ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಎನ್‌ಜಿಒಗಳ ನಿಧಿಗೆ ಸರ್ಕಾರದ ಕತ್ತರಿ

Last Updated 2 ಜನವರಿ 2022, 19:31 IST
ಅಕ್ಷರ ಗಾತ್ರ

‘ಭಾರತದಲ್ಲಿ ನಾವು ಹಿಂದೆಂದೂ ಎದುರಿಸಿಲ್ಲದಂತಹ ಪರಿಸ್ಥಿತಿ ಎದುರಿಸುತ್ತಿದ್ದೇವೆ. ‘ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ’ ಮೇಲೆ ಸರ್ಕಾರದಿಂದ ವ್ಯವಸ್ಥಿತವಾದ ದಾಳಿ, ಬೆದರಿಕೆ ಮತ್ತು ಕಿರುಕುಳ ನಡೆಯುತ್ತಿದೆ. ಮಾನವ ಹಕ್ಕುಗಳ ಕುರಿತು ನಾವು ನಡೆಸುತ್ತಿರುವ ಕೆಲಸವೇ ಇದಕ್ಕೆ ಕಾರಣ. ದೆಹಲಿಯಲ್ಲಿ ನಡೆದ ಗಲಭೆಯ ಬಗ್ಗೆ ಆಗಿರಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಧ್ವನಿ ದಮನದ ಬಗ್ಗೆ ಆಗಿರಲಿ, ನಾವು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರಕ್ಕೆ ಇಷ್ಟ ಇಲ್ಲ’. ಇದು ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಎನ್‌ಜಿಒದ ಸಂಶೋಧನೆ, ಪ್ರತಿಪಾದನೆ ಮತ್ತು ನೀತಿ ವಿಭಾಗದ ಹಿರಿಯ ನಿರ್ದೇಶಕ ಆಗಿದ್ದ ರಜತ್‌ ಖೋಸ್ಲಾ ಅವರು ಬಿಬಿಸಿ ಸುದ್ದಿ ವಾಹಿನಿಗೆ 2020ರ ಸೆಪ‍್ಟೆಂಬರ್‌ನಲ್ಲಿ ನೀಡಿದ್ದ ಹೇಳಿಕೆ. ಎನ್‌ಜಿಒ ಮತ್ತು ಸರ್ಕಾರದ ನಡುವಣ ಸಂಘರ್ಷದ ಸ್ಪಷ್ಟ ಚಿತ್ರಣವನ್ನು ಈ ಹೇಳಿಕೆಯು ಕಟ್ಟಿಕೊಡುತ್ತದೆ.

ಭಾರತ ಸರ್ಕಾರದ ದಮನಕಾರಿ ನೀತಿಯಿಂದಾಗಿ ಭಾರತದಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸಲೇಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಆಮ್ನೆಸ್ಟಿ ಇಂಟರ್‌ ನ್ಯಾಷನಲ್‌ 2020ರಲ್ಲಿ ಹೇಳಿತ್ತು ಎಂಬುದನ್ನೂ ಬಿಬಿಸಿ ವರದಿ ಮಾಡಿತ್ತು. 2020ರ ಸೆಪ್ಟೆಂಬರ್‌ನಲ್ಲಿ ಈ ಎನ್‌ಜಿಒ ಭಾರತದಲ್ಲಿನ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿತು. ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಸ್ಥಗಿತಗೊಳಿಸಿದ್ದು ಕಾರ್ಯಾಚರಣೆ ನಿಲ್ಲಿಸಲು ತಕ್ಷಣದ ಕಾರಣವಾಗಿತ್ತು. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನು (ಎಫ್‌ಸಿಆರ್‌ಎ) ಉಲ್ಲಂಘಿಸಿದ ಆರೋಪದಲ್ಲಿ ಸಂಸ್ಥೆಯ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಅದರ ಆಧಾರದಲ್ಲಿ, ಇ.ಡಿ ಕೂಡ ಸಂಸ್ಥೆಯ ವಿರುದ್ಧ 2019ರ ನವೆಂಬರ್‌ನಲ್ಲಿ ತನಿಖೆ ಆರಂಭಿಸಿತ್ತು. ತನಿಖೆಯ ಬಳಿಕ ಸಂಸ್ಥೆಯ ಬ್ಯಾಂಕ್‌ ಖಾತೆಗಳನ್ನು
ಸ್ಥಗಿತಗೊಳಿಸಲಾಗಿತ್ತು.

ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಸಂಸ್ಥೆಯು ಎಡಪಂಥೀಯ ಉಗ್ರವಾದಕ್ಕೆ ಬೆಂಬಲ ನೀಡುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವ ಶರ್ಮಾ ಅವರು ಕೆಲ ತಿಂಗಳ ಹಿಂದೆ ಹೇಳಿದ್ದರು. ‘ಭಾರತವನ್ನು ಅಪಮಾನಿಸುವವರ ಜತೆಗೆ ಅವರೂ (ಆಮ್ನೆಸ್ಟಿ) ಸೇರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಮಸಿ ಬಳಿಯುವ ಅಂತರರಾಷ್ಟ್ರೀಯ ಸಂಚಿನ ಭಾಗ ಇದು’ ಎಂದು ಶರ್ಮಾ ಹೇಳಿದ್ದಾಗಿ ವರದಿಯಾಗಿತ್ತು. ರಾಜಕಾರಣಿಗಳು, ನ್ಯಾಯಾಧೀಶರು, ಪತ್ರಕರ್ತರು ಮುಂತಾದವರ ವಿರುದ್ಧ ಪೆಗಾಸಸ್‌ ಕುತಂತ್ರಾಂಶ ಬಳಸಿ ಗೂಢಚರ್ಯೆ ನಡೆಸಲಾಗಿದೆ ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ವರದಿ ಮಾಡಿದ್ದಕ್ಕೆ ಶರ್ಮಾ ಅವರು ಹೀಗೆ ಪ್ರತಿಕ್ರಿಯೆ ನೀಡಿದ್ದರು. ಆಮ್ನೆಸ್ಟಿಯನ್ನು ನಿಷೇಧಿಸಬೇಕು ಎಂದೂ ಅವರು ಹೇಳಿದ್ದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಆಡಳಿತಾರೂಢ ಬಿಜೆಪಿಗೆ ಎನ್‌ಜಿಒಗಳ ಬಗ್ಗೆ ಅಂತಹ ಒಲವು ಇಲ್ಲ ಎಂಬುದನ್ನು ತೋರಿಸಲು ಇಂತಹ ಹಲವು ನಿದರ್ಶನಗಳು ಸಿಗುತ್ತವೆ. ಸಾವಿರಾರು ಎನ್‌ಜಿಒಗಳ ಎಫ್‌ಸಿಆರ್‌ಎ ರದ್ದತಿಯನ್ನು ಆ ದೃಷ್ಟಿಯಲ್ಲಿ ಕೂಡ ನೋಡಲು ಸಾಧ್ಯವಿದೆ.

ನೊಬೆಲ್‌ ಪುರಸ್ಕೃತೆ ಮದರ್‌ ತೆರೆಸಾ ಅವರು ಸ್ಥಾಪಿಸಿದ್ದ ಮಿಷನರೀಸ್‌ ಆಫ್‌ ಚಾರಿಟಿಯ ಎಫ್‌ಸಿಆರ್‌ಎ ನವೀಕರಣಕ್ಕೆ ನಕಾರ ಕೆಲ ದಿನಗಳ ಹಿಂದೆ ಬಹುದೊಡ್ಡ ಸುದ್ದಿಯಾಗಿತ್ತು. ‘ಕೆಲವು ಪ್ರತಿಕೂಲ ಅಂಶಗಳನ್ನು ಗಮನಿಸಲಾಗಿದೆ’ ಎಂದು ಮಾತ್ರ ನವೀಕರಿಸ
ದಿರಲು ಕೇಂದ್ರ ಗೃಹ ಸಚಿವಾಲಯವು ಕಾರಣ ಕೊಟ್ಟಿತ್ತು. ಹೆಚ್ಚಿನ ವಿವರಗಳನ್ನು ನೀಡಿಲ್ಲ. ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಗಳಿಸಿರುವ ಈ ಸಂಸ್ಥೆಗೆ ವಿದೇಶಿ ಅನುದಾನ ಬರುವುದನ್ನು ತಡೆ ಹಿಡಿದ ಸರ್ಕಾರದ ನಡೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜನರನ್ನು ಅಕ್ರಮವಾಗಿ ಮತಾಂತರ ಮಾಡುತ್ತಿದೆ ಎಂಬ ಆರೋಪವನ್ನೂಈ ಸಂಸ್ಥೆಯ ಮೇಲೆ ಹೊರಿಸಲಾಗಿದೆ. ಮೋದಿ ಅವರ ತವರು ರಾಜ್ಯ ಗುಜರಾತ್‌ನ ವಡೋದರದಲ್ಲಿ ಸಂಸ್ಥೆಯ ವಿರುದ್ಧ ಪ್ರಕರಣವೂ ದಾಖಲಾಗಿದೆ. ಮಿಷನರೀಸ್‌ ಆಫ್‌ ಚಾರಿಟಿಯು ಮತಾಂತರದಲ್ಲಿ ನಿರತವಾಗಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಅವರೂ ಆರೋಪಿಸಿದ್ದಾರೆ.

ಕೆಲವು ಮಹತ್ವದ ಪ್ರತಿಭಟನೆಗಳಿಗೆ ಎನ್‌ಜಿಒಗಳು ಬೆಂಬಲ ನೀಡಿವೆ ಎಂದು ಹಿಂದಿನಿಂದಲೂ ಹೇಳಲಾಗುತ್ತಿದೆ. ತಮಿಳುನಾಡಿನ ಕೂಡಂಕುಳಂ ಅಣು ವಿದ್ಯುತ್‌ ಸ್ಥಾವರದ ವಿರುದ್ಧ 2012ರಲ್ಲಿ ನಡೆದ ಭಾರಿ ಪ್ರತಿಭಟನೆಯಲ್ಲಿ ಎನ್‌ಜಿಒಗಳ ಪಾತ್ರ ಇದೆ ಎಂದು ಹೇಳಲಾಗಿತ್ತು. ಆಗಲೂ, ಆಗಿನ ಸರ್ಕಾರವು ಹಲವು ಎನ್‌ಜಿಒಗಳ ಮೇಲೆ ಮುಗಿಬಿದ್ದಿತ್ತು. ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ಒಂದು ವರ್ಷ ನಡೆದ ಪ್ರತಿಭಟನೆಯ ಹಿಂದೆಯೂ ಎನ್‌ಜಿಒಗಳೇ ಇದ್ದವು ಎಂದೂ ಹೇಳಲಾಗಿತ್ತು. ಹೀಗಾಗಿ, ಎನ್‌ಜಿಒಗಳು ಮತ್ತು ಸರ್ಕಾರದ ನಡುವೆ ಸದಾ ಸಂಘರ್ಷದ ಸ್ಥಿತಿಯೇ ಇರುತ್ತದೆ.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಎನ್‌ಜಿಒ–ಸರ್ಕಾರದ ನಡುವಣ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಐದು ವರ್ಷಗಳಲ್ಲಿ 14,500 ಎನ್‌ಜಿಒಗಳ ಎಫ್‌ಸಿಆರ್‌ಎ ರದ್ದುಪಡಿಸಲಾಗಿದೆ ಎಂದು 2019ರಲ್ಲಿ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಸರ್ಕಾರವೇ ಒಪ್ಪಿಕೊಂಡಿತ್ತು.

ವಿದೇಶಿ ದೇಣಿಗೆ ಹಣ ವರ್ಗಾಯಿಸುವಂತಿಲ್ಲ

‘ವಿದೇಶಿ ದೇಣಿಗೆ (ತಿದ್ದುಪಡಿ) ಮಸೂದೆ 2020’ ಅನ್ನು 2020ರ ಸೆಪ್ಟೆಂಬರ್ 20ರಂದು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ‘ವಿದೇಶಿ ದೇಣಿಗೆ (ತಿದ್ದುಪಡಿ) ಕಾಯ್ದೆ 2010’ರ ಕೆಲವು ಅಂಶಗಳನ್ನು ಹೊಸ ಮಸೂದೆಯಲ್ಲಿ ಮಾರ್ಪಾಡು ಮಾಡಲಾಗಿತ್ತು. ವ್ಯಕ್ತಿಗಳು, ಸಂಸ್ಥೆಗಳು ಹಾಗೂ ಕಂಪನಿಗಳು ನೀಡಿದ ದೇಣಿಗೆಯ ಸ್ವೀಕಾರ ಹಾಗೂ ಬಳಕೆಯನ್ನು ಈ ಕಾಯ್ದೆ ನಿಯಂತ್ರಿಸುತ್ತದೆ.

ವಿದೇಶಿ ದೇಣಿಗೆ ಹಣವನ್ನು ಇತರರಿಗೆ ವರ್ಗಾಯಿಸುವಂತಿಲ್ಲ ಎಂಬ ನಿಯಮವನ್ನು ತಿದ್ದುಪಡಿ ಕಾಯ್ದೆಯಲ್ಲಿ ಅಡಕ ಮಾಡಲಾಗಿದೆ. ವಿದೇಶಿ ದೇಣಿಗೆ ಸ್ವೀಕರಿಸಲುಅನುಮತಿ ಪಡೆದವರು ಅಥವಾ ನೋಂದಾಯಿಸಿಕೊಂಡವರು ಇತರ ವ್ಯಕ್ತಿಗಳು, ಸಂಸ್ಥೆಗಳು ಅಥವಾ ನೋಂದಾಯಿತ ಕಂಪನಿಗಳಿಗೆ ಹಣವನ್ನು ವರ್ಗ ಮಾಡುವಂತಿಲ್ಲ. ದೊಡ್ಡ ಎನ್‌ಜಿಒಗಳು ತಳ ಮಟ್ಟದಲ್ಲಿ ಕೆಲಸ ಮಾಡುವ ಸಣ್ಣ ಎನ್‌ಜಿಒಗಳಿಗೆ ಹಣ ವರ್ಗಾಯಿಸಿ ಅವರ ಮೂಲಕ ತಳಮಟ್ಟದಲ್ಲಿ ಕೆಲಸ ಮಾಡುವುದು ವಾಡಿಕೆ. ಈ ರೀತಿಯ ಕೆಲಸಗಳಿಗೆ ಹೊಸ ನಿಯಮವು ಅಡ್ಡಿ ಮಾಡಿದೆ ಎಂಬ ಆಕ್ಷೇಪ ಆಗ ಕೇಳಿ ಬಂದಿತ್ತು.

ಕಾಯ್ದೆಯ ಪ್ರಕಾರ, ವಿದೇಶಿ ದೇಣಿಗೆ ಪಡೆಯಲು ಬಯಸುವವರು ‘ವಿದೇಶಿ ದೇಣಿಗೆ ಸ್ವೀಕರಿಸುವ ಉದ್ದೇಶ’ದಿಂದ ಒಂದೇ ಬ್ಯಾಂಕ್‌ ಖಾತೆ ತೆರೆಯಬೇಕು.‘ಎಫ್‌ಸಿಆರ್‌ಎ ಖಾತೆ’ ಹೆಸರಲ್ಲಿನವದೆಹಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ತೆರೆಯಬೇಕು. ಇದೇ ಖಾತೆಯಲ್ಲಿ ಮಾತ್ರ ವಿದೇಶಿ ದೇಣಿಗೆ ಸ್ವೀಕರಿಸಬೇಕು. ವಿದೇಶಿ ದೇಣಿಗೆ ಹೊರತುಪಡಿಸಿ, ಯಾವುದೇ ಸ್ವರೂಪದ ಠೇವಣಿಯನ್ನು ಈ ಖಾತೆಯಲ್ಲಿ ಮಾಡುವಂತಿಲ್ಲ.ಯಾವುದಾದರೂ ಶೆಡ್ಯೂಲ್ಡ್ ಬ್ಯಾಂಕ್‌ನಲ್ಲಿ ಖಾತೆ ತೆರೆಯಬಹುದು ಎಂಬ 2010ರ ಕಾಯ್ದೆಯ ನಿಯಮವನ್ನು 2020ರಲ್ಲಿ ತಿದ್ದುಪಡಿ ಮಾಡಲಾಗಿದೆ.ಈ ಖಾತೆಯಲ್ಲಿ ಸ್ವೀಕರಿಸಿದ ಹಣವನ್ನು ವಿನಿಯೋಗಿಸಲು ಯಾವುದಾದರೂ ಶೆಡ್ಯೂಲ್ಡ್ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆಯಬಹುದು.

ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ, ಪತ್ರಿಕೆಗಳ ಸಂಪಾದಕರು ಅಥವಾ ಪ್ರಕಾಶಕರು, ನ್ಯಾಯಾಧೀಶರು, ಶಾಸನಸಭೆಯ ಸದಸ್ಯರು, ರಾಜಕೀಯ ಪಕ್ಷಗಳ ಸದಸ್ಯರು ವಿದೇಶಿ ದೇಣಿಗೆ ಸ್ವೀಕರಿಸುವಂತಿಲ್ಲ. 2020ರ ತಿದ್ದುಪಡಿ ಕಾಯ್ದೆಯು ಸರ್ಕಾರಿ ನೌಕರರು ದೇಣಿಗೆ ಸ್ವೀಕರಿಸುವಂತಿಲ್ಲ ಎಂದು ಹೇಳಿದೆ. ಸರ್ಕಾರಿ ಕೆಲಸದಲ್ಲಿರುವ ಅಥವಾ ಸರ್ಕಾರದ ವೇತನ ಪಡೆಯುವ ಅಥವಾ ಸರ್ಕಾರಕ್ಕೆ ಸಂಬಂಧಿಸಿದ ಕೆಲಸ ನಿರ್ವಹಿಸಿದ್ದಕ್ಕಾಗಿ ಗೌರವಧನ ಪಡೆಯುವವರು ಈ ವ್ಯಾಪ್ತಿಯಲ್ಲಿ ಬರುತ್ತಾರೆ.

ವಿದೇಶಿ ದೇಣಿಗೆ ಪಡೆಯುವವರು ಅನುಮತಿ ನವೀಕರಣಕ್ಕೆಅರ್ಜಿ ಸಲ್ಲಿಸಬೇಕು. ಹೊಸದಾಗಿ ಅರ್ಜಿ ಸಲ್ಲಿಸುವರು, ಅನುಮತಿ ಪಡೆಯುವವರು ಅಥವಾ ನವೀಕರಣಕ್ಕೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಆಧಾರ್ ಸಂಖ್ಯೆ ಒದಗಿಸಬೇಕು. ಎಲ್ಲ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯ ನಿರ್ವಾಹಕರ ಆಧಾರ್ ಸಂಖ್ಯೆಗಳನ್ನು ಒದಗಿಸಬೇಕು. ವಿದೇಶಿ ಪ್ರಜೆಯಾಗಿದ್ದರೆ, ಅವರು ತಮ್ಮ ಪಾಸ್‌ಪೋರ್ಟ್‌ ಅಥವಾ ಭಾರತದ ಸಾಗರೋತ್ತರ ನಾಗರಿಕ ಗುರುತಿನ ಕಾರ್ಡ್ ಒದಗಿಸಬೇಕು.

