ರಘುವಿಜಯ ಕಸ್ತೂರಿ ನಿರ್ದೇಶನದ ‘ಶಿವ’ ಚಿತ್ರವು ಫೆಬ್ರುವರಿ 21ರ ಶಿವರಾತ್ರಿ ಸಂಭ್ರಮದ ಹೊತ್ತಿನಲ್ಲಿ ತೆರೆಗೆ ಬರಲು ಸಜ್ಜಾಗಿದೆ. ‘ಇದರಲ್ಲಿ ಹಳ್ಳಿಯಲ್ಲಿ ನಡೆಯುವ ಪ್ರೇಮಕಥೆ ಇದೆ. ಹಾಗೆಯೇ, ಸ್ಥಳೀಯ ರೌಡಿಸಂ ಕುರಿತ ಕಥೆಯೂ ಇದರಲ್ಲಿದೆ’ ಎಂದು ಹೇಳುತ್ತಾರೆ ರಘುವಿಜಯ. ಅವರು ಈ ಚಿತ್ರದ ನಾಯಕ ನಟ ಕೂಡ ಹೌದು.
ಮನೆಮಂದಿಯೆಲ್ಲ ಒಟ್ಟಾಗಿ ಕುಳಿತು, ಯಾವ ಮುಜುಗರವೂ ಇಲ್ಲದೆ ವೀಕ್ಷಿಸಬಹುದಾದ ಚಿತ್ರ ಇದು. ಎಲ್ಲ ವರ್ಗಗಳ ಜನರಿಗೂ ಈ ಸಿನಿಮಾ ಇಷ್ಟವಾಗುತ್ತದೆ. ಮಂಡ್ಯ ಸೊಗಡಿನ ಕನ್ನಡ ಇದರಲ್ಲಿ ಬಳಕೆಯಾಗಿದೆ ಎಂಬ ವಿವರಣೆಯನ್ನೂ ಅವರು ನೀಡುತ್ತಾರೆ.
ಧರಣಿ ಅವರು ಈ ಚಿತ್ರದ ನಾಯಕಿ. ‘ಹಳ್ಳಿಯ ಹಿನ್ನೆಲೆಯಲ್ಲಿ ನಡೆಯುವ ಶುದ್ಧ ಪ್ರೀತಿಯ ಕಥೆಯೊಂದು ಈ ಚಿತ್ರದಲ್ಲಿ ಇದೆ. ನಾನು ಹೋಮ್ಲಿ ಆಗಿರುವ ಶಿಕ್ಷಕಿಯ ಪಾತ್ರ ನಿಭಾಯಿಸಿದ್ದೇನೆ’ ಎಂದು ಅವರು ತಮ್ಮ ಪಾತ್ರದ ಕುರಿತು ವಿವರಣೆ ನೀಡಿದರು. ಚಿತ್ರದ ನಿರ್ಮಾಣದ ಹೊಣೆಯನ್ನೂ ರಘುವಿಜಯ ಅವರೇ ಹೊತ್ತುಕೊಂಡಿದ್ದಾರೆ.