ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರಾವಳಿ’ಯ ಬೆಡಗಿ ಸಂಪದಾ

Published 21 ಫೆಬ್ರುವರಿ 2024, 19:04 IST
Last Updated 21 ಫೆಬ್ರುವರಿ 2024, 19:04 IST
ಅಕ್ಷರ ಗಾತ್ರ

ಚಂದನವನದ ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ನಟನೆಯ 40ನೇ ಸಿನಿಮಾ ‘ಕರಾವಳಿ’ ಮೂಲಕ ಸಂಪದಾ ‘ದಕ್ಷಿಣ’ಳಾಗಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಿರುತೆರೆ ಮೂಲಕ ಬಣ್ಣದ ಲೋಕ ಪ್ರವೇಶಿಸಿದ್ದ ಸಂಪದಾಗೆ ನಾಯಕಿಯಾಗಿ ಇದು ಎರಡನೇ ಸಿನಿಮಾ. ಸಿನಿಮಾದೊಳಗೆ ಪಶುವೈದ್ಯೆಯಾಗಿ ಕಾಣಿಸಿಕೊಳ್ಳಲಿರುವ ‘ದಕ್ಷಿಣ’ ಸಿನಿಮಾರಂಗದಲ್ಲೇ ಹೆಜ್ಜೆಗಳನ್ನಿಡುವ ಆಸೆ ಹೊತ್ತಿದ್ದಾರೆ. ಸಿನಿಮಾ ಪುರವಣಿ ಜೊತೆಗೆ ಸಂಪದಾ ಮಾತನಾಡಿದ್ದಾರೆ.

‘ತಂದೆ ಮಂಡ್ಯ ಮೂಲದವರು; ತಾಯಿ ದೊಡ್ಡಬಳ್ಳಾಪುರದವರು. ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿಯೇ. ಇಂಟೀರಿಯರ್‌ ಡಿಸೈನಿಂಗ್‌ ಪದವಿ ಪಡೆದಿದ್ದೇನೆ. ಬಣ್ಣದ ಲೋಕದತ್ತ ಆಕರ್ಷಣೆ ಹುಟ್ಟಲು ಕಾರಣವಿದೆ. ಸಿನಿಮಾಗಳನ್ನು ನೋಡುವ ಆಸಕ್ತಿ ನಮ್ಮ ಕುಟುಂಬಕ್ಕೆ ಇತ್ತು. ಸಿನಿಮಾ ನೋಡಿ ಹೊರಬಂದಾಗ ಆಗುವಂತಹ ಭಾವನೆಗಳೇ ಈ ಕ್ಷೇತ್ರದತ್ತ ಹೆಜ್ಜೆ ಇಡಲು ನನಗೆ ಸ್ಫೂರ್ತಿಯಾಯಿತು ಎನ್ನಬಹುದು. 16ನೇ ವಯಸ್ಸಿನಲ್ಲೇ ‘ಮಿಥುನ ರಾಶಿ’ ಎನ್ನುವ ಧಾರಾವಾಹಿಯಲ್ಲಿ ನಟಿಸಿದೆ. ಹಲವರು ನನ್ನನ್ನು ಈಗಲೂ ಅದೇ ಪಾತ್ರದಿಂದ ಗುರುತಿಸುತ್ತಾರೆ’ ಎಂದು ಆರಂಭಿಕ ಹೆಜ್ಜೆಗಳನ್ನು ಸಂಪದಾ ಮೆಲುಕು ಹಾಕಿದರು. 

