‘ಮೆಗಾಸ್ಟಾರ್’ ಚಿರಂಜೀವಿ ನಟನೆಯ ‘ಆಚಾರ್ಯ’ ಚಿತ್ರ ಕುತೂಹಲ ಹೆಚ್ಚಿಸಿದೆ. ಇದಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಕೊರಟಾಲ ಶಿವ. ಚಿರು ಜನ್ಮದಿನದಂದು ಬಿಡುಗಡೆಯಾದ ಈ ಚಿತ್ರದ ಹೊಸ ಪೋಸ್ಟರ್ ನೆಟ್ಟಿಗರಿಗೆ ಮೋಡಿ ಮಾಡಿತ್ತು. ಅಂದಹಾಗೆ ಇದರಲ್ಲಿ ಸಾಮಾಜಿಕ ಸಂದೇಶ ಸಾರುವ ಅತಿಥಿ ಪಾತ್ರವೊಂದು ಇದೆಯಂತೆ. ಹಿಂದೆ ಈ ಪಾತ್ರದಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಿಂದಲೇ ಕೇಳಿಬಂದಿತ್ತು. ಆದರೆ, ಆ ಪಾತ್ರದಲ್ಲಿ ನಟಿಸಲು ಮಹೇಶ್ ಬಾಬು ಆಸಕ್ತಿ ತೋರಿಸಲಿಲ್ಲ.
ಈಗ ಈ ಪಾತ್ರದಲ್ಲಿ ರಾಮ್ ಚರಣ್ ಕಾಣಿಸಿಕೊಳ್ಳಲಿದ್ದಾರಂತೆ. ಹಾಗಾಗಿ, ಅವರೊಟ್ಟಿಗೆ ಪರದೆ ಮೇಲೆ ರೊಮ್ಯಾನ್ಸ್ ಮಾಡಲು ನಿರ್ದೇಶಕರು ನಟಿ ರಶ್ಮಿಕಾ ಮಂದಣ್ಣ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಪ್ರಸ್ತುತ ರಶ್ಮಿಕಾ, ಸುಕುಮಾರ್ ನಿರ್ದೇಶನದ ‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಶೂಟಿಂಗ್ಗೂ ಅವರು ಸಿದ್ಧತೆ ನಡೆಸಿದ್ದಾರೆ. ಈ ನಡುವೆಯೇ ಸಮಯ ಹೊಂದಾಣಿಕೆ ಮಾಡಿಕೊಂಡು ‘ಆಚಾರ್ಯ’ದಲ್ಲೂ ರಾಮ್ ಚರಣ್ ಜೊತೆಗೆ ಸೊಂಟ ಬಳುಕಿಸಲಿದ್ದಾರೆ ಎಂಬ ಸುದ್ದಿಯಿದೆ.
ತ್ರಿಷಾ ಕೃಷ್ಣನ್ ಚಿತ್ರತಂಡದಿಂದ ಹೊರಹೋದ ಬಳಿಕ ಕಾಜಲ್ ಅಗರ್ವಾಲ್ ಅವರು, ಚಿರಂಜೀವಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಕೊನಿಡೇಲಾ ಪ್ರೊಡಕ್ಷನ್ ಕಂಪನಿ ಮತ್ತು ಮ್ಯಾಟ್ನಿ ಎಂಟರ್ಟೈನ್ಮೆಂಟ್ಸ್ನಡಿ ಇದಕ್ಕೆ ಬಂಡವಾಳ ಹೂಡಲಾಗಿದೆ.
ಇತ್ತೀಚೆಗೆ ನಿರ್ದೇಶಕ ಬಿ. ಗೋಪಾಲ್ ಅವರ ಸಹಾಯಕ ರಾಜೇಶ್ ಮಾಂಡೂರಿ, ‘ಅಚಾರ್ಯ ಸಿನಿಮಾದ ಕಥೆ ನನ್ನದು; ಇದನ್ನು ಕದಿಯಲಾಗಿದೆ’ ಎಂಬ ಗಂಭೀರ ಆರೋಪವನ್ನೂ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಮೈತ್ರಿ ಮೂವಿ ಮೇಕರ್ಸ್ ವಿರುದ್ಧವೂ ರಾಜೇಶ್ ಈ ಆರೋಪ ಹೊರಿಸಿದ್ದರು. ಆದರೆ, ‘ಆಚಾರ್ಯ’ ಚಿತ್ರತಂಡ ಸಾರಸಗಟಾಗಿ ಇದನ್ನು ತಳ್ಳಿಹಾಕಿತ್ತು. ಮೈತ್ರಿ ಮೂವಿ ಮೇಕರ್ಸ್ ಕೂಡ ಇದೊಂದು ಸುಳ್ಳಿನ ಆರೋಪ ಎಂದು ಪ್ರತಿಕ್ರಿಯಿಸಿತ್ತು.
‘ಗ್ರಾಮದ ದೇವಸ್ಥಾನಕ್ಕೆ ಸೇರಿದ ಜಮೀನಿನ ಕಬಳಿಕೆಯಾಗುತ್ತಿದೆ. ಈ ಭೂ ಮಾಫಿಯಾ ವಿರುದ್ಧ ಹೋರಾಟ ನಡೆಸಿದ ಊರಿನ ಮುಖಂಡನ ಕೊಲೆಯಾಗುತ್ತದೆ. ಕೊನೆಗೆ, ಆತನ ಪುತ್ರ ಮಾಫಿಯಾವನ್ನು ಮಟ್ಟಹಾಕುವುದೇ ಇದರ ಕಥೆ’ ಎಂದು ರಾಜೇಶ್ ಅವರೇ ಮಾಧ್ಯಮದವರ ಮುಂದೆ ‘ಆಚಾರ್ಯ’ನ ಕಥೆಯ ಎಳೆಯನ್ನು ಬಿಚ್ಚಿಟ್ಟಿದ್ದರು. ಇದಕ್ಕೆ ಪೂರಕ ಎಂಬಂತೆ ದೇಗುಲದ ಮುಂದೆ ಚಿರಂಜೀವಿ ಕೈಯಲ್ಲಿ ಚಾಕು ಹಿಡಿದು ನಿಂತಿರುವ ಹೊಸ ಪೋಸ್ಟರ್ ಕೂಡ ಬಿಡುಗಡೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.