‘ತ್ರಿವಿಕ್ರಮ’ –ನಟ ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್ ನಟನೆಯ ಮೊದಲ ಚಿತ್ರ. ಈ ಸಿನಿಮಾ ನಿರ್ದೇಶಿಸುತ್ತಿರುವುದು ಸಹನಾಮೂರ್ತಿ. ಇದೊಂದು ಪಕ್ಕಾ ಲವ್ಸ್ಟೋರಿ ಚಿತ್ರ. ಜೊತೆಗೆ ಸೆಂಟಿಮೆಂಟ್, ಎಮೋಷನ್, ಸ್ನೇಹದ ಸುತ್ತ ಕಥೆ ಹೆಣೆಯಲಾಗಿದೆಯಂತೆ. ಕಾಮಿಡಿಯೂ ಹದವಾಗಿ ಬೆರೆತಿದೆ.
ಬೆಂಗಳೂರು, ಉಡುಪಿ, ಕೊಡಚಾದ್ರಿ, ತೀರ್ಥಹಳ್ಳಿ, ಸಾಗರದ ಸುತ್ತಮುತ್ತ ಮೂರನೇ ಹಂತದ ಶೂಟಿಂಗ್ ಮುಗಿಸಿರುವ ಚಿತ್ರತಂಡ ಈಗ ನಾಲ್ಕನೇ ಹಂತದ ಚಿತ್ರೀಕರಣಕ್ಕಾಗಿ ರಾಜಸ್ಥಾನಕ್ಕೆ ಹಾರಿದೆ. ಅಲ್ಲಿನ ಜೋಧ್ಪುರದಲ್ಲಿ ಕಳೆದ 10 ದಿನಗಳಿಂದಲೂ ಚಿತ್ರತಂಡ ಶೂಟಿಂಗ್ನಲ್ಲಿ ತೊಡಗಿಸಿಕೊಂಡಿದೆ.
ಅಲ್ಲಿನ ಮರಳುಗಾಡು ಸೇರಿದಂತೆ ಸುಂದರ ತಾಣಗಳಲ್ಲಿ ಹಾಡು ಮತ್ತು ಚಿತ್ರದ ಇತರೇ ಸನ್ನಿವೇಶಗಳ ಶೂಟಿಂಗ್ ನಡೆಯುತ್ತಿದೆ. ನಾಯಕ ವಿಕ್ರಮ್, ಬಾಲಿವುಡ್ ನಟ ರೋಹಿತ್ ರಾಯ್, ನಟಿ ಆಕಾಂಕ್ಷಾ ಹಾಗೂ ಸಾಧುಕೋಕಿಲ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ. ಈ ಚಿತ್ರೀಕರಣ ಮುಗಿದ ಬಳಿಕ ತ್ರಿವಿಕ್ರಮನ ಸಂಚಾರ ಕಾಶ್ಮೀರದತ್ತ ಹೊರಡಲಿದೆ.
ಚಿತ್ರದ ಮೊದಲಾರ್ಧದಲ್ಲಿ ನಗಿಸಲು ಚಿಕ್ಕಣ್ಣ ಇದ್ದಾರೆ. ದ್ವಿತೀಯಾರ್ಧದಲ್ಲಿ ಸಾಧುಕೋಕಿಲ ಕಾಮಿಡಿ ಮೋಡಿ ಮಾಡಲಿದ್ದಾರಂತೆ. ಇದು ಕುಟುಂಬ ಸಮೇತ ಕುಳಿತು ನೋಡುವ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ.
ಗೌರಿ ಎಂಟರ್ಟೈನರ್ಸ್ ಲಾಂಛನದಡಿ ಸೋಮಣ್ಣ ಮತ್ತು ಸುರೇಶ್ ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದೆ. ರಾಜು ಸುಂದರಂ, ಪ್ರಭುದೇವ, ಕಲೈ ನೃತ್ಯ ನಿರ್ದೇಶಿಸಿದ್ದಾರೆ. ನಾಗು ಅವರ ಕಲಾ ನಿರ್ದೇಶನವಿದೆ.