ಬೆಂಗಳೂರು: ನಟ, ರಾಜಕಾರಣಿ ಕೆ.ಶಿವರಾಮ್ ಗುರುವಾರ ನಗರದ ಎಚ್ಸಿಜಿ ಆಸ್ಪತ್ರೆಯಲ್ಲಿ ಹೃದಾಯಾಘಾತದಿಂದ ನಿಧನ ಹೊಂದಿದರು. 71 ವರ್ಷ ವಯಸ್ಸಿನ ಅವರಿಗೆ ಪತ್ನಿ, ಮೂವರು ಪುತ್ರಿಯರು ಇದ್ದಾರೆ.
‘ಶಿವರಾಮ್ ಅವರನ್ನು ಫೆಬ್ರವರಿ 3 ರಂದು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರು ದಿನಗಳ ಹಿಂದೆ ಅವರಿಗೆ ಹೃದಯಾಘಾತವಾಗಿತ್ತು. ಗುರುವಾರ ಮತ್ತೆ ಹೃದಯಾಘಾತವಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಸಂಜೆ ನಿಧನ ಹೊಂದಿದ್ದಾರೆ’ ಎಂದು ಅವರ ಅಳಿಯ ಪ್ರದೀಪ್ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಐಎಎಸ್ ಪರೀಕ್ಷೆ ಪೂರೈಸಿದ ಮೊದಲಿಗ ಎಂಬ ಖ್ಯಾತಿ ಗಳಿಸಿದ್ದ ಅವರು, 1993ರಲ್ಲಿ ಅಧಿಕಾರದಲ್ಲಿರುವಾಗಲೇ ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ‘ಪ್ರತಿಭಟನೆ’, ‘ಖಳನಾಯಕ’, ‘ಯಾರಿಗೆ ಬೇಡ ದುಡ್ಡು’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. 2017ರಲ್ಲಿ ಬಿಡುಗಡೆಯಾದ ‘ಟೈಗರ್’ ಅವರ ಕೊನೆಯ ಸಿನಿಮಾ.
ಛಲವಾದಿ ಮಹಾಸಂಘದ ಸಂಸ್ಥಾಪಕರಾಗಿದ್ದ ಅವರು, ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದರು. ‘ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದು ಕುಟುಂಬ ವರ್ಗ ತಿಳಿಸಿದೆ.