ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಗಗನಕ್ಕೆ ನೆಗೆದ ನೋಟು ವಹಿವಾಟು

Last Updated 2 ಜನವರಿ 2023, 21:20 IST
ಅಕ್ಷರ ಗಾತ್ರ

₹500 ಮತ್ತು ₹1,000 ಮುಖಬೆಲೆಯ ಕರೆನ್ಸಿ ನೋಟುಗಳನ್ನು ಅಮಾನ್ಯ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2016ರ ನವೆಂಬರ್‌ 8ರಂದು ಘೋಷಿಸಿದ್ದರು. ಕಪ್ಪುಹಣವನ್ನು ಬಯಲಿಗೆಳೆಯುವುದು, ನಗದು ಹರಿವನ್ನು ಕಡಿಮೆ ಮಾಡುವುದು, ಡಿಜಿಟಲ್‌ ವಹಿವಾಟು ಹೆಚ್ಚಿಸುವುದು ಮುಂತಾದವುಗಳು ಇದರ ಉದ್ದೇಶ ಎಂದು ಹೇಳಲಾಗಿತ್ತು. ನೋಟು ರದ್ದತಿಯ ಬಳಿಕ 2016ರಲ್ಲಿ ನಗದು ಚಲಾವಣೆಯು ₹9 ಲಕ್ಷ ಕೋಟಿಗೆ ಇಳಿದಿತ್ತು. ನಂತರದ ದಿನಗಳಲ್ಲಿ ಚಲಾವಣೆಯಲ್ಲಿದ್ದ ನಗದು ಪ್ರಮಾಣವು ಏರಿಕೆಯಾಗುತ್ತಲೇ ಸಾಗಿದೆ. 2017ರಲ್ಲಿ ದೇಶದಲ್ಲಿ ನಗದು ಹರಿವು ₹13.35 ಲಕ್ಷ ಕೋಟಿಗೆ ಏರಿತ್ತು.

ನೋಟು ರದ್ದತಿಯಾಗಿ ಆರು ವರ್ಷಗಳ ಬಳಿಕವೂ ವಹಿವಾಟಿನಲ್ಲಿ ನಗದಿನ ಸ್ಥಾನಕ್ಕೆ ಚ್ಯುತಿ ಬಂದಿಲ್ಲ ಎಂಬುದು ಕಂಡು ಬರುತ್ತದೆ. ದೇಶದಲ್ಲಿದ್ದ ನಗದು ಹರಿವಿನ ಶೇ 86ರಷ್ಟು ನೋಟುಗಳನ್ನು ರದ್ದತಿಯಿಂದಾಗಿ ಹಿಂದಕ್ಕೆ ಪಡೆಯಲಾಗಿತ್ತು. ನೋಟು ರದ್ದತಿಯ ಸಂದರ್ಭದಲ್ಲಿ ದೇಶದಲ್ಲಿ ಇದ್ದ ನಗದು ಹರಿವಿನ ಮೊತ್ತವು ₹17.74 ಲಕ್ಷ ಕೋಟಿ ಆಗಿತ್ತು. ನೋಟು ರದ್ದತಿಯಿಂದಾಗಿ ₹15.41 ಲಕ್ಷ ಕೋಟಿ ಮೌಲ್ಯದ ನೋಟುಗಳು ಅಮಾನ್ಯಗೊಂಡಿದ್ದವು. ಇವುಗಳ ಪೈಕಿ ₹15.31 ಲಕ್ಷ ಕೋಟಿ ಮೌಲ್ಯದ ನೋಟುಗಳು ಬ್ಯಾಂಕ್‌ಗಳಿಗೆ ಜಮೆ ಆಗಿದ್ದವು. ಇದು ಅಮಾನ್ಯಗೊಂಡ ನೋಟುಗಳ ಶೇ 99.3ರಷ್ಟು.

ರದ್ದಾದ ನೋಟುಗಳಲ್ಲಿ ಬಹುಪಾಲು ಹಿಂದಕ್ಕೆ ಬಂದಿದ್ದವು. ಹೀಗಾಗಿ, ಕಪ್ಪುಹಣ ಬಯಲಿಗೆಳೆಯವುದು ಮುಂತಾದ ನೋಟು ರದ್ದತಿಯ ಉದ್ದೇಶ ವಿಫಲವಾಗಿದೆಯೇ ಎಂಬ ಪ್ರಶ್ನೆಗಳು ಈ ಹಿಂದೆ ಕೇಳಿ ಬಂದಿದ್ದವು.

