ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ವಿಮರ್ಶೆ | 100: ನೋಡಿಸಿಕೊಂಡರೂ ಬಾಕಿ ಉಳಿವ ನಿರೀಕ್ಷೆ

Last Updated 19 ನವೆಂಬರ್ 2021, 9:59 IST
ಅಕ್ಷರ ಗಾತ್ರ

ಚಿತ್ರ: 100 (ಕನ್ನಡ)
ನಿರ್ಮಾಣ: ರಮೇಶ್‌ ರೆಡ್ಡಿ
ನಿರ್ದೇಶನ: ರಮೇಶ್ ಅರವಿಂದ್
ತಾರಾಗಣ: ರಮೇಶ್ ಅರವಿಂದ್, ಪೂರ್ಣ, ವಿಶ್ವ ಕರ್ಣ, ರಚಿತಾ ರಾಮ್, ಪ್ರಕಾಶ್ ಬೆಳವಾಡಿ, ಶೋಭ ರಾಜ್.

ಸಸ್ಪೆನ್ಸ್ ಥ್ರಿಲ್ಲರ್‌ಗಳು ಸವಕಲಾಗುವುದೇ ಇಲ್ಲ. ಅದೊಂದು ರೀತಿ ಸದಾ ಕಾಲ ಪ್ರೇಕ್ಷಕರ ಕಣ್ಣು ಕೀಲಿಸಿಕೊಳ್ಳಬಲ್ಲ ಸಿನಿಮಾ ಪ್ರಭೇದ. ರಮೇಶ್ ಅರವಿಂದ್ ನಿರ್ದೇಶಕನ ಸ್ಥಾನವನ್ನು ಸುಖಿಸಲಾರಂಭಿಸಿದ ನಂತರ ‘ಆ್ಯಕ್ಸಿಡೆಂಟ್’ ಮೂಲಕ ಇಂತಹ ಮಾದರಿಯ ಚಿತ್ರ ನಿರ್ದೇಶಿಸಿದ್ದರು. ಈಗ ‘100’ನಲ್ಲೂ ಒಂದು ಕೈ ನೋಡಿದ್ದಾರೆ. ಆ ಯತ್ನದಲ್ಲಿ ಹಿಡಿತ ಕೂಡ ಸಾಧಿಸಿದ್ದಾರೆ.

2017ರಲ್ಲಿ ತೆರೆಕಂಡಿದ್ದ ತಮಿಳಿನ ‘ತಿರುಟ್ಟು ಪಯಲೆ 2’ ಚಿತ್ರ ಋಣಭಾರ ಇದಕ್ಕೆ ಇದೆ. ಸೂಸಿ ಗಣೇಶನ್ ನಿರ್ದೇಶನದ ಆ ಕಥಾನಕವನ್ನು ರಮೇಶ್ ಸಾಕಷ್ಟು ಮಟ್ಟಿಗೆ ತಮ್ಮದನ್ನಾಗಿಸಿಕೊಂಡಿದ್ದಾರೆ. ಎಲ್ಲವನ್ನೂ ಮುಚ್ಚುಮರೆಯಿಲ್ಲದೆ ತೋರಿಸುತ್ತಲೇ ಮುಂದೆ ಇನ್ಯಾವುದೋ ತಿರುವಿಗೆ ತಂದು ನಿಲ್ಲಿಸುವುದು ಶತಸ್ಸಿದ್ಧ ಎನ್ನುವಂಥ ಹೊಸಕಾಲದ ‘ಆಟ’ ಈ ಚಿತ್ರದಲ್ಲಿ ಇದೆ. ಅದು ನೋಡುಗರನ್ನು ತೊಡಗಿಸಿಕೊಳ್ಳುವಷ್ಟು ಗಟ್ಟಿಯಾಗಿದೆ.

ಮನೆಯ ಗೋಡೆಗಳ ಮೂಲೆಗಳಲ್ಲಿ ಜೇಡರ ಬಲೆ ಕಟ್ಟಿದರೆ ಅದನ್ನು ಶುಚಿಗೊಳಿಸುತ್ತೇವೆ. ಈ ಕಾಲದಲ್ಲಿ ವ್ಯೋಮ ಜಗತ್ತಿನ ಜೇಡರಬಲೆಗಳು ವ್ಯಾಪಿಸತೊಡಗಿವೆ. ಅವು ಮನದ ಮೂಲೆಯಲ್ಲಿ ಕಟ್ಟುವುದರಿಂದ ಶುಚಿಗೊಳಿಸುವುದು ನಾಜೂಕು ಕೆಲಸ. ಈ ಚಿತ್ರಕಥೆಯ ತಿರುಳೂ ಅದೇ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ನಾಯಕನನ್ನೂ ಒಳಗೊಂಡಂತೆ ಅವನದ್ದೇ ಮನೆಯವರ ಮನದಲ್ಲಿ ಕಟ್ಟುವ ಜೇಡರ ಬಲೆಯ ಶುಚಿತ್ವವೇ ವಸ್ತು.

ಒಂದು ಸಂಭ್ರಮದ ಹಾಡಿನೊಂದಿಗೆ ಶುರುವಾಗುವ ಸಿನಿಮಾ ಆಮೇಲೆ ಕಥಾಬಿಂದುವಿಗೆ ಚಕ್ಕನೆ ಹೊರಳುತ್ತದೆ. ಇದು ಆರಂಭದಲ್ಲೆ ಒಂದು ಬಗೆಯಲ್ಲಿ ರಸಭಂಗದಂತೆ. ಚಿತ್ರದಲ್ಲಿ ಅಲ್ಲಲ್ಲಿ ದೃಶ್ಯಗಳ ಹೆಣಿಗೆಯಲ್ಲಿ ಇಂತಹ ರಸಭಂಗಗಳನ್ನು ಕಾಣಬಹುದು.

ಕಥಾನಾಯಕನನ್ನು ರಾಬಿನ್‌ಹುಡ್‌ ಆಗಿಸಿ, ಮಧ್ಯಮವರ್ಗದ ಅಸಹಾಯಕನನ್ನೂ ಮಾಡಿ, ಜಾಣತನದ ಮೆದುಳನ್ನೂ ಇಟ್ಟಿರುವ ಬಗೆ ರೋಚಕವೇನೋ ಹೌದು. ಅದರ ಕಟ್ಟುವಿಕೆಯ ಶಿಲ್ಪಕ್ಕೆ ಪೂರಕವಾಗಿ ಈ ಎಲ್ಲವೂ ಒದಗಿಬಂದಿಲ್ಲ. ಸದಾ ಕಾಲ ಕುದಿಬಿಂದುವಿನಲ್ಲೇ ಕೂರಿಸಿಕೊಳ್ಳಬೇಕು ಎಂಬ ನಿರ್ದೇಶಕನ ಹಟಪ್ರಜ್ಞೆಯಿಂದಲೋ ಏನೋ ಪೂರಕವಾಗಿ ಇನ್ನಷ್ಟು ಸನ್ನಿವೇಶಗಳನ್ನು ಜೋಡಿಸುವುದನ್ನು ಉಪೇಕ್ಷಿಸಲಾಗಿದೆ. ಕೋಣೆಯೊಳಗಿನ ‘ಡಾರ್ಕ್ ಡ್ರಾಮಾ’ ಸುದೀರ್ಘ ಕಾಲ ಕಣ್ಣಿಗೆ ಹಿತವಲ್ಲ ಎನಿಸುವುದು ಇದೇ ಕಾರಣಕ್ಕೆ.

ರವಿ ಬಸ್ರೂರ್ ವಾದ್ಯಗಳ ಹಿನ್ನೆಲೆಯು ಚಿತ್ರಗಳ ದೃಶ್ಯಕ್ಕೆ ಪೂರಕವಾಗಿದೆ. ಹಾಡುಗಳಲ್ಲಿ ಇನ್ನೂ ಕಾಡುವ ಗುಣ ತುಂಬಬಹುದಿತ್ತು. ರಮೇಶ್ ಅರವಿಂದ್ ಭಾವಗಳನ್ನು ಮುಖದ ಮೇಲೆ ತಂದು ಕೂರಿಸಿಕೊಳ್ಳುವುದರಲ್ಲಿ ಈಗಲೂ ನಿಸ್ಸೀಮರು. ಪೂರ್ಣ ಕೆಲವು ದೃಶ್ಯಗಳಲ್ಲಿ ಮನಕ್ಕೆ ನಾಟುವಂತೆ ಅಭಿನಯಿಸಿದ್ದಾರೆ. ರಚಿತಾ ರಾಮ್ ಕೂಡ ತಮ್ಮ ಪಾತ್ರವನ್ನು ಅನುಭವಿಸಿದ್ದಾರೆ. ಖಳನ ಪಾತ್ರಧಾರಿ ವಿಶ್ವ ಕರ್ಣ ಕೂಡ ಗುರುತು ಮೂಡಿಸಿದ್ದಾರೆ. ಆಷಾಢಭೂತಿ ಪಾತ್ರಕ್ಕೆ ಪ್ರಕಾಶ್ ಬೆಳವಾಡಿ ಟೈಮಿಂಗ್ ಹೊಂದಿಕೆಯಾಗಿದೆ.

ನೋಡಿಸಿಕೊಳ್ಳುವ ಗುಣವಿದ್ದೂ ಇನ್ನೂನು ಬೇಕಾಗಿದೆ ಎನ್ನುವ ನಿರೀಕ್ಷೆಯನ್ನು ಬಾಕಿ ಉಳಿಸುವ ‘100’, ಸಂದೇಶಗಳ ಪೋಸ್ಟರ್‌ಗಳೊಂದಿಗೆ ಅಂತ್ಯಗೊಳ್ಳುತ್ತದೆ. ಈ ವಾಚ್ಯವಂತೂ ಅನಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT