ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರುಗುಟ್ಟಿ ನೋಡಿದ್ದಕ್ಕೆ ಯುವಕನ ಹತ್ಯೆ

Last Updated 3 ಫೆಬ್ರುವರಿ 2018, 19:34 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮನ್ನು ದುರುಗುಟ್ಟಿ ನೋಡಿದರು ಎಂಬ ಕಾರಣಕ್ಕೆ ದುಷ್ಕರ್ಮಿಗಳು ಅರುಣ್‌ ಕೃಷ್ಣ (28) ಎಂಬುವರನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ.

ಮಲ್ಲತ್ತಹಳ್ಳಿಯ ಮಾರುತಿ ಬಾರ್ ಆ್ಯಂಡ್ ರೆಸ್ಟೊರಂಟ್ ಬಳಿ ಶುಕ್ರವಾರ ರಾತ್ರಿ 12.30ರ ಸುಮಾರಿಗೆ ಈ ಕೃತ್ಯ ನಡೆದಿದೆ. ಅರುಣ್ ರಕ್ಷಣೆಗೆ ತೆರಳಿದ ಅವರ ಸ್ನೇಹಿತ ಧಿಲಾನ್ ಸೋಮಯ್ಯ ಎಂಬುವರ ಮೇಲೂ ಹಂತಕರು ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಸ್ನೇಹಿತರಾದ ಅರುಣ್ ಹಾಗೂ ಧಿಲಾನ್ ಬಾರ್‌ಗೆ ಹೋಗಿದ್ದರು. ಅವರ ಪಕ್ಕದ ಟೇಬಲ್‌ನಲ್ಲಿದ್ದ ಮೂವರು ಯುವಕರು, ಕುಡಿದ ಅಮಲಿನಲ್ಲಿ ಜೋರಾಗಿ ಮಾತನಾಡುತ್ತಿದ್ದರು. ಇದರಿಂದ ಕೋಪಗೊಂಡ ಅರುಣ್, ಆ ಗುಂಪಿನ ಒಬ್ಬಾತನನ್ನು ದುರುಗುಟ್ಟಿ ನೋಡಿದ್ದರು.

ಅದಕ್ಕೆ ಆತ, ‘ಏನೋ ಗುರಾಯಿಸುತ್ತಿದ್ದೀಯಾ’ ಎಂದು ಗಲಾಟೆ ಪ್ರಾರಂಭಿಸಿದ್ದಾನೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಆಗ ಬಾರ್ ನೌಕರರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ಆದರೆ, 12.30ರ ಸುಮಾರಿಗೆ ಬಾರ್‌ನ ಹೊರಗಡೆ ಮತ್ತೆ ಅವರ ಮಧ್ಯೆ ಗಲಾಟೆ ಶುರುವಾಗಿದೆ. ಈ ಹಂತದಲ್ಲಿ ಅರುಣ್ ಎದೆಗೆ ಚಾಕುವಿನಿಂದ ಇರಿದ ಆರೋಪಿಗಳು, ಧಿಲಾನ್‌ ಮೇಲೂ ಹಲ್ಲೆ ಮಾಡಿ ಹೋಗಿದ್ದಾರೆ.

ತಕ್ಷಣ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತೀವ್ರ ರಕ್ತಸ್ರಾವವಾಗಿದ್ದರಿಂದ ಅರುಣ್ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ. ಬಾರ್‌ನ ಸಿ.ಸಿ ಟಿ.ವಿ ಕ್ಯಾಮೆರಾಗಳಲ್ಲಿ ಹಂತಕರ ಚಲನವಲನಗಳು ಸೆರೆಯಾಗಿದ್ದು, ಶೋಧ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಜ್ಞಾನಭಾರತಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT