ಚಿತ್ರ: ಅಗ್ರಸೇನಾ
ನಿರ್ದೇಶನ: ಮುರುಗೇಶ್ ಕಣ್ಣಪ್ಪ
ನಿರ್ಮಾಣ: ಮಮತಾ ಜಯರಾಮ್ ರೆಡ್ಡಿ
ತಾರಾಗಣ: ಅಮರ್ ವಿರಾಜ್ ರಚನಾ ದಶರಥ್ ಅಗಸ್ತ್ಯ ಬೆಳಗೆರೆ ರಾಮಕೃಷ್ಣ ಮತ್ತಿರರು
ಕಥೆಯಲ್ಲಿನ ಒಂದು ಕಾಲ್ಪನಿಕ ಊರು ರಾಮದೇವಪುರ. ಊರಿನ ಜನರ್ಯಾರೂ ಪಟ್ಟಣಕ್ಕೆ ವಲಸೆ ಹೋಗಬಾರದು. ಊರನಲ್ಲಿದ್ದುಕೊಂಡೇ ಸುಖವಾಗಿ ಬದುಕಬೇಕೆಂದು ಕನಸು ಕಾಣುವ ಊರಿನ ಮುಖಂಡ ಸೂರಪ್ಪ. ಮಗ ಅಗಸ್ತ್ಯನಿಂದ(ಚಿತ್ರದ ನಾಯಕ) ಎಂದಿಗೂ ಪಟ್ಟಣಕ್ಕೆ ಹೋಗುವುದಿಲ್ಲ ಎಂದು ಮಾತು ತೆಗೆದುಕೊಳ್ಳುತ್ತಾನೆ. ಅನಾರೋಗ್ಯಕ್ಕೆ ತುತ್ತಾಗಿರುವ ತಂದೆಯನ್ನು ಆಸ್ಪತ್ರೆಗೆ ಸೇರಿಸಲೂ ಪಟ್ಟಣಕ್ಕೆ ಹೋಗದಂತಹ ಸ್ಥಿತಿ ಕೊಟ್ಟ ಮಾತಿನಿಂದಲೇ ಮಗನಿಗೆ ಎದುರಾಗುತ್ತಿದೆ. ಆಗ ಮತ್ತೊಬ್ಬ ನಾಯಕ ಅಮರ್ ಅಗಸ್ತ್ಯನ ಬದುಕಿನಲ್ಲಿ ಪ್ರವೇಶ ಪಡೆಯುತ್ತಾನೆ. ಅಗಸ್ತ್ಯನ ತಂದೆಯನ್ನು ಪಟ್ಟಣದ ಆಸ್ಪತ್ರೆಗೆ ಸೇರಿಸಿ ಯೋಗಕ್ಷೇಮ ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಳ್ಳುತ್ತಾನೆ.
ಕಂಡವರ ದುಡ್ಡಿನಲ್ಲಿ ಮಜ ಮಾಡುವ ಪ್ರವೃತ್ತಿಯ ನಾಯಕ ಅಮರ್ ಕೈಗೆ ಸಿಕ್ಕ ಅಗಸ್ತ್ಯನ ತಂದೆಯ ಬದುಕು ಏನಾಗುತ್ತದೆ, ಕೊನೆಗೆ ಅಮರ್ ಕಲಿಯುವ ಪಾಠವೇನು ಎಂಬುದೇ ಕಥೆ. ಕೆಲಸದಲ್ಲಿದ್ದುಕೊಂಡು ಹೆತ್ತ ತಂದೆ, ತಾಯಿಯ ಆರೋಗ್ಯ ನೋಡಿಕೊಳ್ಳಲು ಮೂರನೆಯವರನ್ನು ನೇಮಿಸುವ ಹಲವರಿಗೆ ನೀತಿ ಪಾಠದಂತಿದೆ ಚಿತ್ರಕಥೆ. ಅನವಶ್ಯಕ ಹಾಡುಗಳು, ಹೊಡೆದಾಟಗಳನ್ನೆಲ್ಲ ಪಕ್ಕಕ್ಕಿಟ್ಟಿದ್ದರೆ ಒಂದೊಳ್ಳೆ ಕಥೆಯಾಗಿ ಪ್ರೇಕ್ಷಕರನ್ನು ಭಾವುಕ ಪ್ರಪಂಚಕ್ಕೆ ಕರೆದುಕೊಂಡು ಹೋಗಬಲ್ಲ ಎಲ್ಲ ಅವಕಾಶವೂ ನಿರ್ದೇಶಕರಿಗಿತ್ತು.
ಒಬ್ಬ ನಾಯಕ ಅಗಸ್ತ್ಯ ಬೆಳಗೆರೆ ಮೊದಲ ಸಿನಿಮಾದಲ್ಲಿಯೇ ಭರವಸೆ ಮೂಡಿಸುತ್ತಾರೆ. ನೀರ್ನಳ್ಳಿ ರಾಮಕೃಷ್ಣ ಅವರಂತಹ ಉತ್ತಮ ನಟರಿಗೆ ಸರಿಯಾದ ಪಾತ್ರ ಕಟ್ಟಿಕೊಡುವಲ್ಲಿ ನಿರ್ದೇಶಕರು ಎಡವಿದ್ದಾರೆ. ಹಿನ್ನೆಲೆ ಸಂಗೀತ ಒಂದಷ್ಟು ಕಡೆ ಉತ್ತಮವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.