‘ಕಿರುತೆರೆ ಬಳಿಕ ‘ರೈಡರ್‌’ ಸಿನಿಮಾದಲ್ಲಿ ಪಾತ್ರವೊಂದನ್ನು ನಿಭಾಯಿಸಿದ್ದೆ. ಅನೀಶ್‌ ತೇಜೇಶ್ವರ್‌ ನಟನೆಯ ‘ಬೆಂಕಿ’ ಸಿನಿಮಾ ಮೂಲಕ ನಾಯಕಿಯಾಗಿ ಚಂದನವನದಲ್ಲಿ ನನ್ನ ಪಯಣ ಮುಂದುವರಿಸಿದೆ. ಆ ಸಂದರ್ಭದಲ್ಲಿ ಕೋವಿಡ್‌ ಚಿತ್ರರಂಗವನ್ನೇ ಸ್ಥಗಿತಗೊಳಿಸಿತ್ತು. ಇದಾದ ಬಳಿಕ ನಾನು ಚಿತ್ರರಂಗಕ್ಕೆ ಮರಳಲಿಲ್ಲ. ಶಿಕ್ಷಣ ನನ್ನ ಮೊದಲ ಆದ್ಯತೆಯಾಗಿದ್ದ ಕಾರಣ ಪದವಿ ಪೂರ್ಣಗೊಳಿಸಿದೆ. ನಂತರದಲ್ಲಿ ಕೆಲ ಪ್ರಾಜೆಕ್ಟ್‌ಗಳು ಬಂದರೂ ನನಗೆ ಇಷ್ಟವಾಗಲಿಲ್ಲ. ‘ಕರಾವಳಿ’ ನನ್ನನ್ನು ಸೆಳೆದ ಪ್ರಾಜೆಕ್ಟ್‌. ಇದರಲ್ಲಿ ನಾನು ಪಶುವೈದ್ಯೆಯಾಗಿ ನಟಿಸುತ್ತಿದ್ದೇನೆ. ನಗರ ಪ್ರದೇಶದಿಂದಲೇ ಹಳ್ಳಿಗೆ ಬಂದ ಪಾತ್ರವದು. ಹೀಗಾಗಿ ನಾನು ಈ ಪಾತ್ರವನ್ನು ನಿಭಾಯಿಸಬಲ್ಲೆ ಎನ್ನುವ ಭರವಸೆ ನನಗಿದೆ. ಆ ಭಾಗದ ಕನ್ನಡ ಭಾಷೆಯ ಕಲಿಕೆಗೆ ತರಬೇತಿ ಪಡೆದುಕೊಳ್ಳುತ್ತಿದ್ದೇನೆ. ಅಲ್ಲಿರುವವರ ಜೊತೆ ಕಾಲ ಕಳೆದಾಗ ಆ ಪಾತ್ರವನ್ನು ಇನ್ನಷ್ಟು ಸಮರ್ಥವಾಗಿ ನಿಭಾಯಿಸಬಲ್ಲೆ ಎನ್ನುವ ನಂಬಿಕೆ ಇದೆ’ ಎಂದರು. 

‘ಅನುಭವ ಯಾವುತ್ತೂ ಕಲಾವಿದನ ಬೆನ್ನೆಲುಬು. ಕ್ಯಾಮೆರಾ ಜೊತೆ ಒಡನಾಟ ನನಗಿದೆ. ಆದರೂ ‘ಕರಾವಳಿ’ಯಂತಹ ಭಿನ್ನ ಕಥಾಹಂದರ ಹೊಂದಿದ ಸಿನಿಮಾ ಮಾಡುವುದು ಎಂದರೆ ಖಂಡಿತಾ ಸವಾಲಿನ ವಿಷಯವೇ. ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿರುವಾಗ ನಮ್ಮ ಮೇಲಿನ ಜವಾಬ್ದಾರಿಯೂ ಹೆಚ್ಚುತ್ತದೆ. ಇದಕ್ಕೆ ಬೇಕಾಗಿರುವ ತಯಾರಿ ನಡೆದಿದೆ. ಈ ಚಿತ್ರದಲ್ಲಿ ನನಗೆ ಸ್ಕ್ರೀನ್‌ ಸ್ಪೇಸ್‌ ಹೆಚ್ಚು ಇದೆ. ಸುಮಾರು 25 ದಿನ ನನ್ನ ಪಾತ್ರದ ಚಿತ್ರೀಕರಣವಿದೆ. ‘ದಕ್ಷಿಣ’ ಎನ್ನುವುದು ಸರಳವಾದ ಪಾತ್ರವಲ್ಲ. ಕಥೆಯೊಂದಿಗೆ ಆಕೆಯ ಸಂಪರ್ಕ ಹೆಚ್ಚು. ಈ ಪಾತ್ರ ಮುಗ್ಧತೆಯನ್ನು ಬಯಸುತ್ತದೆ. ಈ ಹಿನ್ನೆಲೆಯಲ್ಲಿ ನನ್ನನ್ನು ಆಯ್ಕೆ ಮಾಡಲಾಗಿದೆ ಎಂದು ನಿರ್ದೇಶಕರು ಹೇಳಿದರು. ಚಿತ್ರೀಕರಣ ನಡೆದಂತೆ ಅದನ್ನು ನಾನು ಕಂಡುಕೊಳ್ಳಲು ಸಾಧ್ಯವಾಗಲಿದೆ’ ಎನ್ನುತ್ತಾರೆ ಸಂಪದಾ. 

‘ಶಿಕ್ಷಣ ಪೂರ್ಣಗೊಂಡಿದೆ. ಹೀಗಾಗಿ ಸಿನಿಮಾದತ್ತಲೇ ನನ್ನ ಚಿತ್ತವಿದೆ. ‘ಕರಾವಳಿ’ ಜೊತೆಗೆ ಇನ್ನೊಂದು ಸಿನಿಮಾ ಮಾಡುತ್ತಿದ್ದೇನೆ. ಆ ಚಿತ್ರತಂಡವೇ ಇದನ್ನು ಶೀಘ್ರದಲ್ಲೇ ಘೋಷಿಸಲಿದೆ’ ಎಂದು ಮಾತಿಗೆ ವಿರಾಮವಿತ್ತರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT