<p>ಮಲ್ಲಿಗೆ ಹೂವಿನ ಸುವಾಸನೆಗೆ ಹೆಸರಾದ ಮೈಸೂರಿನ ಮಣ್ಣಿನಲ್ಲಿ ಕುಸ್ತಿಯ ಬೇರುಗಳೂ ಗಟ್ಟಿಯಾಗಿವೆ. <br /> <br /> ಪ್ರತಿ ಓಣಿಯಲ್ಲಿಯೂ ಅಸಾಧಾರಣ ಕುಸ್ತಿ ಪ್ರತಿಭೆಗಳಿದ್ದರೂ, ವಿಶ್ವಚಾಂಪಿಯನ್ನರನ್ನು ಬೆಳೆಸುವ ಕೆಲಸ ಮಾತ್ರ ಇನ್ನೂ ಆಗಿಲ್ಲ. ಆಗಿನ ಮಹಾರಾಜರಂತೆ ಈಗ ರಾಜಕೀಯ ಧುರೀಣರು ಔದಾರ್ಯ ಮೆರೆದರೆ ಆ ಕನಸೂ ಕೈಗೂಡಬಹುದು...<br /> <br /> ದುಡ್ಡು ಕೊಟ್ಟು ಟಿಕೆಟ್ ಕೊಂಡು ಕುಸ್ತಿ ನೋಡುವ ಸಾವಿರಾರು ಜನ ಇನ್ನೂ ಮೈಸೂರಿನಲ್ಲಿದ್ದಾರೆ. ಗೋವಾ, ಕೋಲ್ಕತ್ತದಲ್ಲಿ ಫುಟ್ಬಾಲ್ಗೆ ಇರುವಷ್ಟೇ ಕ್ರೇಜ್ ಇಲ್ಲಿ ಕುಸ್ತಿಗೆ ಇದೆ. <br /> <br /> `ಗರಡಿಗಳ ನಗರಿ~ ಎಂದೇ ಖ್ಯಾತಿ ಪಡೆದಿರುವ ಈ ನಾಡನ್ನು ಆಳಿದ ಮಹಾರಾಜರು ಹಾಕಿದ ಕುಸ್ತಿ ಸಂಸ್ಕಾರದ ಫಲ ಇದು. ಕಲಿಭೀಮ ಎಂದೇ ಹೆಸರಾಗಿದ್ದ ನರಸರಾಜ ಒಡೆಯರು, ಮುಮ್ಮಡಿ ಕೃಷ್ಣರಾಜ ಒಡೆಯರು, ಚಾಮರಾಜ ಒಡೆಯರು ಕುಸ್ತಿಯ ಬೆಳವಣಿಗೆಗೆ ನೀಡಿದ ಪ್ರೋತ್ಸಾಹ ಅವಿಸ್ಮರಣೀಯ. <br /> <br /> ದಸರಾ ಸಂದರ್ಭದಲ್ಲಿ ಬೇರೆ ಸಂಸ್ಥಾನಗಳಿಂದ ಪೈಲ್ವಾನರನ್ನು ಕರೆಸಿ ಒಂದು ತಿಂಗಳು ಅವರಿಗೆ ಊಟ, ವಸತಿ, ಉಪಚಾರಗಳನ್ನು ನೀಡುತ್ತಿದ್ದರು. ದರ್ಬಾರ್ ಭಕ್ಷಿ. ಕಿಲ್ಲೇದಾರ್ ಭಕ್ಷಿ ಸ್ಥಾನಗಳಲ್ಲಿರುವವರು ಕುಸ್ತಿ ಮಾಡಬೇಕಾದ ಸೂಕ್ತ ಜೋಡಿಗಳನ್ನು ನಿರ್ಧರಿಸುತ್ತಿದ್ದರು. <br /> <br /> ಇದರಲ್ಲಿ ಯಾವುದೇ ತಾರತಮ್ಯಕ್ಕೆ ಅವಕಾಶವೇ ಇರಲಿಲ್ಲ. ಒಂದು ತಿಂಗಳ ಅವಧಿಯಲ್ಲಿ ಪೈಲ್ವಾನರ ಅಭ್ಯಾಸ, ವ್ಯಾಯಾಮದ ರೀತಿಗಳನ್ನು ಗಮನಿಸಿ ಜೋಡಿಗಳನ್ನು ನಿರ್ಧರಿಸುತ್ತಿದ್ದರು. <br /> <br /> ಅರಮನೆ ಮುಂದೆ ವಿಜಯದಶಮಿಯಂದು ನಡೆಯುತ್ತಿದ್ದ ಕುಸ್ತಿ ವೀಕ್ಷಿಸಲು ದೇಶವಿದೇಶಗಳಿಂದಲೂ ಪ್ರೇಕ್ಷಕರು ಬರುತ್ತಿದ್ದರು. ಅತ್ಯಂತ ತುರುಸಿನ ಕುಸ್ತಿ ನಡೆಯುತ್ತಿದ್ದವು. ಅಂತ್ಯದಲ್ಲಿ ಗೆದ್ದವರಿಗೆ ಮತ್ತು ಸೋತವರಿಗೆ ಇಬ್ಬರಿಗೂ ಸಮಾನ ಗೌರವ ಸಿಗುತ್ತಿತ್ತು. <br /> <br /> ಇಲ್ಲಿ ಕ್ರೀಡಾ ಮನೋಭಾವವೇ ಶ್ರೇಷ್ಠ ಎಂದು ತಿಳಿದಿದ್ದ ಮಹಾರಾಜರು ಇಬ್ಬರಿಗೆ ಸಮಪ್ರಮಾಣದ ಪ್ರಶಸ್ತಿ ಪುರಸ್ಕಾರಗಳನ್ನು ಕೊಟ್ಟು ಗೌರವಿಸುತ್ತಿದ್ದರು. ಸ್ಪರ್ಧೆಯಲ್ಲಿ ಸೋಲು ಗೆಲುವು ಸಹಜ. ಅದರ ಹಿಂದಿನ ಶ್ರಮ ಮಾತ್ರ ಒಂದೇ ಎಂಬ ಭಾವ ಅವರದ್ದಾಗಿತ್ತು. <br /> <br /> <strong>ಪ್ರೀತಿ ಉಳಿಯಿತು; </strong>ಕುಸ್ತಿ?: ಇದೆಲ್ಲದರ ಪರಿಣಾಮವಾಗಿ ಇಲ್ಲಿಯ ಜನರ ರಕ್ತದಲ್ಲಿ ಕುಸ್ತಿ ಪ್ರೀತಿಯು ಗಟ್ಟಿಯಾಗಿ ಉಳಿಯಿತು. ಆದರೆ, ಇಂದಿನ ಆಡಳಿತ ವ್ಯವಸ್ಥೆಯ ಅನಾದರದಿಂದ ಎಷ್ಟು ಎತ್ತರಕ್ಕೆ ಈ ಕಲೆ ಬೆಳೆಯಬೇಕಿತ್ತೋ ಅಷ್ಟು ಬೆಳೆಯಲಿಲ್ಲ. <br /> <br /> ಕೇವಲ ಸಂಪ್ರದಾಯ ಮತ್ತು ಕಲೆಯಾಗಿಯೇ ಉಳಿದ ಕುಸ್ತಿಯನ್ನು ಅಂತರರಾಷ್ಟ್ರೀಯ ಕ್ರೀಡೆಯ ಮಟ್ಟಕ್ಕೆ ಬೆಳೆಸುವಲ್ಲಿ ಮೈಸೂರು ಇನ್ನೂ ಸಫಲವಾಗಿಲ್ಲ. ಪೈಲ್ವಾನರ ಕಣಜಗಳೇ ಆಗಿರುವ ಹರಿಯಾಣ, ಪಂಜಾಬ್ ಮತ್ತು ಮಹಾರಾಷ್ಟ್ರಗಳಲ್ಲಿ ಕುಸ್ತಿಯನ್ನು ಕಲೆಯಂತೆ ಆರಾಧಿಸಿದರೂ ಕ್ರೀಡೆಯಾಗಿ ಬೆಳೆಸುವಲ್ಲಿ ಹಿಂದೆ ಬೀಳಲಿಲ್ಲ. <br /> <br /> ಆ ಕೆಲಸ ಉತ್ತರ ಕರ್ನಾಟಕದಲ್ಲಿ ಸ್ವಲ್ಪಮಟ್ಟಿಗೆ ಆಯಿತು. ಒಲಿಂಪಿಯನ್ ಎಂ.