ಬೆಂಗಳೂರು: ಬಿಗ್ ಬಾಸ್ ಕನ್ನಡ 9ನೇ ಆವೃತ್ತಿಯ ಈ ವಾರದ ನಾಯಕಿಯಾಗಿ ಮಂಗಳಗೌರಿ ಮದುವೆ ಧಾರಾವಾಹಿಯ ನಟಿ ಕಾವ್ಯ ಶ್ರೀ ಗೌಡ ಆಯ್ಕೆಯಾಗಿದ್ದಾರೆ.
ಮನೆಯಲ್ಲಿ ಸದಾ ನಗು ನಗುತ್ತಾ ಓಡಾಡಿಕೊಂಡಿರುವ ಅವರು, ಟಾಸ್ಕ್ನಲ್ಲಿ ಮಾತ್ರ ಹಿಂದುಳಿಯುತ್ತಾರೆ ಎಂಬ ಆಪಾದನೆಗಳಿದ್ದವು. ಆದರೆ, ಈ ವಾರ ಟಾಸ್ಕ್ನಲ್ಲೂ ಎಲ್ಲರನ್ನು ಹಿಂದಿಕ್ಕಿ ಗೆದ್ದು ನಾಯಕಿಯಾಗಿದ್ದಾರೆ.
ಮನೆಯ ಸದಸ್ಯರ ಮತ ವರದಾನ
ಹೌದು, ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹತೆ ಪಡೆಯಲು ಮತ್ತು ಮುಂದಿನ ವಾರದ ನಾಮಿನೇಶನ್ಗೆ ಫೇಕ್ ಮತ್ತು ರಿಯಲ್ ಎಂದು ಆಯ್ಕೆ ಮಾಡುವ ಅಧಿಕಾರವನ್ನು ಬಿಗ್ ಬಾಸ್ ನೀಡಿದ್ದರು. ಬಿಗ್ ಬಾಸ್ ಕೊಟ್ಟ ಟಾಸ್ಕ್ ಗೆದ್ದವರು ಬಂದು ವಿಶಿಷ್ಟ ಕುರ್ಚಿ ಮೇಲೆ ಕುಳಿತು ಈ ಆಯ್ಕೆ ಮಾಡಬೇಕಾಗಿತ್ತು. ಮನೆಯ ಬಹುತೇಕ ಸದಸ್ಯರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದ ಕಾವ್ಯಾ ಅವರಿಗೆ ಹಲವರು ರಿಯಲ್ ಪಟ್ಟ ಕೊಟ್ಟಿದ್ದರು. ಹೀಗಾಗಿಯೇ, ಹೆಚ್ಚು ಬಾರಿ ರಿಯಲ್ ಎಂಬ ಪಟ್ಟ ಗಿಟ್ಟಿಸಿಕೊಂಡಿದ್ದ ಕಾವ್ಯಾ, ಅನುಪಮಾ ಮತ್ತು ಅಮೂಲ್ಯ ಜೊತೆ ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆಯಾಗಿದ್ದರು.
ಟಾಸ್ಕ್ನಲ್ಲಿ ಗೆದ್ದು ಆನಂದಬಾಷ್ಪ ಹರಿಸಿದ ಮಂಗಳಗೌರಿ
ಹೌದು, ಪಿರಮಿಡ್ ಜೋಡಿಸುವ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಕಾವ್ಯಾ ಗೌಡ ಅತ್ಯಂತ ಹುಮ್ಮಸ್ಸಿನಿಂದ ಆಡಿದರು. ಹಿನ್ನಡೆಯಾದರೂ ಮತ್ತೆ ವೇಗವಾಗಿ ಕಮ್ ಬ್ಯಾಕ್ ಮಾಡಿದರು. ಬಲಿಷ್ಠ ಸ್ಪರ್ಧಿಗಳಾದ ಅನುಪಮಾ ಮತ್ತು ಅಮೂಲ್ಯ ಎದುರು ತಮ್ಮ ಚಾಕಚಕ್ಯತೆ ಪ್ರದರ್ಶಿಸಿ ಗೆಲುವಿನ ನಗೆ ಬೀರಿದರು. ಕಾವ್ಯಾ ಗೆದ್ದಿದ್ದಾರೆ ಎಂದು ಕ್ಯಾಪ್ಟನ್ ಪ್ರಶಾಂತ್ ಘೋಷಿಸುತ್ತಿದ್ದಂತೆ ಕಣ್ಣೀರು ಸುರಿಸಿದರು.
‘ಉತ್ತರ ಸಿಕ್ಕಿದೆ’
ಅಷ್ಟಕ್ಕೆ ಸುಮ್ಮನಾಗದ ಕಾವ್ಯ, ಕ್ಯಾಮೆರಾ ಬಳಿ ಬಂದು, ಬಿಗ್ ಬಾಸ್ ನಾನು ಟಾಸ್ಕ್ಗಳಿಗೆ ಲಾಯಕ್ಕಿಲ್ಲ ಎಂದು ಮೂದಲಿಸುತ್ತಿದ್ದವರಿಗೆ ಉತ್ತರ ಸಿಕ್ಕಿದೆ ಎಂದು ಭಾವಿಸುತ್ತೇನೆ. ಅಷ್ಟೆ ಸಾಕು. ಉತ್ತಮವಾಗಿ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.