ಹೈದರಾಬಾದ್:ಸತತ ಸರಣಿ ಸೋಲಿನಿಂದ ದಿಕ್ಕೆಟ್ಟಿದ್ದ ತೆಲುಗು ನಟ ನಿತಿನ್ ಗೆ ಹೊಸ ಹುರುಪು ತುಂಬಿದ್ದು 'ಭೀಷ್ಮ' ಚಿತ್ರ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಸೂಪರ್ ಹಿಟ್ ಆಗಿದ್ದು ಅವರ ಅಭಿಮಾನಿಗಳ ಮನದಲ್ಲೂ ಸಂಭ್ರಮದ ಅಲೆಯನ್ನು ಉಕ್ಕಿಸಿದೆ. ರೊಮ್ಯಾಂಟಿಕ್ ಕಾಮಿಡಿ ಬೆರೆತ ಇದರಲ್ಲಿ ಅವರಿಗೆ ಜೋಡಿಯಾಗಿದ್ದು ಕನ್ನಡತಿ ರಶ್ಮಿಕಾ ಮಂದಣ್ಣ.
'ಭೀಷ್ಮ' ಚಿತ್ರದ ಗೆಲುವಿನ ಸಂಭ್ರಮದಲ್ಲಿಯೇ ಅವರು ತಮ್ಮ ಬಹುಕಾಲದ ಗೆಳತಿ ಶಾಲಿನಿ ಜೊತೆಗೆ ಸಪ್ತಪದಿ ತುಳಿಯಲು ನಿರ್ಧರಿಸಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ 16ರಂದು ದುಬೈಯಲ್ಲಿ ಈ ಇಬ್ಬರು ವೈವಾಹಿಕ ಜೀವನಕ್ಕೆ ಅಡಿ ಇಡಬೇಕಿತ್ತು. ಬಳಿಕ ಹೈದರಾಬಾದ್ ನಲ್ಲಿ ಎರಡೂ ಕುಟುಂಬಗಳು ಅದ್ದೂರಿಯಾಗಿ ಆರತಕ್ಷತೆ ಹಮ್ಮಿಕೊಳ್ಳಲು ನಿರ್ಧರಿಸಿದ್ದವು.
ಆದರೆ, ಕೊರೊನಾ ಸೋಂಕಿನ ಭೀತಿಯು ಈ ಇಬ್ಬರ ಮದುವೆಗೂ ತಟ್ಟಿದೆ. ಹಾಗಾಗಿ, ವಿವಾಹ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಈ ಬಗ್ಗೆ ನಿತಿನ್ ಅವರೇ ಅಧಿಕೃತವಾಗಿ ಟ್ವಿಟರ್ ನಲ್ಲಿ ದೃಢಪಡಿಸಿದ್ದಾರೆ. ಮದುವೆ ಯಾವಾಗ ನಡೆಯಲಿದೆ ಎಂಬುದನ್ನು ಅವರು ತಿಳಿಸಿಲ್ಲ. ಕೊರೊನಾ ಭೀತಿ ಕಡಿಮೆಯಾದ ಬಳಿಕ ಈ ಜೋಡಿ ಹಸೆಮಣೆ ಏರುವ ನಿರೀಕ್ಷೆಯಿದೆ.
ಎಂಟು ವರ್ಷಗಳ ಹಿಂದೆ ಈ ಜೋಡಿ ಪರಸ್ಪರ ಭೇಟಿಯಾಗಿತ್ತು. ಇಬ್ಬರ ನಡುವಿನ ಸ್ನೇಹ ಪ್ರೀತಿಯಾಗಿ ಪರಿವರ್ತನೆಯಾಗಿತ್ತು. ಈ ಪ್ರೀತಿಯ ಗುಟ್ಟು ಬಹಿರಂಗವಾಗದಂತೆ ಇಬ್ಬರೂ ಕಾಪಾಡಿಕೊಂಡಿದ್ದರು.
'ಮಹಾಮಾರಿ ಕೊರೊನಾ ವಿರುದ್ಧ ಎಲ್ಲರೂ ಜಾಗೃತರಾಗಬೇಕಿದೆ. ಸರ್ಕಾರ ಸೂಚಿಸಿರುವ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಎಲ್ಲರ ಜವಾಬ್ದಾರಿ. ಮನೆಯಲ್ಲಿಯೇ ಇದ್ದು ಸೋಂಕು ಹರಡದಂತೆ ಮುಂಜಾಗ್ರತೆವಹಿಸಬೇಕು' ಎಂದು ನಿತಿನ್ ಅಭಿಮಾನಿಗಳಿಗೆ ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.