ವರ್ಷಪೂರ್ತಿ ಇಟ್ಟು ಸಾಗಿದ ಸದೃಢ ಹೆಜ್ಜೆಯನ್ನು ಮೆಲುಕುಹಾಕುತ್ತಲೇ ಮತ್ತೆ ಹೊಸ ಹುಡುಕಾಟದ ತವಕ ಹೊತ್ತು ಮುನ್ನಡೆಯತ್ತ ಚಿಮ್ಮುವುದು ಹೊಸ ವರ್ಷದ ಹೊಸ್ತಿಲಿನಲ್ಲಿ ನಿಂತವರ ಸಂಕಲ್ಪವಾಗಬೇಕು. ಮಾಧ್ಯಮ ಯಾವತ್ತೂ ಜನರಿಗೆ ಉತ್ತರದಾಯಿಯಾಗಬೇಕು, ನಾಡವರು ಅನುಭವಿಸುವ ಸಂಕಟಗಳಿಗೆ ಧ್ವನಿಯಾಗಬೇಕು ಎನ್ನುವ ಪತ್ರಿಕಾಧರ್ಮವನ್ನು ಪಾಲಿಸುತ್ತಾ, ಆ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವ ‘ಪ್ರಜಾವಾಣಿ’ಗೆ ಹಲವು ಪರಿವರ್ತನೆಗಳಿಗೆ ಕಾರಣವಾದ ಖುಷಿ. ನಿಮ್ಮ ಪ್ರೀತಿಯ ಪತ್ರಿಕೆ ಸಮಾಜದಲ್ಲಿ ಅಂತಹ ಸಕಾರಾತ್ಮಕ ಬದಲಾವಣೆಗೆ ಕಾರಣವಾದ ಕೆಲವು ಹೆಜ್ಜೆ ಗುರುತುಗಳು ಇಲ್ಲಿವೆ. ಜನರ ದನಿಗೆ ಕಿವಿಯಾಗಿ, ಬಾಯಾಗುವ ತನ್ನ ಕರ್ತವ್ಯಪರತೆಯನ್ನು ಪತ್ರಿಕೆ ಎಂದಿನಂತೆ ಮುಂದುವರಿಸಲಿದೆ.