ಚಿನ್ಮಯಿ ಹಾಗೂ ಅವರ ತಾಯಿ ನಿತ್ಯಾನಂದ ಸ್ವಾಮೀಜಿಯಿಂದ ಹೂವು ಸ್ವೀಕರಿಸುತ್ತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಇದು ಎಡಿಟ್ ಮಾಡಿದ ಫೋಟೊ ಎಂದು ಚಿನ್ಮಯಿ ಸ್ಪಷ್ಟಣೆಯನ್ನೂ ನೀಡಿದ್ದಾರೆ.
‘ಇದೊಂದು ನಕಲಿ ಫೋಟೊ ಎಂದು ಹೇಳಿದರೂ,ಈ ಅಭಿಮಾನಿಗಳು ಯಾಕೆ ಪದೇ ಪದೇ ಈ ಫೋಟೊವನ್ನು ಪ್ರಕಟಿಸುತ್ತಿದ್ದಾರೊ ತಿಳಿಯುತ್ತಿಲ್ಲ. ಇದನ್ನು ಸುಮ್ಮನೆ ಮಾಡುತ್ತಿದ್ದಾರೊ ಅಥವಾ ಯಾರಾದರು ದುಡ್ಡುಕೊಟ್ಟು ಮಾಡಿಸುತ್ತಾರೊ?’ ಎಂದು ಚಿನ್ಮಯಿ ಖಾರವಾಗಿ ಟ್ವೀಟ್ ಮಾಡಿದ್ದಾರೆ.
ಈ ಫೋಟೊ ಪೋಸ್ಟ್ ಮಾಡಿದ ವ್ಯಕ್ತಿಯ ಟ್ವಿಟ್ಟರ್ ಖಾತೆಯ ಲಿಂಕ್ ಅನ್ನು ಅವರು ಹಾಕಿದ್ದಾರೆ. ಆದರೆ, ಈಗ ಆ ಪೋಸ್ಟ್ ಡಿಲಿಟ್ ಆಗಿದೆ. ಚಿನ್ಮಯಿ ಅವರ ಈ ಪೋಸ್ಟ್ಗೆ ಸಾಕಷ್ಟು ಮಂದಿ ಕಮೆಂಟ್ ಮಾಡಿದ್ದು, ಸೈಬರ್ಗೆ ದೂರು ನೀಡಿ ಎಂದು ಸಲಹೆ ನೀಡಿದ್ದಾರೆ.
ತಮಿಳಿನ ಖ್ಯಾತ ಗಾಯಕಿ ಚಿನ್ಮಯಿ ಅವರು ಕನ್ನಡ ಸಿನಿಮಾಗಳಿಗೂ ಹಾಡಿದ್ದಾರೆ. ಈ ಹಿಂದೆ ರಘು ದೀಕ್ಷಿತ್ ಹಾಗೂ ತಮಿಳು ಸಾಹಿತಿ ವೈರಮುತ್ತು ವಿರುದ್ಧ ಮೀ–ಟೂ ಆರೋಪ ಮಾಡಿ ಸುದ್ದಿಯಲ್ಲಿದ್ದರು. ಕೆಲ ತಿಂಗಳುಗಳ ಹಿಂದೆಸಾಮಾಜಿಕ ಜಾಲಾತಾಣದಲ್ಲಿ ಒಬ್ಬ ವ್ಯಕ್ತಿ ಬೆತ್ತಲೆ ಫೋಟೋಗಳನ್ನು ಕಳುಹಿಸುವಂತೆ ಚಿನ್ಮಯಿ ಅವರನ್ನು ಕೇಳಿದ್ದ. ಆತನಿಗೆ ಯಾವುದೇ ವಿರೋಧ ವ್ಯಕ್ತಪಡಿಸದೆ ಶಾಕ್ ಆಗುವಂತೆ ಚಿನ್ಮಯಿ ಉತ್ತರ ನೀಡಿದ್ದು ಸುದ್ದಿಗೆ ಗ್ರಾಸವಾಗಿತ್ತು.