ಆರ್. ಪಾಟೀಲ, ದೋಹಾ ಏಷ್ಯನ್ ಗೇಮ್ಸನಲ್ಲಿ ಕಂಚು ಗೆದ್ದ ವಿನಾಯಕ ದಳವಿ ಬೆಳಗಾವಿ ಜಿಲ್ಲೆಯ ಹೆಮ್ಮೆಯ ಕುಸ್ತಿಪಟುಗಳು. <br /> <br /> ದಾವಣಗೆರೆ ಕೂಡ ಉತ್ತಮ ಕುಸ್ತಿಪಟುಗಳನ್ನು ಬೆಳೆಸುವಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ಕಾರಣ ಇಲ್ಲಿ ಫ್ರೀಸ್ಟೈಲ್ ಮತ್ತು ಗ್ರಿಕೋ ರೋಮನ್ ಕುಸ್ತಿಯನ್ನು ಗಂಭೀರವಾಗಿ ಅಳವಡಿಸಿಕೊಂಡಿರುವುದು. <br /> <br /> ಅಂತರರಾಷ್ಟ್ರೀಯ ಕುಸ್ತಿ ಫೆಡರೇಷನ್ (ಫಿಲಾ) ಮತ್ತು ಒಲಿಂಪಿಕ್ಸ್ನಿಂದ ಮಾನ್ಯತೆ ಪಡೆದ ಈ ಎರಡೂ ಪ್ರಕಾರಗಳನ್ನು ಮ್ಯಾಟ್ ಮೇಲೆ ಆಡಲಾಗುತ್ತದೆ. <br /> <br /> ಮನೆಗೊಬ್ಬ ಕುಸ್ತಿಪಟು ಸಿಗುವ ಮೈಸೂರಿನಲ್ಲಿ ಮಾತ್ರ ಇವೆರಡೂ ವಿಧಗಳನ್ನು ಬೆಳೆಸುವ ಕಾರ್ಯ ನಿರೀಕ್ಷೆಯಂತೆ ನಡೆಯುತ್ತಿಲ್ಲ. ಮೈಸೂರು ವಿಶ್ವವಿದ್ಯಾಲಯದಲ್ಲಿ ಮಾತ್ರ ಮ್ಯಾಟ್ ಕುಸ್ತಿಗೆ ಆದ್ಯತೆ ಸಿಕ್ಕಿದೆ.<br /> <br /> ಆದರೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ಸ್ಥಳೀಯ ಕುಸ್ತಿಪ್ರೇಮಿಗಳು ಈ ಬಗ್ಗೆ ಹೆಚ್ಚು ಪ್ರಯತ್ನ ಮಾಡಿಲ್ಲ. ಇಡೀ ಮೈಸೂರು ಜಿಲ್ಲೆಯಲ್ಲಿ ಇರುವ 244 ಗರಡಿಮನೆಗಳ ಪೈಕಿ 72 ಗರಡಿಗಳು ಮೈಸೂರು ನಗರದಲ್ಲಿಯೇ ಇವೆ. <br /> <br /> ಆದರೂ ಕ್ರೀಡಾ ಇಲಾಖೆಗೆ ಒಬ್ಬ ಕುಸ್ತಿ ಕೋಚ್ ಇಲ್ಲದೇ ಐದು ವರ್ಷಗಳೇ ಕಳೆದುಹೋಗಿವೆ. <br /> <br /> `ನಾಡಕುಸ್ತಿಗೆ (ಮಟ್ಟಿಯ ಮೇಲೆ) ಹೆಸರುವಾಸಿಯಾದ ಮೈಸೂರಿನಲ್ಲಿ ಅಪ್ರತಿಮ ಕುಸ್ತಿಪಟುಗಳು ಇದ್ದರು. ಈಗಲೂ ಸಾಕಷ್ಟು ಪ್ರತಿಭೆಗಳಿವೆ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕಾದರೆ ಫ್ರೀಸ್ಟೈಲ್ ಮತ್ತು ಗ್ರಿಕೋ ರೋಮನ್ ಕುಸ್ತಿ ಕಲಿಯಬೇಕು. <br /> <br /> ಅದಕ್ಕಾಗಿ ನುರಿತ ತರಬೇತುದಾರರ ಅಗತ್ಯವಿದೆ. ಈ ಕುರಿತು ಹಲವಾರು ಬಾರಿ ಇಲಾಖೆಗೆ ಪತ್ರ ಬರೆದರೂ ಫಲ ನೀಡಿಲ್ಲ~ ಎಂದು ಗರಡಿ ಸಂಘದ ಅಧ್ಯಕ್ಷ ಯಜಮಾನ್, ಪೈಲ್ವಾನ್ ಮಹಾದೇವ್ ಹೇಳುತ್ತಾರೆ. <br /> <br /> ದಾವಣಗೆರೆ, ಧಾರವಾಡ, ಬೆಳಗಾವಿ ಮಾದರಿಯಲ್ಲಿ ಕುಸ್ತಿಗಾಗಿಯೇ ಇಲ್ಲೊಂದು ಕ್ರೀಡಾ ವಸತಿ ಶಾಲೆ ಬೇಕು ಎನ್ನುವ ಬೇಡಿಕೆಗೂ ಸ್ಪಂದನೆ ಸಿಕ್ಕಿಲ್ಲ.ನಗರಪ್ರದೇಶದಲ್ಲಿ, ಅಕ್ಕಪಕ್ಕದ ಹಳ್ಳಿಗಳಲ್ಲಿ ಇವತ್ತಿಗೂ ಸಾಕಷ್ಟು ಕುಸ್ತಿ ಪ್ರತಿಭೆಗಳಿವೆ. <br /> <br /> ಬದಲಾದ ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳಲ್ಲಿ ಅವರು ತೊಳಲಾಡುತ್ತಿದ್ದಾರೆ. ಜಾತ್ರೆ, ಉತ್ಸವಗಳ ಕುಸ್ತಿಯಲ್ಲಿ ಮಿಂಚಿ ಒಂದಿಷ್ಟು ಗೌರವ-ಧನ ಸಂಪಾದಿಸಿದರೆ ಸಾಕು ಎನ್ನುವ ಸೀಮಿತಕ್ಕೆ ಒಳಗಾದವರೇ ಹೆಚ್ಚು. <br /> <br /> ಈ ಪ್ರತಿಭೆಗಳ ಸಮೂಹದಲ್ಲಿ ವಿಶ್ವಚಾಂಪಿಯನ್ ಸುಶೀಲಕುಮಾರ್ ಅವರಂತಹ ಒಬ್ಬರಾದರೂ ಸಿಕ್ಕೇ ಸಿಗುತ್ತಾರೆ. ಆದರೆ ಹುಡುಕುವ ಪ್ರಯತ್ನ ಆಗಬೇಕು. ಏಕೆಂದರೆ ಯಾವುದೇ ಆಟದ ಬೆಳವಣಿಗೆಗೆ ಚಾಂಪಿಯನ್ನರೇ ಕಾರಣ. <br /> <br /> ಅವರ ಪ್ರೇರಣೆಯಿಂದಲೇ ಮತ್ತಷ್ಟು ಪ್ರತಿಭೆಗಳು ಬೆಳಕಿಗೆ ಬರುತ್ತವೆ. ದಸರೆಯ ಪರಂಪರೆಯಾಗಿ ಬೆಳೆದ ಕುಸ್ತಿ ಪ್ರತಿಭೆಗಳು ಅಂತರರಾಷ್ಟ್ರೀಯ ಪದಕಗಳ ಬೇಟೆಗೆ `ಸೀಮೋಲ್ಲಂಘನ~ ಮಾಡಿದಾಗ ಮಾತ್ರ ನಾಡಿಗೂ, ಕ್ರೀಡೆಗೂ ಶ್ರೇಯ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಲ್ಲಿಗೆ ಹೂವಿನ ಸುವಾಸನೆಗೆ ಹೆಸರಾದ ಮೈಸೂರಿನ ಮಣ್ಣಿನಲ್ಲಿ ಕುಸ್ತಿಯ ಬೇರುಗಳೂ ಗಟ್ಟಿಯಾಗಿವೆ. <br /> <br /> ಪ್ರತಿ ಓಣಿಯಲ್ಲಿಯೂ ಅಸಾಧಾರಣ ಕುಸ್ತಿ ಪ್ರತಿಭೆಗಳಿದ್ದರೂ, ವಿಶ್ವಚಾಂಪಿಯನ್ನರನ್ನು ಬೆಳೆಸುವ ಕೆಲಸ ಮಾತ್ರ ಇನ್ನೂ ಆಗಿಲ್ಲ. ಆಗಿನ ಮಹಾರಾಜರಂತೆ ಈಗ ರಾಜಕೀಯ ಧುರೀಣರು ಔದಾರ್ಯ ಮೆರೆದರೆ ಆ ಕನಸೂ ಕೈಗೂಡಬಹುದು...<br /> <br /> ದುಡ್ಡು ಕೊಟ್ಟು ಟಿಕೆಟ್ ಕೊಂಡು ಕುಸ್ತಿ ನೋಡುವ ಸಾವಿರಾರು ಜನ ಇನ್ನೂ ಮೈಸೂರಿನಲ್ಲಿದ್ದಾರೆ. ಗೋವಾ, ಕೋಲ್ಕತ್ತದಲ್ಲಿ ಫುಟ್ಬಾಲ್ಗೆ ಇರುವಷ್ಟೇ ಕ್ರೇಜ್ ಇಲ್ಲಿ ಕುಸ್ತಿಗೆ ಇದೆ. <br /> <br /> `ಗರಡಿಗಳ ನಗರಿ~ ಎಂದೇ ಖ್ಯಾತಿ ಪಡೆದಿರುವ ಈ ನಾಡನ್ನು ಆಳಿದ ಮಹಾರಾಜರು ಹಾಕಿದ ಕುಸ್ತಿ ಸಂಸ್ಕಾರದ ಫಲ ಇದು. ಕಲಿಭೀಮ ಎಂದೇ ಹೆಸರಾಗಿದ್ದ ನರಸರಾಜ ಒಡೆಯರು, ಮುಮ್ಮಡಿ ಕೃಷ್ಣರಾಜ ಒಡೆಯರು, ಚಾಮರಾಜ ಒಡೆಯರು ಕುಸ್ತಿಯ ಬೆಳವಣಿಗೆಗೆ ನೀಡಿದ ಪ್ರೋತ್ಸಾಹ ಅವಿಸ್ಮರಣೀಯ. <br /> <br /> ದಸರಾ ಸಂದರ್ಭದಲ್ಲಿ ಬೇರೆ ಸಂಸ್ಥಾನಗಳಿಂದ ಪೈಲ್ವಾನರನ್ನು ಕರೆಸಿ ಒಂದು ತಿಂಗಳು ಅವರಿಗೆ ಊಟ, ವಸತಿ, ಉಪಚಾರಗಳನ್ನು ನೀಡುತ್ತಿದ್ದರು. ದರ್ಬಾರ್ ಭಕ್ಷಿ. ಕಿಲ್ಲೇದಾರ್ ಭಕ್ಷಿ ಸ್ಥಾನಗಳಲ್ಲಿರುವವರು ಕುಸ್ತಿ ಮಾಡಬೇಕಾದ ಸೂಕ್ತ ಜೋಡಿಗಳನ್ನು ನಿರ್ಧರಿಸುತ್ತಿದ್ದರು. <br /> <br /> ಇದರಲ್ಲಿ ಯಾವುದೇ ತಾರತಮ್ಯಕ್ಕೆ ಅವಕಾಶವೇ ಇರಲಿಲ್ಲ. ಒಂದು ತಿಂಗಳ ಅವಧಿಯಲ್ಲಿ ಪೈಲ್ವಾನರ ಅಭ್ಯಾಸ, ವ್ಯಾಯಾಮದ ರೀತಿಗಳನ್ನು ಗಮನಿಸಿ ಜೋಡಿಗಳನ್ನು ನಿರ್ಧರಿಸುತ್ತಿದ್ದರು. <br /> <br /> ಅರಮನೆ ಮುಂದೆ ವಿಜಯದಶಮಿಯಂದು ನಡೆಯುತ್ತಿದ್ದ ಕುಸ್ತಿ ವೀಕ್ಷಿಸಲು ದೇಶವಿದೇಶಗಳಿಂದಲೂ ಪ್ರೇಕ್ಷಕರು ಬರುತ್ತಿದ್ದರು. ಅತ್ಯಂತ ತುರುಸಿನ ಕುಸ್ತಿ ನಡೆಯುತ್ತಿದ್ದವು. ಅಂತ್ಯದಲ್ಲಿ ಗೆದ್ದವರಿಗೆ ಮತ್ತು ಸೋತವರಿಗೆ ಇಬ್ಬರಿಗೂ ಸಮಾನ ಗೌರವ ಸಿಗುತ್ತಿತ್ತು. <br /> <br /> ಇಲ್ಲಿ ಕ್ರೀಡಾ ಮನೋಭಾವವೇ ಶ್ರೇಷ್ಠ ಎಂದು ತಿಳಿದಿದ್ದ ಮಹಾರಾಜರು ಇಬ್ಬರಿಗೆ ಸಮಪ್ರಮಾಣದ ಪ್ರಶಸ್ತಿ ಪುರಸ್ಕಾರಗಳನ್ನು ಕೊಟ್ಟು ಗೌರವಿಸುತ್ತಿದ್ದರು. ಸ್ಪರ್ಧೆಯಲ್ಲಿ ಸೋಲು ಗೆಲುವು ಸಹಜ. ಅದರ ಹಿಂದಿನ ಶ್ರಮ ಮಾತ್ರ ಒಂದೇ ಎಂಬ ಭಾವ ಅವರದ್ದಾಗಿತ್ತು. <br /> <br /> <strong>ಪ್ರೀತಿ ಉಳಿಯಿತು; </strong>ಕುಸ್ತಿ?: ಇದೆಲ್ಲದರ ಪರಿಣಾಮವಾಗಿ ಇಲ್ಲಿಯ ಜನರ ರಕ್ತದಲ್ಲಿ ಕುಸ್ತಿ ಪ್ರೀತಿಯು ಗಟ್ಟಿಯಾಗಿ ಉಳಿಯಿತು. ಆದರೆ, ಇಂದಿನ ಆಡಳಿತ ವ್ಯವಸ್ಥೆಯ ಅನಾದರದಿಂದ ಎಷ್ಟು ಎತ್ತರಕ್ಕೆ ಈ ಕಲೆ ಬೆಳೆಯಬೇಕಿತ್ತೋ ಅಷ್ಟು ಬೆಳೆಯಲಿಲ್ಲ. <br /> <br /> ಕೇವಲ ಸಂಪ್ರದಾಯ ಮತ್ತು ಕಲೆಯಾಗಿಯೇ ಉಳಿದ ಕುಸ್ತಿಯನ್ನು ಅಂತರರಾಷ್ಟ್ರೀಯ ಕ್ರೀಡೆಯ ಮಟ್ಟಕ್ಕೆ ಬೆಳೆಸುವಲ್ಲಿ ಮೈಸೂರು ಇನ್ನೂ ಸಫಲವಾಗಿಲ್ಲ. ಪೈಲ್ವಾನರ ಕಣಜಗಳೇ ಆಗಿರುವ ಹರಿಯಾಣ, ಪಂಜಾಬ್ ಮತ್ತು ಮಹಾರಾಷ್ಟ್ರಗಳಲ್ಲಿ ಕುಸ್ತಿಯನ್ನು ಕಲೆಯಂತೆ ಆರಾಧಿಸಿದರೂ ಕ್ರೀಡೆಯಾಗಿ ಬೆಳೆಸುವಲ್ಲಿ ಹಿಂದೆ ಬೀಳಲಿಲ್ಲ. <br /> <br /> ಆ ಕೆಲಸ ಉತ್ತರ ಕರ್ನಾಟಕದಲ್ಲಿ ಸ್ವಲ್ಪಮಟ್ಟಿಗೆ ಆಯಿತು. ಒಲಿಂಪಿಯನ್ ಎಂ.