ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಮರಗಳನ್ನೇಕೆ ಕಡಿಯಬೇಕು?
ಇದು ನಟಿ, ರಾಜಕಾರಣಿ ರಮ್ಯಾ ಅವರ ಪ್ರಶ್ನೆ. ಸದ್ಯ ನಟನೆ, ರಾಜಕಾರಣದಿಂದ ದೂರ ಉಳಿದಿರುವ ಅವರು ಇಂದು (ಸೋಮವಾರ) ಇನ್ಸ್ಟಾಗ್ರಾಂನಲ್ಲಿ ಇಂಥದ್ದೊಂದು ಪ್ರಶ್ನೆ ಮುಂದಿಟ್ಟುಕೊಂಡು ಸಹಿ ಸಂಗ್ರಹಕ್ಕೆ ಮನವಿ ಮಾಡಿದ್ದಾರೆ.
ಹೆಬ್ಬಾಳ-ನಾಗವಾರ ಕಣಿವೆ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಆರಂಭವಾಗಿದೆ. ಇದರ ಅಡಿ ಯಲಹಂಕದ ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿ ಸಣ್ಣ ನೀರಾವರಿ ಇಲಾಖೆ ಮೂಲಕ ನಡೆಯುತ್ತಿದೆ. ಈಗ ಒಟ್ಟಾರೆ ಈ ಯೋಜನೆಗೆ 6 ಸಾವಿರಕ್ಕೂ ಹೆಚ್ಚು ಮರಗಳನ್ನು ಕತ್ತರಿಸಲು ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ರಮ್ಯಾ ಕೂಡಾ ಧ್ವನಿಯೆತ್ತಿದ್ದಾರೆ. ಪ್ರತಿರೋಧದ ಬರಹವುಳ್ಳ ಪೋಸ್ಟರ್ನ್ನು ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದು ಸಾವಿರಾರು ಮಂದಿ ಅದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.