ಭಾರತೀಯ ರಿಸರ್ವ್‌ ಬ್ಯಾಂಕ್‌ ದತ್ತಾಂಶದ ಪ್ರಕಾರ, 2022ರ ಡಿಸೆಂಬರ್‌ 23ರಂದು ದೇಶದಲ್ಲಿ ಇದ್ದ ನಗದು ಹರಿವಿನ ಮೌಲ್ಯವು ₹32.42 ಲಕ್ಷ ಕೋಟಿ. 2017ರ ಜನವರಿ 6ಕ್ಕೆ ಹೋಲಿಸಿದರೆ ಈಗ ಚಲಾವಣೆಯಲ್ಲಿರುವ ನಗದು ಮೊತ್ತವು ಸುಮಾರು ಮೂರು ಪಟ್ಟು ಅಥವಾ ಶೇ 260ರಷ್ಟು ಏರಿಕೆಯಾಗಿದೆ. ನೋಟು ರದ್ದತಿಯ ಹಿಂದಿನ ದಿನಗಳಿಗೆ ಹೋಲಿಸಿದರೆ ಚಲಾವಣೆಯಲ್ಲಿ ಇರುವ ನೋಟುಗಳ ಪ್ರಮಾಣವು ಶೇ 83ರಷ್ಟು ಹೆಚ್ಚಳವಾಗಿದೆ.

2022ರ ಡಿಸೆಂಬರ್‌ 2ರಂದು ಚಲಾವಣೆಯಲ್ಲಿದ್ದ ನೋಟುಗಳ ಮೌಲ್ಯ ₹31.92 ಲಕ್ಷ ಕೋಟಿ ಆಗಿತ್ತು. ಇದಕ್ಕೆ ಸರಿಯಾಗಿ ಒಂದು ವರ್ಷ ಹಿಂದೆ ₹29.56 ಲಕ್ಷ ಕೋಟಿ ಮೌಲ್ಯದ ನಗದು ಚಲಾವಣೆಯಲ್ಲಿ ಇತ್ತು. ಒಂದು ವರ್ಷದಲ್ಲಿ ಶೇ 8ರಷ್ಟು ಏರಿಕೆ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಸಭೆಗೆ 2022ರ ಡಿಸೆಂಬರ್‌ 19ರಂದು ಮಾಹಿತಿ ನೀಡಿದ್ದರು.

ಚಲಾವಣೆಯಲ್ಲಿರುವ ನೋಟುಗಳ ಮೌಲ್ಯದಲ್ಲಿ ಮಾತ್ರ ಹೆಚ್ಚಳ ಆಗಿದ್ದಲ್ಲ. ನೋಟುಗಳ ಸಂಖ್ಯೆಯಲ್ಲಿಯೂ ಭಾರಿ ಪ್ರಮಾಣದ ಏರಿಕೆ ಆಗಿದೆ. ನೋಟು ರದ್ದತಿಗೆ ಮೊದಲು 9 ಕೋಟಿಗೂ ಹೆಚ್ಚು ಸಂಖ್ಯೆಯ ನೋಟುಗಳು ಚಲಾವಣೆಯಲ್ಲಿ ಇದ್ದವು. 2022 ಮಾರ್ಚ್‌ 31ಕ್ಕೆ ಈ ಸಂಖ್ಯೆಯು 13 ಕೋಟಿಗಿಂತಲೂ ಹೆಚ್ಚಾಗಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಹೊರಡಿಸುವ ₹2, ₹5, ₹10, ₹20, ₹50, ₹100, ₹200, ₹500 ಮತ್ತು ₹2,000ದ ನೋಟುಗಳು ಇದರಲ್ಲಿ ಒಳಗೊಂಡಿವೆ.

