ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಬಾಯ್‌ ಕೃಷ್ಣನ ಗಿರಿಕಥೆ!

Last Updated 1 ಜೂನ್ 2020, 9:18 IST
ಅಕ್ಷರ ಗಾತ್ರ

ರಿಷಬ್ ಶೆಟ್ಟಿ ಅವರು ನಾಯಕ ನಟನಾಗಿ ಕಾಣಿಸಿಕೊಂಡ ಮೊದಲ ಸಿನಿಮಾ ‘ಬೆಲ್ ಬಾಟಂ’. ಜಯತೀರ್ಥ ನಿರ್ದೇಶನದ ಈ ಚಿತ್ರವು ಕನ್ನಡ ಸಿನಿಮಾ ಪ್ರೇಮಿಗಳ ಮನಸ್ಸನ್ನು ಗೆದ್ದುಕೊಂಡಿತ್ತು ಕೂಡ. ಅದಾದ ನಂತರ, ರಿಷಬ್ ಅವರು ಯಾವ ಚಿತ್ರದಲ್ಲೂ ನಾಯಕ ನಟನಾಗಿ ಕಾಣಿಸಿಕೊಂಡಿಲ್ಲ.

ರಕ್ಷಿತ್ ಶೆಟ್ಟಿ ಅವರ ‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ಕೌಬಾಯ್‌ ಕೃಷ್ಣನ ಪಾತ್ರದಲ್ಲಿ ಒಂಚೂರು ಮಾತ್ರ ಎಂಬಂತೆ ಮುಖ ತೋರಿಸಿದ್ದ ರಿಷಬ್, ‘ಕಥಾಸಂಗಮ’ದಲ್ಲಿ ಭಿಕ್ಷುಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರು ನಾಯಕನಾಗಿ ಅಭಿನಯಿಸಲಿರುವ ಹೊಸ ಸಿನಿಮಾ ವಿವರಗಳು ಒಂದಿಷ್ಟು ದೊರೆತಿವೆ.

ಗಿರಿಕೃಷ್ಣ ಅವರು ನಿರ್ದೇಶಿಸುತ್ತಿರುವ ‘ಹರಿಕಥೆ ಅಲ್ಲ ಗಿರಿಕಥೆ’ ಎಂಬ ಚಿತ್ರದಲ್ಲಿ ರಿಷಬ್ ನಾಯಕ ನಟ. ಇದು ಹಾಸ್ಯದ ಹಳಿಯ ಮೇಲೆ ಸಾಗುವ, ಪಕ್ಕಾ ಮನರಂಜನೆಯ ಸಿನಿಮಾ ಎಂದು ಅವರು ಹೇಳಿದ್ದಾರೆ.

‘ಇಂದಿನ ತಲೆಮಾರಿನ ಯುವಕರಿಗೆ ಸಂಬಂಧಿಸಿದ ಕಥೆ ಈ ಚಿತ್ರದಲ್ಲಿ ಇರಲಿದೆ. ಅವರ ಹೆಣಗಾಟಗಳು, ಹುಡುಗಾಟಗಳನ್ನು ಹಾಸ್ಯಮಯವಾಗಿ ಹೇಳುವ ಸಿನಿಮಾ ಇದು. ನಿರ್ದೇಶಕ ಗಿರಿಕೃಷ್ಣ ಅವರು ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಒಂದು ಪಾತ್ರ ನಿಭಾಯಿಸಿದ್ದರು’ ಎಂದು ರಿಷಬ್ ತಿಳಿಸಿದರು.

ಗಿರಿಕೃಷ್ಣ ಅವರು ರಿಷಬ್ ಅವರಲ್ಲಿ ಈ ಚಿತ್ರದ ಕಥೆಯನ್ನು ಎರಡು ವರ್ಷಗಳ ಹಿಂದೆಯೇ ಹೇಳಿದ್ದರಂತೆ. ಅಂದಿನಿಂದಲೂ ಇದನ್ನು ಸಿನಿಮಾ ಮಾಡಬೇಕು ಎಂಬ ಆಲೋಚನೆ ಇಬ್ಬರಲ್ಲಿಯೂ ಇತ್ತು. ‘ಒಳ್ಳೆಯ ಮನರಂಜನೆಯ ವಸ್ತು ಈ ಸಿನಿಮಾದಲ್ಲಿ ಇರಲಿದೆ. ಗಿರಿಕೃಷ್ಣ ಅವರು ಕಥೆ ಹಾಗೂ ಪಾತ್ರವನ್ನು ಸೃಷ್ಟಿಸಿದ ಬಗೆ ನನಗೆ ಇಷ್ಟವಾಯಿತು. ಹಾಗಾಗಿ, ಈ ಪಾತ್ರವನ್ನು ಒಪ್ಪಿಕೊಂಡೆ’ ಎಂದರು ರಿಷಬ್.

‘ನಾನು ನಿಭಾಯಿಸಲಿರುವುದು ಒಬ್ಬ ತೀರಾ ಸಾಮಾನ್ಯ ವ್ಯಕ್ತಿಯ ಪಾತ್ರವನ್ನು. ಈ ಚಿತ್ರದಲ್ಲಿ ಇರುವಂಥ ಕಥೆಯ ಸಿನಿಮಾಗಳು, ಇಂತಹ ಪಾತ್ರಗಳು ನನಗೆ ಬಹಳ ಇಷ್ಟ. ನಾನು ಇದರಲ್ಲಿ ಅಭಿನಯಿಸಲು ಒಪ್ಪಿಕೊಳ್ಳುವುದಕ್ಕೆ ಇದೂ ಒಂದು ಕಾರಣ’ ಎಂದರು.

ಈ ಚಿತ್ರದಲ್ಲಿ ಇರುವುದು ಸಮಕಾಲೀನ ಕಥೆ. ಸಿನಿಮಾ ಚಿತ್ರೀಕರಣವು ಬೆಂಗಳೂರು ಸುತ್ತಮುತ್ತ ನಡೆಯಲಿದೆ.

ರಾಜ್‌ ಬಿ. ಶೆಟ್ಟಿ ನಿರ್ದೇಶನದ ‘ಗರುಡ ಗಮನ ವೃಷಭ ವಾಹನ’ ಚಿತ್ರದಲ್ಲಿ ರಿಷಬ್ ಅವರು ಖಳನ ಪಾತ್ರವನ್ನು ನಿಭಾಯಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT