ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸೀಸನ್ 8ರ ಅಂತಿಮ ಘಟ್ಟಕ್ಕೆ ದಿನಗಣನೆ ಶುರುವಾಗಿದೆ. ಇಂದಿನಿಂದ 15ನೇ ದಿನ ಫಿನಾಲೆ ನಡೆಯಲಿದೆ ಎಂದು ಕಿಚ್ಚ ಸುದೀಪ್ ಶನಿವಾರದ ಸಂಚಿಕೆಯಲ್ಲಿ ಘೋಷಿಸಿದ್ದಾರೆ.
ಬಿಗ್ ಬಾಸ್ ಫಿನಾಲೆಯಲ್ಲಿ 5 ಸ್ಪರ್ಧಿಗಳು ಮಾತ್ರ ಇರಲಿದ್ದು, ಸದ್ಯ, ಮನೆಯಲ್ಲಿ 9 ಮಂದಿ ಇದ್ದಾರೆ. ಹೀಗಾಗಿ, ಈ ವಾರ ಬಿಟ್ಟರೆ ಇನ್ನೊಂದು ವಾರ ಮಾತ್ರ ಎಲಿಮಿನೇಶನ್ ಇರುವುದರಿಂದ ಇಂದು ಎಷ್ಟು ಮಂದಿ ಹೊರ ಹೋಗುತ್ತಿದ್ದಾರೆ ಎಂಬ ಕುತೂಹಲ ಮೂಡಿದೆ.
ಶುಭಾ ಪೂಂಜಾ, ಶಮಂತ್, ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ಅವರು ನಾಮಿನೇಟ್ ಆಗಿದ್ದು, ಭಾನುವಾರ ಇವರಲ್ಲಿ ಮನೆಯಿಂದ ಹೊರಹೋಗುವವರು ಯಾರು ಎಂಬುದು ತಿಳಿದುಬರಲಿದೆ.
ಚಂದ್ರಚೂಡ್ಗೆ ಕ್ಲಾಸ್: ಕಳೆದ ವಾರ ಮನೆಯಿಂದ ಎಲಿಮಿನೇಟ್ ಆದ ಪ್ರಿಯಾಂಕಾ ತಿಮ್ಮೇಶ್ ತಮ್ಮನ್ನು ನಾಮಿನೇಟ್ ಮಾಡಿದರೆಂದು ಕೋಪಗೊಂಡಿದ್ದ ಚಕ್ರವರ್ತಿ ಮಧ್ಯದ ಬೆರಳು ತೋರಿಸಿದ ಬಗ್ಗೆ ಸುದೀಪ್ ಆಕ್ಷೇಪ ಎತ್ತಿದರು. ಕಾನೂನಾತ್ಮಕವಾಗಿಯೂ ಅದು ತಪ್ಪು. ಆ ಹೆಣ್ಣುಮಗಳ ಸಂಬಂಧಿಕರು ಈ ಬಗ್ಗೆ ನನಗೆ ಕೇಳಿದರೆ ಏನೆಂದು ಉತ್ತರ ಕೊಡಲಿ ಎಂದು ಪ್ರಶ್ನೆ ಕೇಳಿದರು.
ಒಂದೊಮ್ಮೆ, ಯಾರೋ ಒಬ್ಬ ವ್ಯಕ್ತಿ ಅಕ್ಕ ತಂಗಿಯರ ಜೊತೆ ಹೋಗುವಾಗ ಯಾರಾದರೂ ಅವರಿಗೆ ಮಧ್ಯದ ಬೆರಳು ತೋರಿಸಿದಾಗ ಅವರ ಪ್ರತಿಕ್ರಿಯೆ ಹೇಗಿರಬಹುದು ಎಂದು ಚಾಟಿ ಬೀಸಿದ್ದಾರೆ. ಸುದೀಪ್ ಮಾತನ್ನು ಚಂದ್ರಚೂಡ್ ಒಪ್ಪಿಕೊಂಡು ತಪ್ಪಾಗಿದೆ ಎಂದು ಹೇಳಿದರು. ಅಷ್ಟೊಂದು ತಿಳುವಳಿಕೆ ಇರುವ ನೀವು, ಹೆಣ್ಣುಮಕ್ಕಳ ಬಗ್ಗೆ ಮರ್ಯಾದೆ ಇದೆ ಎಂದು ಹೇಳುವ ನೀವು, ಈ ರೀತಿ ವರ್ತಿಸಿದಾಗ ಅದರ ಪರಿಣಾಮ ಎಷ್ಟು ಕೆಟ್ಟದಾಗಿರಬಹುದು ಎಂದು ಯೋಚಿಸಿದ್ದೀರಾ? ಎಂದುಸುದೀಪ್ ಮರು ಪ್ರಶ್ನೆ ಹಾಕಿದರು.
ಸುದೀಪ್ ವಿರುದ್ಧವೇ ತಿರುಗಿದ ಚಕ್ರವರ್ತಿ: ಈ ಮಧ್ಯೆ, ಬ್ರೇಕ್ನಲ್ಲಿ ಸುದೀಪ್ ವಿರುದ್ಧವೇ ಚಕ್ರವರ್ತಿ ತಿರುಗಿಬಿದ್ದಂತೆ ಕಂಡುಬಂದಿದೆ. ಪ್ರತೀ ವಾರ ನನ್ನನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಸ್ತ್ರೀದ್ವೇಷಿ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಗೊಣಗಾಡಿದರು. ಸುದೀಪ್ ಬಳಿಯೂ ನಿಮ್ಮ ಬಗ್ಗೆ ಅಸಮಾಧಾನವಿದೆ. ನನ್ನನ್ನು ತೆಗಳುವುದಕ್ಕೆ ಎಪಿಸೋಡ್ ಕಳೆಯುತ್ತೀರಿ ಎಂದರು. ಇದಕ್ಕೆ ಪ್ರತ್ಯುತ್ತರ ಕೊಟ್ಟ ಸುದೀಪ್, ನೀವು ಮಾಡಿದ್ದನ್ನೇ ಹೇಳಿದೆ. ಅಲ್ಲಿ ನನ್ನದೇನೂ ಇಲ್ಲ ಬದನೆಕಾಯಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.