ನಗದು ಬಳಕೆಗೆ ಕಾರಣವೇನು?: ಭಾರತವು ಹಿಂದಿನಿಂದಲೂ ನಗದು ಕೇಂದ್ರಿತ ಅರ್ಥ ವ್ಯವಸ್ಥೆಯಾಗಿದೆ. ಆಸ್ತಿ ಖರೀದಿ ಮತ್ತು ಮಾರಾಟ, ಬಳಸಿದ ವಾಹನಗಳ ಖರೀದಿ ಮತ್ತು ಮಾರಾಟ, ಚಿಲ್ಲರೆ ಮಾರಾಟದ ಅಂಗಡಿಗಳಲ್ಲಿ ಬಹುತೇಕ ವಹಿವಾಟು ನಗದಿನ ಮೂಲಕವೇ ನಡೆಯುತ್ತದೆ. ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಗದು ಮೂಲಕ ವಹಿವಾಟು ಹೆಚ್ಚುತ್ತಲೇ ಇದೆ. ಡಿಜಿಟಲ್‌ ವಹಿವಾಟಿನ ಕುರಿತು ತಿಳಿವಳಿಕೆ ಇಲ್ಲದಿರುವುದು, ಇಂಟರ್‌ನೆಟ್‌ ಅಲಭ್ಯತೆ, ನಗದು ಎಲ್ಲೆಡೆಯೂ ಸ್ವೀಕಾರಾರ್ಹ ಆಗಿರುವುದು ಜನರು ನಗದನ್ನೇ ಹೆಚ್ಚು ನೆಚ್ಚಿಕೊಳ್ಳಲು ಇರುವ ಕಾರಣಗಳು.

ಡಿಜಿಟಲ್‌ ವಹಿವಾಟಿನ ಕುರಿತು ಜಾಗೃತಿ ಮತ್ತು ಅರಿವು ಮೂಡಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಅದು ಫಲಪ್ರದವೂ ಆಗಿದೆ. ಒಟ್ಟು ವಹಿವಾಟಿನಲ್ಲಿ ಡಿಜಿಟಲ್‌ ಪಾವತಿಯ ಪ್ರಮಾಣವು 2015–16ರಲ್ಲಿ ಶೇ 11.26ರಷ್ಟು ಇತ್ತು.
2021–22ರಲ್ಲಿ ಅದು ಹಲವು ಪಟ್ಟು ಏರಿಕೆಯಾಗಿದೆ. 2026–27ರ ಹೊತ್ತಿಗೆ ಅದು ಗರಿಷ್ಟ ಮಟ್ಟಕ್ಕೆ ತಲುಪಬಹುದು ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು 2016ರ ನವೆಂಬರ್ 8ರಂದು ರಾತ್ರಿ ಎಂಟು ಗಂಟೆಗೆ ಟಿ.ವಿ. ಭಾಷಣದಲ್ಲಿ ನೋಟು ರದ್ದತಿ ನಿರ್ಧಾರವನ್ನು ಪ್ರಕಟಿಸಿದರು. ನೋಟು ರದ್ದತಿ ನಿರ್ಧಾರದ ಬಗ್ಗೆ ತೀವ್ರವಾದ ಟೀಕೆಯು ಎದುರಾಗಿತ್ತು. ನೋಟು ರದ್ದತಿ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಪ್ರತಿಪಕ್ಷಗಳು ಸರ್ಕಾರದ ನಿರ್ಧಾರದ ವಿರುದ್ಧ ಟೀಕಾಪ್ರಹಾರ ಮಾಡಿದವು.

‘ಕಾಗದದ ತುಂಡು’: ‘ಇಂದು ಮಧ್ಯರಾತ್ರಿಯಿಂದ ₹500 ಹಾಗೂ ₹1,000 ಮುಖಬೆಲೆಯ ನೋಟುಗಳು ಕೇವಲ ಕಾಗದದ ತುಂಡುಗಳು’ ಎಂದು ಪ್ರಧಾನಿ ಹೇಳಿದರು. ದೇಶದ ಜನರಿಗೆ ಅಚ್ಚರಿ, ಗೊಂದಲ ಹಾಗೂ ಆಘಾತ ಒಟ್ಟೊಟ್ಟಿಗೇ ಎದುರಾದವು. ಜನರು ತಮ್ಮಲ್ಲಿರುವ ಐನೂರು ಹಾಗೂ ಸಾವಿರ ರೂಪಾಯಿಯ ನೋಟುಗಳನ್ನು ಬ್ಯಾಂಕ್‌ಗಳಿಗೆ ನೀಡಿ, ಬದಲಿಸಿಕೊಳ್ಳಲು ಮತ್ತು ಹಳೆ ನೋಟುಗಳನ್ನು ತಮ್ಮ ಖಾತೆಗಳಿಗೆ ಜಮಾ ಮಾಡಲು 52 ದಿನಗಳ ಕಾಲಾವಕಾಶ ನೀಡಿದರು.

ಜನರ ಬವಣೆಗೆ ಹೊಣೆ ಯಾರು?