ಆರ್. ಪಾಟೀಲ, ದೋಹಾ ಏಷ್ಯನ್ ಗೇಮ್ಸನಲ್ಲಿ ಕಂಚು ಗೆದ್ದ ವಿನಾಯಕ ದಳವಿ ಬೆಳಗಾವಿ ಜಿಲ್ಲೆಯ ಹೆಮ್ಮೆಯ ಕುಸ್ತಿಪಟುಗಳು. <br /> <br /> ದಾವಣಗೆರೆ ಕೂಡ ಉತ್ತಮ ಕುಸ್ತಿಪಟುಗಳನ್ನು ಬೆಳೆಸುವಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ಕಾರಣ ಇಲ್ಲಿ ಫ್ರೀಸ್ಟೈಲ್ ಮತ್ತು ಗ್ರಿಕೋ ರೋಮನ್ ಕುಸ್ತಿಯನ್ನು ಗಂಭೀರವಾಗಿ ಅಳವಡಿಸಿಕೊಂಡಿರುವುದು. <br /> <br /> ಅಂತರರಾಷ್ಟ್ರೀಯ ಕುಸ್ತಿ ಫೆಡರೇಷನ್ (ಫಿಲಾ) ಮತ್ತು ಒಲಿಂಪಿಕ್ಸ್ನಿಂದ ಮಾನ್ಯತೆ ಪಡೆದ ಈ ಎರಡೂ ಪ್ರಕಾರಗಳನ್ನು ಮ್ಯಾಟ್ ಮೇಲೆ ಆಡಲಾಗುತ್ತದೆ. <br /> <br /> ಮನೆಗೊಬ್ಬ ಕುಸ್ತಿಪಟು ಸಿಗುವ ಮೈಸೂರಿನಲ್ಲಿ ಮಾತ್ರ ಇವೆರಡೂ ವಿಧಗಳನ್ನು ಬೆಳೆಸುವ ಕಾರ್ಯ ನಿರೀಕ್ಷೆಯಂತೆ ನಡೆಯುತ್ತಿಲ್ಲ. ಮೈಸೂರು ವಿಶ್ವವಿದ್ಯಾಲಯದಲ್ಲಿ ಮಾತ್ರ ಮ್ಯಾಟ್ ಕುಸ್ತಿಗೆ ಆದ್ಯತೆ ಸಿಕ್ಕಿದೆ.<br /> <br /> ಆದರೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ಸ್ಥಳೀಯ ಕುಸ್ತಿಪ್ರೇಮಿಗಳು ಈ ಬಗ್ಗೆ ಹೆಚ್ಚು ಪ್ರಯತ್ನ ಮಾಡಿಲ್ಲ. ಇಡೀ ಮೈಸೂರು ಜಿಲ್ಲೆಯಲ್ಲಿ ಇರುವ 244 ಗರಡಿಮನೆಗಳ ಪೈಕಿ 72 ಗರಡಿಗಳು ಮೈಸೂರು ನಗರದಲ್ಲಿಯೇ ಇವೆ. <br /> <br /> ಆದರೂ ಕ್ರೀಡಾ ಇಲಾಖೆಗೆ ಒಬ್ಬ ಕುಸ್ತಿ ಕೋಚ್ ಇಲ್ಲದೇ ಐದು ವರ್ಷಗಳೇ ಕಳೆದುಹೋಗಿವೆ. <br /> <br /> `ನಾಡಕುಸ್ತಿಗೆ (ಮಟ್ಟಿಯ ಮೇಲೆ) ಹೆಸರುವಾಸಿಯಾದ ಮೈಸೂರಿನಲ್ಲಿ ಅಪ್ರತಿಮ ಕುಸ್ತಿಪಟುಗಳು ಇದ್ದರು. ಈಗಲೂ ಸಾಕಷ್ಟು ಪ್ರತಿಭೆಗಳಿವೆ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕಾದರೆ ಫ್ರೀಸ್ಟೈಲ್ ಮತ್ತು ಗ್ರಿಕೋ ರೋಮನ್ ಕುಸ್ತಿ ಕಲಿಯಬೇಕು. <br /> <br /> ಅದಕ್ಕಾಗಿ ನುರಿತ ತರಬೇತುದಾರರ ಅಗತ್ಯವಿದೆ. ಈ ಕುರಿತು ಹಲವಾರು ಬಾರಿ ಇಲಾಖೆಗೆ ಪತ್ರ ಬರೆದರೂ ಫಲ ನೀಡಿಲ್ಲ~ ಎಂದು ಗರಡಿ ಸಂಘದ ಅಧ್ಯಕ್ಷ ಯಜಮಾನ್, ಪೈಲ್ವಾನ್ ಮಹಾದೇವ್ ಹೇಳುತ್ತಾರೆ. <br /> <br /> ದಾವಣಗೆರೆ, ಧಾರವಾಡ, ಬೆಳಗಾವಿ ಮಾದರಿಯಲ್ಲಿ ಕುಸ್ತಿಗಾಗಿಯೇ ಇಲ್ಲೊಂದು ಕ್ರೀಡಾ ವಸತಿ ಶಾಲೆ ಬೇಕು ಎನ್ನುವ ಬೇಡಿಕೆಗೂ ಸ್ಪಂದನೆ ಸಿಕ್ಕಿಲ್ಲ.ನಗರಪ್ರದೇಶದಲ್ಲಿ, ಅಕ್ಕಪಕ್ಕದ ಹಳ್ಳಿಗಳಲ್ಲಿ ಇವತ್ತಿಗೂ ಸಾಕಷ್ಟು ಕುಸ್ತಿ ಪ್ರತಿಭೆಗಳಿವೆ. <br /> <br /> ಬದಲಾದ ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳಲ್ಲಿ ಅವರು ತೊಳಲಾಡುತ್ತಿದ್ದಾರೆ. ಜಾತ್ರೆ, ಉತ್ಸವಗಳ ಕುಸ್ತಿಯಲ್ಲಿ ಮಿಂಚಿ ಒಂದಿಷ್ಟು ಗೌರವ-ಧನ ಸಂಪಾದಿಸಿದರೆ ಸಾಕು ಎನ್ನುವ ಸೀಮಿತಕ್ಕೆ ಒಳಗಾದವರೇ ಹೆಚ್ಚು. <br /> <br /> ಈ ಪ್ರತಿಭೆಗಳ ಸಮೂಹದಲ್ಲಿ ವಿಶ್ವಚಾಂಪಿಯನ್ ಸುಶೀಲಕುಮಾರ್ ಅವರಂತಹ ಒಬ್ಬರಾದರೂ ಸಿಕ್ಕೇ ಸಿಗುತ್ತಾರೆ. ಆದರೆ ಹುಡುಕುವ ಪ್ರಯತ್ನ ಆಗಬೇಕು. ಏಕೆಂದರೆ ಯಾವುದೇ ಆಟದ ಬೆಳವಣಿಗೆಗೆ ಚಾಂಪಿಯನ್ನರೇ ಕಾರಣ. <br /> <br /> ಅವರ ಪ್ರೇರಣೆಯಿಂದಲೇ ಮತ್ತಷ್ಟು ಪ್ರತಿಭೆಗಳು ಬೆಳಕಿಗೆ ಬರುತ್ತವೆ. ದಸರೆಯ ಪರಂಪರೆಯಾಗಿ ಬೆಳೆದ ಕುಸ್ತಿ ಪ್ರತಿಭೆಗಳು ಅಂತರರಾಷ್ಟ್ರೀಯ ಪದಕಗಳ ಬೇಟೆಗೆ `ಸೀಮೋಲ್ಲಂಘನ~ ಮಾಡಿದಾಗ ಮಾತ್ರ ನಾಡಿಗೂ, ಕ್ರೀಡೆಗೂ ಶ್ರೇಯ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>