ವಿದೇಶಿ ದೇಣಿಗೆ ಬಳಕೆಯಲ್ಲಿ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದರೆ, ಬಳಕೆಯಾಗದೇ ಉಳಿದ ಹಣವನ್ನು ಬಳಸಲು ಅಥವಾ ಸ್ವೀಕರಿಸಬೇಕಿರುವ ಹಣವನ್ನು ಸ್ವೀಕರಿಸಲು ಕೇಂದ್ರ ಸರ್ಕಾರದ ಅನುಮತಿ ಅಗತ್ಯ. ಬಳಕೆಯಾಗದೇ ಉಳಿದಿರುವ ಹಣವನ್ನು ಬಳಕೆ ಮಾಡುವುದರ ಮೇಲೆ ಸರ್ಕಾರ ನಿರ್ಬಂಧ ವಿಧಿಸಬಹುದು. ಅಂದರೆ ಆ ವ್ಯಕ್ತಿಯ ವಿರುದ್ಧ ತನಿಖೆ ನಡೆಯುತ್ತಿದ್ದು ವಿಚಾರಣೆ ಬಾಕಿಯಿದ್ದರೆ ಅಥವಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಇದ್ದರೆ, ಸರ್ಕಾರ ನಿರ್ಬಂಧ ವಿಧಿಸಬಹುದು.

ವಿದೇಶಿ ದೇಣಿಗೆ ಪಡೆಯುವ ಪರವಾನಗಿ ಅವಧಿ ಮುಗಿಯುವ ಆರು ತಿಂಗಳ ಒಳಗೆ ನವೀಕರಣ ಮಾಡಿಕೊಳ್ಳಬೇಕು. ನವೀಕರಣ ಮಾನ್ಯ ಮಾಡುವ ಮುನ್ನ ಸರ್ಕಾರವು ಅರ್ಜಿದಾರರ ಮೇಲೆ ತನಿಖೆ ನಡೆಸಬಹುದು. ಸಂಸ್ಥೆ ಅಥವಾ ವ್ಯಕ್ತಿಯು ಬೇನಾಮಿ ಅಲ್ಲ; ಕೋಮು ಉದ್ವಿಗ್ನತೆಯನ್ನು ಸೃಷ್ಟಿಸುವುದಕ್ಕಾಗಿ ಅಥವಾ ಮತಾಂತರ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಕಾನೂನು ಕ್ರಮಕ್ಕೆ ಒಳಗಾಗಿಲ್ಲ;ಹಣ ದುರುಪಯೋಗ ವಿಚಾರದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿಲ್ಲ – ಎಂಬುದನ್ನು ಸರ್ಕಾರ ಖಚಿತಪಡಿಸಿಕೊಂಡ ಬಳಿಕ ನವೀಕರಣಕ್ಕೆ ಅನುಮತಿ ನೀಡಬಹುದು.

ವಿದೇಶಿ ದೇಣಿಗೆ ಹಣವನ್ನುಆಡಳಿತಾತ್ಮಕ ಉದ್ದೇಶಕ್ಕೆ ಬಳಸುವುದರ ಮೇಲೆ ಇದ್ದ ಪ್ರಮಾಣದ ಮಿತಿಯನ್ನು ಇಳಿಸಲಾಗಿದೆ. 2010ರ ತಿದ್ದುಪಡಿ ಕಾಯ್ದೆಯಲ್ಲಿ ಶೇ 50ರಷ್ಟು ಹಣವನ್ನು ಆಡಳಿತಾತ್ಮಕ ಉದ್ದೇಶಕ್ಕೆ ಬಳಸಲು ಅನುಮತಿ ಇತ್ತು. ಈ ಪ್ರಮಾಣವನ್ನು 2020ರ ತಿದ್ದುಪಡಿ ಕಾಯ್ದೆಯಲ್ಲಿ ಶೇ 20ಕ್ಕೆ ನಿಗದಿಪಡಿಸಲಾಗಿದೆ.