ನೋಟು ರದ್ದತಿಯ ದಿಢೀರ್ ನಿರ್ಧಾರದಿಂದ ದಿಕ್ಕು ತೋಚದಂತಾದ ಜನಸಾಮಾನ್ಯರು, ತಮ್ಮಲ್ಲಿದ್ದ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಕಷ್ಟಪಟ್ಟರು. ಬಿಸಿಲು, ಮಳೆಯ ನಡುವೆ ಬ್ಯಾಂಕ್‌ಗಳ ಮುಂದೆ ದಿನವಿಡೀ ಸರತಿಯಲ್ಲಿ ಕಾಯಬೇಕಾಯಿತು. ನಿತ್ಯದ ಕೆಲಸಗಳನ್ನು ಬಿಟ್ಟು, ಹಣ ತೆಗೆಯಲು ಎಟಿಎಂಗಳ ಮುಂದೆ ಸಾಲುಗಟ್ಟಿದರು. ವಯಸ್ಸಾದವರು ಹಾಗೂ ಮಹಿಳೆಯರು ನಿತ್ರಾಣಗೊಂಡರು. ಹಣ ತೆಗೆಯಲು ಮಿತಿ ಇದ್ದುದರಿಂದ, ಪದೇ ಪದೇ ಬ್ಯಾಂಕ್‌ ಹಾಗೂ ಎಟಿಎಂಗಳಿಗೆ ಎಡತಾಕಬೇಕಾದ ಸ್ಥಿತಿ ಎದುರಾಯಿತು. ದಿನಗೂಲಿ ಕಾರ್ಮಿಕರು ತಮ್ಮ ದೈನಂದಿನ ಕೂಲಿ ಕಳೆದುಕೊಳ್ಳಬೇಕಾಯಿತು. ನಗದು ಹಣದ ಮೇಲೆ ಅವಲಂಬಿತರಾಗಿದ್ದ ಹಳ್ಳಿಗರು ಹಾಗೂ ಸಣ್ಣ ಪಟ್ಟಣಗಳ ನಿವಾಸಿಗಳು ಬ್ಯಾಂಕ್ ಹಾಗೂ ಎಟಿಎಂ ಸೌಲಭ್ಯವಿರುವ ನಗರಗಳಿಗೆ ಬರುವ ಅನಿವಾರ್ಯ ಸೃಷ್ಟಿಯಾಯಿತು. ಈ ಪ್ರಕ್ರಿಯೆಯಲ್ಲಿ ಹತ್ತಾರು ಜನ ಪ್ರಾಣ ಕಳೆದುಕೊಂಡರು.

ಹೇಳಿದ್ದೊಂದು ಆಗಿದ್ದೊಂದು

₹15 ಲಕ್ಷ ಕೋಟಿ ಹಣದ ಪೈಕಿ ಸುಮಾರು ₹4ರಿಂದ ₹5 ಲಕ್ಷ ಕೋಟಿಯಷ್ಟು ಹಣವು ಹಿಂದಿರುಗಿ ಬರುವುದಿಲ್ಲ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಸುಪ್ರೀಂ ಕೋರ್ಟ್‌ಗೆ ಹೇಳಿದ್ದರು. ವಾಪಸ್ ಬಾರದ ಈ ಹಣವು ಬಹುತೇಕ ‘ಕಪ್ಪುಹಣ’ ಆಗಿರುತ್ತದೆ ಎಂಬುದು ಸರ್ಕಾರದ ಅಂದಾಜು ಆಗಿತ್ತು. ನೋಟು ರದ್ದತಿಯ ಬಳಿಕ, ಇಷ್ಟು ಮೊತ್ತದ ಕಪ್ಪುಹಣದ ಚಲಾವಣೆ ಸ್ಥಗಿತಗೊಂಡಂತಾಗುತ್ತದೆ ಎಂದು ಅವರು ಹೇಳಿದ್ದರು. ಆದರೆ ನೋಟು ರದ್ದತಿ ನಿರ್ಧಾರ ಪ್ರಕಟಿಸಿದ ಕೇವಲ 35 ದಿನಗಳ ಒಳಗಾಗಿ ಶೇ 80ರಷ್ಟು ಹಣವು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿತು. ಇದು ಸರ್ಕಾರದ ನೋಟು ರದ್ದತಿ ನಿರ್ಧಾರವನ್ನು ಪ್ರಶ್ನೆ ಮಾಡುವಂತೆ ಮಾಡಿತು.

ಉದ್ದೇಶ: ನಾಲ್ಕು, ನಲವತ್ತಾದಾಗ

ದಿಢೀರ್ ನೋಟು ರದ್ದತಿಗೆ ಸರ್ಕಾರ ಆರಂಭದಲ್ಲಿ ನಾಲ್ಕು ಕಾರಣಗಳನ್ನು ಮುಂದಿಟ್ಟಿತ್ತು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು, ಕಪ್ಪು ಹಣವನ್ನು ನಿಯಂತ್ರಿಸುವುದು, ಖೋಟಾ ನೋಟು ಚಲಾವಣೆ ತಡೆಯುವುದು ಹಾಗೂ ಭಯೋತ್ಪಾದಕರಿಗೆ ಹಣಕಾಸು ನೆರವು ಸಿಗದಂತೆ ನೋಡಿಕೊಳ್ಳುವುದು ಆ ಕಾರಣಗಳು.ಆದರೆ, ಶೇ 80ರಷ್ಟು ಹಣ ಚಲಾವಣೆಗೆ ಬರುತ್ತಿದ್ದಂತೆಯೇ ಸರ್ಕಾರದ ವರಸೆ ಬದಲಾಯಿತು. ಕಪ್ಪುಹಣ ನಿಯಂತ್ರಿಸುವುದಷ್ಟೇ ನೋಟು ರದ್ದತಿ ನಿರ್ಧಾರಕ್ಕೆ ಮುಖ್ಯ ಕಾರಣವಲ್ಲ ಎಂದು ಸರ್ಕಾರ ಹೇಳಿತ್ತು. ಆರ್ಥಿಕತೆಯಲ್ಲಿ ಅಚ್ಚುಕಟ್ಟುತನ ತರುವುದು, ನಗದುರಹಿತ ಆರ್ಥಿಕತೆ ರೂಪಿಸುವುದು, ನಗದು ಹಣದ ಮೇಲಿನ ಅವಲಂಬನೆ ಕಡಿಮೆ ಮಾಡುವುದು, ಡಿಜಿಟಲ್ ವಹಿವಾಟು ಪ್ರೋತ್ಸಾಹಿಸುವುದು, ತೆರಿಗೆ ಸಂಗ್ರಹ ಹೆಚ್ಚಿಸುವುದೂ ಒಳಗೊಂಡಂತೆ ಸರ್ಕಾರ ಹತ್ತಾರು ಕಾರಣಗಳನ್ನು ಒಟ್ಟುಗೂಡಿಸಿತು. ಆದರೆ, ಮೋದಿ ಅವರ ಮೂಲ ಭಾಷಣದಲ್ಲಿ ಇವು ಉಲ್ಲೇಖವಾಗಿರಲಿಲ್ಲ.

42 ದಿನಗಳಲ್ಲಿ 54 ಸುತ್ತೋಲೆ

2016ರ ಡಿಸೆಂಬರ್ 30ರವರೆಗೂ ಹಳೆಯ ನೋಟುಗಳನ್ನು ಜನರು ಬ್ಯಾಂಕ್‌ಗಳಲ್ಲಿ ಠೇವಣಿ ಇಡಬಹುದು ಎಂದು ಪ್ರಧಾನಿ ನ.8ರಂದು ಪ್ರಕಟಿಸಿದ್ದರು. ಠೇವಣಿಗೆ ಮಿತಿ ಇರಲಿಲ್ಲ. ಈ ಬಳಿಕ, ಪ್ರತಿದಿನವೂ ಹೊಸ ನಿಯಮಗಳು ಬರಲು ಆರಂಭಿಸಿದವು. ಅಲ್ಲಿಂದ 42 ದಿನಗಳ ಅವಧಿಯಲ್ಲಿ 54 ಹೊಸ ಸುತ್ತೋಲೆಗಳನ್ನು ಆರ್‌ಬಿಐ ಹಾಗೂ ಸರ್ಕಾರ ಪ್ರಕಟಿಸಿದವು. ಜನರು ನಿಯಮಾವಳಿಗಳ ಗೊಂದಲದಲ್ಲಿ ಸಿಲುಕಿದರು. ಯಾವುದು ಹೊಸದು, ಯಾವುದು ಹಳೆಯದು ಎಂದು ಗೊತ್ತಾಗದಷ್ಟು ಗೊಂದಲ ಏರ್ಪಟ್ಟಿತು.

