ರಾಜ್ ಬಿ.ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಹೊಸ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರತಂಡ ಸೋಮವಾರ ಕುಂಬಳಕಾಯಿ ಒಡೆದಿದೆ. ನಟಿ ರಮ್ಯಾ ಅವರ ನಿರ್ಮಾಣ ಸಂಸ್ಥೆ ‘ಆ್ಯಪಲ್ ಬಾಕ್ಸ್ ಸ್ಟುಡಿಯೋಸ್’ ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಅಕ್ಟೋಬರ್ ಮೊದಲ ವಾರದಲ್ಲಷ್ಟೇ ಈ ಸಿನಿಮಾ ಸೆಟ್ಟೇರಿತ್ತು. ಊಟಿಯಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದೆ. ಅ.7ರಂದು ಟ್ವೀಟ್ ಮಾಡಿದ್ದ ರಮ್ಯಾ, ‘ರಾಜ್ ಇನ್ನೂ ಈ ಚಿತ್ರದ ಸ್ಕ್ರಿಪ್ಟ್ ಕೆಲಸದಲ್ಲಿದ್ದಾರೆ’ ಎಂದಿದ್ದರು. ಇದಾಗಿ ತಿಂಗಳು ಉರುಳುವುದರೊಳಗೆ ಚಿತ್ರದ ಚಿತ್ರೀಕರಣವೇ ಪೂರ್ಣಗೊಂಡಿರುವುದು ಜನರಲ್ಲಿ ಆಶ್ಚರ್ಯ ಮೂಡಿಸಿದೆ. ಈ ಬಗ್ಗೆ ಟ್ವೀಟ್ ಮೂಲಕವೇ ಪ್ರಶ್ನಿಸಿರುವ ಹಲವರು, ‘ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿತೇ ಅಥವಾ ಚಿತ್ರೀಕರಣವೇ ಪೂರ್ಣಗೊಂಡಿತೇ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಮ್ಯಾ, ಇಡೀ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ ಎಂದು ಉತ್ತರಿಸಿದ್ದಾರೆ.
ಈ ಸಿನಿಮಾ ಆ್ಯಪಲ್ ಬಾಕ್ಸ್ ಸ್ಟುಡಿಯೋಸ್ನ ಮೊದಲ ಚಿತ್ರ. ಲೈಟರ್ ಬುದ್ಧ ಫಿಲ್ಮ್ಸ್ ಸಹಯೋಗದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಚಿತ್ರದಲ್ಲಿ ರಾಜ್ ಬಿ. ಶೆಟ್ಟಿಗೆ ರಮ್ಯಾ ಜೋಡಿಯಾಗಬೇಕಿತ್ತು. ಈ ಚಿತ್ರದ ಮೂಲಕವೇ ತಾವು ಚಂದನವನಕ್ಕೆ ಕಂಬ್ಯಾಕ್ ಮಾಡುತ್ತಿರುವುದಾಗಿ ರಮ್ಯಾ ಘೋಷಿಸಿದ್ದರು. ಆದರೆ ಕೊನೇ ಕ್ಷಣದಲ್ಲಿ, ‘ಹೊಸ ಮುಖವೊಂದು ಈ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಲಿದೆ’ ಎನ್ನುವ ಕಾರಣ ನೀಡಿ ಈ ಸಿನಿಮಾದಿಂದ ರಮ್ಯಾ ಹೊರ ಹೆಜ್ಜೆ ಇಟ್ಟಿದ್ದರು. ನಂತರದಲ್ಲಿ ನಾಯಕಿಯಾಗಿ ನಟಿ ಸಿರಿ ರವಿಕುಮಾರ್ ಚಿತ್ರತಂಡ ಸೇರಿಕೊಂಡಿದ್ದರು.
ಚಿತ್ರಕ್ಕೆ ಕಥೆ ರಾಜ್ ಬಿ. ಶೆಟ್ಟಿ ಅವರದ್ದೇ. ರಾಜ್ ಅವರ ‘ಗರುಡ ಗಮನ ವೃಷಭ ವಾಹನ’ ಚಿತ್ರದ ತಾಂತ್ರಿಕ ತಂಡವೇ ಇಲ್ಲಿ ಕೆಲಸ ಮಾಡಲಿದೆ. ಮಿಥುನ್ ಮುಕುಂದನ್ ಅವರ ಸಂಗೀತ, ಪ್ರವೀಣ್ ಶ್ರೀಯಾನ್ ಅವರ ಸಂಗೀತ ಈ ಚಿತ್ರಕ್ಕಿದೆ. ಬಾಲಾಜಿ ಮನೋಹರ್, ರೇಖಾ ಕೂಡ್ಲಗಿ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಲಿಂಕ್:
And it's a wrap for Swathi Mutthina Male Haniye @divyaspandana @RajbShettyOMK @SiriRavikumar#SMMH pic.twitter.com/4buzgRmw1Y
— Applebox Studios (@StudiosApplebox) November 14, 2022
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.