ಚಂದನವನದಲ್ಲಿ ಇಂದು (ಏ. 29) ಮೂರು ಚಿತ್ರಗಳು ತೆರೆ ಕಾಣುತ್ತಿವೆ. ಕೆಜಿಎಫ್ – 2 ಆರ್ಭಟ ತಿಳಿಯಾಗುತ್ತಿದ್ದಂತೆಯೇ ಹೊಸ ಚಿತ್ರಗಳು ನಿಧಾನಕ್ಕೆ ಚಿತ್ರಮಂದಿರ ಪ್ರವೇಶಿಸಿವೆ.
ಅಜಯ್ ರಾವ್ ಅವರನ್ನು ಹಾಸ್ಯ ಪಾತ್ರದಲ್ಲಿ ತೋರಿಸಿದ ‘ಶೋಕಿವಾಲ’ ಇಂದು ತೆರೆಗೆ ಬಂದಿದ್ದಾನೆ.ಕ್ರಿಸ್ಟಲ್ ಪಾರ್ಕ್ ಸಿನಿಮಾ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಹಾಗೂ ಕಿಶೋರ್ ಅವರು‘ಶೋಕಿವಾಲ’ ನಿರ್ಮಿಸಿದ್ದಾರೆ.
ಜಾಕಿ ನಿರ್ದೇಶನದ ಈ ಚಿತ್ರದಲ್ಲಿ ಅಜಯ್ ರಾವ್ ನಾಯಕ. ಸಂಜನಾ ಆನಂದ್ ನಾಯಕಿ.ಪಕ್ಕಾ ಹಳ್ಳಿ ಸೊಗಡಿನ ಈ ಚಿತ್ರದಲ್ಲಿ ಶರತ್ ಲೋಹಿತಾಶ್ವ, ಗಿರೀಶ್ ಶಿವಣ್ಣ, ತಬಲಾನಾಣಿ, ಮುನಿರಾಜ್, ಪ್ರಮೋದ್ ಶೆಟ್ಟಿ, ಅರುಣ ಬಾಲರಾಜ್, ವಾಣಿ, ಚಂದನ, ಲಾಸ್ಯ, ನಾಗರಾಜಮೂರ್ತಿ ನಟಿಸಿದ್ದಾರೆ.
‘ಮೇಲೊಬ್ಬ ಮಾಯಾವಿ’
ನಟ ದಿವಂಗತ ಸಂಚಾರಿ ವಿಜಯ್ ನಟನೆಯ ಕೊನೆಯ ಚಿತ್ರ, ‘ಮೇಲೊಬ್ಬ ಮಾಯಾವಿ’ ಸಿನಿಮಾ ಇಂದು ಬಿಡುಗಡೆಯಾಗಿದೆ. ಹರಳು ಮಾಫಿಯಾ ಕಥಾಹಂದರದ ಈ ಚಿತ್ರದಲ್ಲಿ ಬಿಗ್ಬಾಸ್ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ಖಳನಾಯಕನಾಗಿ ಬಣ್ಣಹಚ್ಚಿದ್ದಾರೆ.
ಬಿ.ನವೀನ್ ಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ,‘ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿಭಾಗದ ಪುಷ್ಪಗಿರಿ ಅಭಯಾರಣ್ಯ ಭಾಗದಲ್ಲಿ ನಡೆಯುತ್ತಿರುವ ಹರಳು ಕಲ್ಲು ದಂಧೆಯ ಕರಾಳಮುಖವನ್ನು ‘ಇರುವೆ’ ಎಂಬ ತಮ್ಮ ಪಾತ್ರದ ಮುಖೇನ ಸಂಚಾರಿ ವಿಜಯ್ ಬಿಚ್ಚಿಡಲಿದ್ದಾರೆ.ರಂಗಭೂಮಿ ಪ್ರತಿಭೆ ಅನನ್ಯ ಶೆಟ್ಟಿ ಈ ಚಿತ್ರದ ನಾಯಕಿ.
‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’
ತಾರಾ ಜೋಡಿ ದಿಗಂತ್ - ಐಂದ್ರಿತಾ ರೇ ನಟಿಸಿರುವ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರ ಇಂದು ತೆರೆಗೆ ಬಂದಿದೆ. ನಟಿ ರಂಜನಿ ರಾಘವನ್ ಮತ್ತಿತರರು ತಾರಾಗಣದಲ್ಲಿದ್ದಾರೆ. ವಿನಾಯಕ ಕೋಡ್ಸರ ಈ ಚಿತ್ರದ ನಿರ್ದೇಶಕರು.