು ರಶ್ಮಿಕಾ ಕಳೆದುಕೊಂಡಿದ್ದಾರೆ ಎಂಬ ಮಾತುಗಳೂ ಹರಿದಾಡುತ್ತಿವೆ.
ಶಾಹಿದ್ ಕಪೂರ್ ನಟನೆಯ ‘ಜೆರ್ಸಿ’ ರಿಮೇಕ್ ಚಿತ್ರದ ನಾಯಕಿಯಾಗಿ ರಶ್ಮಿಕಾ ನಟಿಸಲಿದ್ದಾರೆ, ಅವರು ಈ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಈ ಚಿತ್ರವನ್ನೂ ಸಹ ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ. ಹಾಗಾಗಿ ತಮ್ಮ ಸಿನಿಮಾದಿಂದ ರಶ್ಮಿಕಾ ಅವರನ್ನು ಕೈಬಿಡಬಹುದು ಎಂಬ ಮಾತು ಕೇಳಿಬರುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.