ಬ್ಯಾಂಕ್‌ಗಳಲ್ಲಿ ₹4,000 ಮೌಲ್ಯದ ನೋಟು ಬದಲಿಸಿಕೊಳ್ಳಬಹುದು, ಎಟಿಎಂಗಳಲ್ಲಿ ₹2,000 ನಗದು ಹಿಂಪಡೆಯಬಹುದು, ಬ್ಯಾಂಕ್‌ ಶಾಖೆಗಳಲ್ಲಿ ದಿನಕ್ಕೆ ₹10,000 ಮತ್ತು ವಾರಕ್ಕೆ ₹20,000 ಹಣ ಹಿಂಪಡೆಯಬಹುದು ಎಂಬ ಮಿತಿಯನ್ನು ಪ್ರಧಾನಿ ಮೊದಲು ಪ್ರಕಟಿಸಿದ್ದರು. ನ.13ಕ್ಕೆ ಜಾರಿಗೆ ಬಂದ ಹೊಸ ನಿಯಮದ ಪ್ರಕಾರ, ನೋಟು ಬದಲಾವಣೆಯ ಮೊತ್ತವನ್ನು ₹4,500ಕ್ಕೆ, ಎಟಿಎಂನಲ್ಲಿ ಹಣ ಹಿಂತೆಗೆಯುವ ಮೊತ್ತವನ್ನು ₹2,500ಕ್ಕೆ ಹೆಚ್ಚಿಸಲಾಯಿತು.

ಜನರು ಹಣವನ್ನು ವಾಪಸ್ ಪಡೆಯಲು ಹಲವು ದಾರಿ ಕಂಡುಕೊಂಡರು. ಹೀಗಾಗಿ ನೋಟು ಬದಲಾವಣೆಗೆ ಬಂದ ಗ್ರಾಹಕರ ಬೆರಳಿಗೆ ಶಾಯಿ ಹಾಕುವ ಹೊಸ ನಿಯಮ ನ.15ರಂದು ಜಾರಿಗೆ ಬಂದಿತು. ಬ್ಯಾಂಕ್‌ಗಳಲ್ಲಿ ನೋಟು ಬದಲಾಯಿಸಿಕೊಳ್ಳುವ ಮಿತಿಯನ್ನು ಮತ್ತೆ ₹2,000ಕ್ಕೆ ತಗ್ಗಿಸುವ ನಿಯಮ ನ.17ರಂದು ಬಂದಿತು. ಮದುವೆ ಖರ್ಚುಗಳಿಗೆ ₹2.5 ಲಕ್ಷದ ಮಿತಿ ವಿಧಿಸುವ ಮತ್ತೊಂದು ಸುತ್ತೋಲೆ ಬಂದಿತು.

₹2 ಲಕ್ಷಕ್ಕಿಂತ ಹೆಚ್ಚು ಹಣವನ್ನು ಜಮೆ ಮಾಡಿದವರು ಹಣ ವರ್ಗಾವಣೆ ಮಾಡಬೇಕಾದರೆ, ಪ್ಯಾನ್/ಆಧಾರ್ ಕಡ್ಡಾಯ ಮಾಡಲಾಯಿತು. ₹5,000ಕ್ಕಿಂತ ಹೆಚ್ಚು ಮೌಲ್ಯದ ಹಳೆಯ ನೋಟುಗಳನ್ನು ಡಿ.30ರೊಳಗೆ ಒಮ್ಮೆ ಮಾತ್ರ ಬದಲಿಸಿಕೊಳ್ಳುವ ಇನ್ನೊಂದು ಆದೇಶ ಡಿ.19ರಂದು ಬಂದಿತು. ವಿರೋಧ ವ್ಯಕ್ತವಾಗುತ್ತಿದ್ದಂತೆಯೇ, ಈ ಆದೇಶ ರದ್ದುಗೊಂಡಿತು. ಜನರ ಆಕ್ರೋಶವನ್ನು ತಣಿಸುವುದು ಹಾಗೂ ಜನರು ಬ್ಯಾಂಕ್‌ಗಳಿಗೆ ನುಗ್ಗುವುದನ್ನು ನಿಯಂತ್ರಿಸಲು ಸರ್ಕಾರ ಹಾಗೂ ಆರ್‌ಬಿಐ ಸುತ್ತೋಲೆ ಮೇಲೆ ಸುತ್ತೋಲೆಗಳನ್ನು ಹೊರಡಿಸಿ ದಾಖಲೆ ಸೃಷ್ಟಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT