ಬೆಂಗಳೂರು:'ಚಿತ್ರ ನಗರಿ ನಿರ್ಮಾಣ ಮಾಡುವ ವಿಚಾರದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯವರು ಕಿತ್ತಾಟ ನಡೆಸದಿದ್ದರೆ ಸಾಕು' ಎಂದು ಹಿರಿಯ ನಟ ರವಿಚಂದ್ರನ್ ಹೇಳಿದರು.
ಒಟ್ಟು ರೂ 500 ಕೋಟಿ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಚಿತ್ರ ನಗರಿ ನಿರ್ಮಾಣ ಮಾಡಲಾಗುವುದು ಎಂದು ರಾಜ್ಯ ಬಜೆಟ್ನಲ್ಲಿ ಘೋಷಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ರವಿಚಂದ್ರನ್, 'ಚಿತ್ರ ನಗರಿ ಎಲ್ಲಿಯಾದರೂ ನಿರ್ಮಾಣ ಆಗಲಿ. ಆದರೆ, ಮೊದಲು ಕೆಲಸ ಶುರುವಾಗಲಿ' ಎಂದರು.
'ಚಿತ್ರ ನಗರಿ ನಿರ್ಮಾಣದ ವಿಚಾರದಲ್ಲಿ ನಾವು ಇನ್ನೂ ಮಾತನಾಡುತ್ತ ಇದ್ದೇವೆ. ಮೊದಲು ಕೆಲಸ ಶುರು ಆಗಬೇಕು. ಇದನ್ನು ನಿರ್ಮಿಸಲು ರೂ 500 ಕೋಟಿ ಸಾಕಾಗಲಿಕ್ಕಿಲ್ಲ. ಆದರೆ ಕೆಲಸ ಶುರು ಮಾಡಲು ಇಷ್ಟು ಸಾಕು. ಈ ಕೆಲಸದಲ್ಲಿ ವಾಣಿಜ್ಯ ಮಂಡಳಿಯೇ ಮುಂದಾಳತ್ವ ವಹಿಸಬೇಕು' ಎಂದು ಹೇಳಿದರು.