ಎರಡು ವಾರಗಳಿಂದ ರಾಜ್ಯದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನೋಟಿಸ್ ಸದ್ದು ಮಾಡುತ್ತಿದೆ. ಜಿಎಸ್ಟಿಯನ್ನು ಅರ್ಥಮಾಡಿಕೊಳ್ಳಲು ಜನರಿಗೆ ಒಂದಷ್ಟು ಸಮಯ ಬೇಕಾಗಬಹುದು ಎನ್ನುವುದನ್ನೂ ಯೋಚಿಸದೆ 2017ರ ಜುಲೈ 1ರಂದು ದೇಶದಾದ್ಯಂತ ಅದನ್ನು ಜಾರಿಗೆ ತರಲಾಗಿತ್ತು. ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬಂದು ಎಂಟು ವರ್ಷಗಳು ಕಳೆದಿದ್ದರೂ ಹೆಚ್ಚಿನ ಜನರಿಗೆ ಅದರ ಬಗ್ಗೆ ತಿಳಿದಿಲ್ಲ; ಅವರ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಆರಂಭದಿಂದಲೂ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಾ ಬಂದ ಈ ವ್ಯವಸ್ಥೆ ಸುಧಾರಿಸುತ್ತಿದೆ ಎಂಬ ಭಾವನೆ ಮೂಡಿದ ಹೊತ್ತಿನಲ್ಲೇ ಈಗ ರಾಜ್ಯದ ಸಾವಿರಾರು ಹಣ್ಣು, ತರಕಾರಿ, ಬೇಕರಿ, ಕಾಂಡಿಮೆಂಟ್ಸ್ ವ್ಯಾಪಾರಿಗಳು, ಮದ್ಯದ ಅಂಗಡಿಗಳಲ್ಲಿ ಕುರುಕಲು ತಿಂಡಿ ಮಾಡುವವರು, ಹೋಟೆಲ್ಗಳು, ಪಾನ್ ಬೀಡಾ ಅಂಗಡಿಗಳನ್ನು ನಡೆಸುತ್ತಿರುವವರಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ನೋಟಿಸ್ ಕಂಡ ವ್ಯಾಪಾರಿಗಳು ಆತಂಕಗೊಂಡಿದ್ದಾರೆ, ದ್ವಂದ್ವಕ್ಕೆ ಒಳಗಾಗಿದ್ದಾರೆ, ಒಂದಷ್ಟು ಜನ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಮತ್ತೊಂದಷ್ಟು ಜನ ರೊಚ್ಚಿಗೂ ಎದ್ದಿದ್ದಾರೆ. ನೋಟಿಸ್ ನೀಡುವುದಕ್ಕೆ ಏನು ಕಾರಣ? ಈ ಗೊಂದಲ ಏಕೆ? ಉತ್ತರಗಳು ಇಲ್ಲಿವೆ