ವಿಪಕ್ಷ ಆಡಳಿತವಿರುವ ರಾಜ್ಯಗಳ ಎನ್‌ಜಿಒಗಳೇ ಗುರಿ

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ ಅಡಿ ನೋಂದಣಿಯಾಗಿರುವ, 6,000ಕ್ಕೂ ಹೆಚ್ಚು ಸ್ವಯಸೇವಾ ಸಂಸ್ಥೆಗಳಿಗೆ (ಎನ್‌ಜಿಒ) ವಿದೇಶಗಳಿಂದ ದೇಣಿಗೆ ಪಡೆಯಲು ನೀಡಲಾಗಿದ್ದ ಪರವಾನಗಿಯನ್ನು ಕೇಂದ್ರ ಸರ್ಕಾರವು ರದ್ದುಪಡಿಸಿದೆ. ವಿವಿಧ ಕಾರಣಗಳನ್ನು ನೀಡಿ, ಪರವಾನಗಿ ರದ್ದುಪಡಿಸಲಾಗಿದೆ. ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ನೋಂದಣಿಯಾಗಿರುವ ಎನ್‌ಜಿಒಗಳೇ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ರಮಕ್ಕೆ ಗುರಿಯಾಗಿವೆ. ಅಲ್ಲದೆ, ಕ್ರೈಸ್ತ ಧಾರ್ಮಿಕ ಸಂಸ್ಥೆ ಎಂದು ಘೋಷಿಸಿಕೊಂಡಿರುವ ಎನ್‌ಜಿಒಗಳು ಹೆಚ್ಚಿನ ಸಂಖ್ಯೆಯಲ್ಲಿ ಪರವಾನಗಿ ಕಳೆದುಕೊಂಡಿವೆ.

* ಎಫ್‌ಸಿಆರ್‌ಎ ಕಾಯ್ದೆ ಜಾರಿಗೆ ಬಂದ ದಿನದಿಂದ ವಿದೇಶಿ ದೇಣಿಗೆ ಪಡೆಯಲು ನೀಡಲಾಗಿದ್ದ ಪರವಾನಗಿ ರದ್ದಾದ ಒಟ್ಟು ಎನ್‌ಜಿಒಗಳಲ್ಲಿ ಶೇ 25ಕ್ಕಿಂತಲೂ ಹೆಚ್ಚು ಎನ್‌ಜಿಒಗಳು ವಿರೋಧ ಪಕ್ಷಗಳ ಆಡಳಿತವಿರುವ ಐದು ರಾಜ್ಯಗಳಿಗೆ ಸೇರಿದ್ದವಾಗಿವೆ

* ವಿರೋಧ ಪಕ್ಷಗಳ ಆಡಳಿತವಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಕ್ರೈಸ್ತ ಧಾರ್ಮಿಕ ಸಂಸ್ಥೆಗಳಿಗೆ ನೀಡಿರುವ ಪರವಾನಗಿ ಮತ್ತು ನೋಂದಣಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ರದ್ದುಪಡಿಸಲಾಗಿದೆ

* ಪಶ್ಚಿಮ ಬಂಗಾಳದಲ್ಲಿ ಕ್ರೈಸ್ತ ಧಾರ್ಮಿಕ ಸಂಸ್ಥೆಗಳು, ಮುಸ್ಲಿಂ ಧಾರ್ಮಿಕ ಸಂಸ್ಥೆಗಳಿಗೆ ನೀಡಿರುವ ಪರವಾನಗಿ ಮತ್ತು ನೋಂದಣಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ರದ್ದುಪಡಿಸಲಾಗಿದೆ. ಜತೆಗೆ ರಾಮಕೃಷ್ಣ ಮಠ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಸಂಸ್ಥೆಗಳ ಪರವಾನಗಿಯನ್ನು ರದ್ದುಪಡಿಸಲಾಗಿದೆ

* ಮದರ್‌ ತೆರೆಸಾ ಸ್ಥಾಪಿಸಿದ್ದ ಮಿಷನರೀಸ್ ಆಫ್ ಚಾರಿಟಿ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಭಾರತೀಯ ವೈದ್ಯಕೀಯ ಸಂಘಟನೆಗಳು ಪರವಾನಗಿ ರದ್ದಾಗಿವೆ.

****

ಆಕ್ಸ್‌ಫಾಮ್ ಇಂಡಿಯಾವು ಸರ್ಕಾರ, ಸಮುದಾಯಗಳ ಜೊತೆಗೂಡಿ ಸಾರ್ವಜನಿಕ ಹಿತಾಸಕ್ತಿಯ ಕೆಲಸಗಳನ್ನು ದಶಕಗಳಿಂದ ಮಾಡಿಕೊಂಡು ಬರುತ್ತಿದೆ. ಗೃಹ ಸಚಿವಾಲಯವು ನೋಂದಣಿಯನ್ನು ನವೀಕರಣ ಮಾಡಲು ಒಪ್ಪಿಲ್ಲ. ಈ ನಿರ್ಧಾರದಿಂದಾಗಿ ಸಂಕಷ್ಟದಲ್ಲಿರುವ ಎಷ್ಟೋ ಜನರಿಗೆ ನೆರವು ನೀಡುವ ಸಂಘಟಿತ ಯತ್ನಗಳಿಗೆ ಭಾರಿ ಪ್ರಮಾಣದ ಹಿನ್ನಡೆ ಉಂಟಾಗಲಿದೆ

– ಅಮಿತಾಭ್ ಬೆಹರ್,ಆಕ್ಸ್‌ಫಾಮ್ ಸಿಇಒ

ಮದರ್‌ ತೆರೆಸಾ ಮಿಷನರೀಸ್ ಆಫ್ ಚಾರಿಟಿಯ ಬ್ಯಾಂಕ್ ಖಾತೆಗಳನ್ನು ಕೇಂದ್ರ ಗೃಹಸಚಿವಾಲಯವು ನಿರ್ಬಂಧಿಸಿದ್ದು ಆಘಾತ ಮೂಡಿಸಿದೆ. ಅಲ್ಲಿನ 22 ಸಾವಿರ ರೋಗಿಗಳು, ನೌಕರರು ಆಹಾರ, ಔಷಧಗಳಿಂದ ವಂಚಿತರಾಗಿದ್ದಾರೆ.ಕಾನೂನು ಅತಿಮುಖ್ಯವಾಗಿದ್ದರೂ, ಮಾನವೀಯ ಪ್ರಯತ್ನಗಳಿಗೆ ಧಕ್ಕೆಯಾಗಬಾರದು

– ಮಮತಾ ಬ್ಯಾನರ್ಜಿ,ಪಶ್ಚಿಮ ಬಂಗಾಳ ಮುಖ್ಯಮಂತ್ರಿ

***

(ಆಧಾರ: ಕೇಂದ್ರ ಗೃಹ ಸಚಿವಾಲಯದ ಎಫ್‌ಸಿಆರ್‌ಎ ಆನ್‌ಲೈನ್ ಪೋರ್ಟಲ್ ಮತ್ತು ಡ್ಯಾಶ್‌ಬೋರ್ಡ್‌, ಪಿಟಿಐ, ಬಿಬಿಸಿ)

– ಹಮೀದ್ ಕೆ., ಜಯಸಿಂಹ ಆರ್., ಅಮೃತ್ ಕಿರಣ್ ಬಿ.ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT