ಆ.20ರಂದು ‘ಸಲಗ’ ಹಾಗೂ ‘ನಿನ್ನ ಸನಿಹಕೆ’, ಗಣೇಶ ಚತುರ್ಥಿಗೆ(ಸೆ.10) ‘ಭಜರಂಗಿ–2’, ಸೆ.24ಕ್ಕೆ ಡಾಲಿ ಧನಂಜಯ್ ನಟನೆಯ ‘ಬಡವ ರಾಸ್ಕಲ್’ ಚಿತ್ರವು ಬಿಡುಗಡೆಯಾಗಲಿದೆ. ಪ್ರಸ್ತುತ ರಾಜ್ಯದ ಚಿತ್ರಮಂದಿರಗಳಲ್ಲಿ ಶೇ 50ರಷ್ಟು ಪ್ರೇಕ್ಷಕರಿಗಷ್ಟೇ ಅವಕಾಶವಿದ್ದು, ನೆರೆ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸರ್ಕಾರವು ಈ ನಿರ್ಬಂಧವನ್ನು ಮತ್ತಷ್ಟು ಸಡಿಲಿಸುವ ಕುರಿತು ಇನ್ನೂ ನಿರ್ಧರಿಸಿಲ್ಲ. ಹೊಸ ಸಚಿವ ಸಂಪುಟ ರಚನೆಯಾಗಿರುವುದರಿಂದ ಸರ್ಕಾರವು ಹೊಸ ಕೋವಿಡ್ ಕಾರ್ಯಪಡೆಯನ್ನು ರಚಿಸಬೇಕಷ್ಟೇ. ಇಲ್ಲಿ ಚರ್ಚೆಯಾದ ಬಳಿಕವಷ್ಟೇ ಪ್ರೇಕ್ಷಕರ ಸಂಖ್ಯೆಯ ಕುರಿತು ಮುಖ್ಯಮಂತ್ರಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ. ವಾರದ ಹಿಂದೆ ಚಿತ್ರಮಂದಿರಗಳಲ್ಲಿ ಶೇ.100 ಆಸನಗಳ ಭರ್ತಿಗೆ ಅವಕಾಶ ನೀಡಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತ್ತು.