ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer: ಏನಿದು ಪಿಎಫ್‌ಐ ಸಂಘಟನೆ? ಇ.ಡಿ, ಎನ್‌ಐಎ ತನಿಖೆ ಏಕೆ?

Last Updated 22 ಸೆಪ್ಟೆಂಬರ್ 2022, 8:39 IST
ಅಕ್ಷರ ಗಾತ್ರ

ನವದೆಹಲಿ: ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಆರೋಪದಡಿ ದೇಶದಾದ್ಯಂತ 11 ರಾಜ್ಯಗಳಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಕಚೇರಿಗಳು ಮತ್ತು ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಅಧಿಕಾರಿಗಳು 100ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂಘಟನೆ ವಿರುದ್ಧ ಇತ್ತೀಚಿನ ದಿನಗಳಲ್ಲಿ ತೀವ್ರ ಆರೋಪ ಮಾಡುತ್ತಿರುವ ಬಿಜೆಪಿ, ಕಾಂಗ್ರೆಸ್ ಮೃದು ಧೋರಣೆ ತಳೆದಿದೆ ಎಂದು ಆರೋಪಿಸುತ್ತಾ ಬಂದಿದೆ. ಹಾಗಾದರೆ, ಪಿಎಫ್‌ಐ ಸಂಘಟನೆ ಮತ್ತು ಅದರ ಇತಿಹಾಸದ ಕುರಿತು ನೋಡುವುದಾದರೆ...

ಪಿಎಫ್‌ಐ ಎಂದರೆ ಏನು?

ಕೇರಳದ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್, ಕರ್ನಾಟಕದ ಫೋರಂ ಫಾರ್ ಡಿಗ್ನಿಟಿ ಮತ್ತು ತಮಿಳುನಾಡಿನ ಮನಿತಾ ನೀತಿ ಪಸರೈ ಎಂಬ ಮೂರು ಮುಸ್ಲಿಂ ಸಂಘಟನೆಗಳು ವಿಲೀನಗೊಂಡು 2007ರಲ್ಲಿ ಪಿಎಫ್‌ಐ ಸಂಘಟನೆಯನ್ನು ರೂಪಿಸಲಾಯಿತು. ವಿಲೀನಗೊಂಡು 4 ತಿಂಗಳ ಬಳಿಕ ಫೆಬ್ರುವರಿ 2007ರಲ್ಲಿ ಬೆಂಗಳೂರಿನಲ್ಲಿ ರ್‍ಯಾಲಿ ನಡೆಸುವ ಮೂಲಕ ಅಧಿಕೃತವಾಗಿ ಸಂಘಟನೆ ಅಸ್ತಿತ್ವಕ್ಕೆ ಬಂದಿತು.

ಹಿಂದುಳಿದ, ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಸಮುದಾಯದ ಜನರ ಹಕ್ಕುಗಳಿಗಾಗಿ ಹೋರಾಡುವುದಾಗಿ ಪಿಎಫ್‌ಐ ಹೇಳುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದ ನೀತಿಗಳ ಬಗ್ಗೆ ಈ ಸಂಘಟನೆಯು ಆಗಾಗ್ಗೆ ಭಿನ್ನಾಭಿಪ್ರಾಯ ಹೊಂದಿತ್ತು. ಮುಸ್ಲಿಂ ಮತದಾರರನ್ನು ಸೆಳೆಯಲು ಪಿಎಫ್‌ಐ ಜೊತೆ ಸ್ನೇಹ ಸಂಬಂಧವನ್ನು ಉಳಿಸಿಕೊಳ್ಳಲಾಗಿದೆ ಎಂದು ರಾಜಕೀಯ ಪಕ್ಷಗಳು ಪರಸ್ಪರ ಆರೋಪ–ಪ್ರತ್ಯಾರೋಪಗಳೂ ನಡೆಯುತ್ತಲೇ ಇರುತ್ತವೆ.

ಪಿಎಫ್‌ಐ ಸಂಘಟನೆಯು ಚುನಾವಣೆಯಲ್ಲಿ ಎಂದಿಗೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಮುಸ್ಲಿಮರಿಗಾಗಿ ಸಾಮಾಜಿಕ ಕೆಲಸ ಮಾಡುವುದಾಗಿ ಹೇಳುತ್ತದೆ. ಆದರೆ, ಸಂಸ್ಥೆಯು ಸದಸ್ಯತ್ವದ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳನ್ನು ಇಟ್ಟುಕೊಂಡಿಲ್ಲ.

2001ರಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾವನ್ನು ನಿಷೇಧಿಸಿದ ನಂತರ ಪಿಎಫ್ಐ ಅನ್ನು ರಚಿಸಲಾಯಿತು. 2007ರಲ್ಲಿ ಪಿಎಫ್‌ಐ ಪ್ರಾರಂಭವಾದ ಎರಡು ವರ್ಷಗಳ ನಂತರ, ಮುಸ್ಲಿಮರು, ಪರಿಶಿಷ್ಟ ಜಾತಿಗಳು ಮತ್ತು ಇತರ ಹಿಂದುಳಿದ ವರ್ಗದವರ ರಾಜಕೀಯ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಲು ಸಂಘಟನೆಯು ಒಳಗಿನಿಂದಲೇ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವನ್ನು ರಚಿಸಿತು.

ಈ ಸಂಘಟನೆಯು ಕೇರಳದಲ್ಲಿ ಹೆಚ್ಚಿನ ಪ್ರಭಾವವನ್ನು ಹೊಂದಿದ್ದು, ಅದರ ವಿರುದ್ಧ ಕೊಲೆ, ಬೆದರಿಕೆ, ಗಲಭೆ ಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ ಆರೋಪದಡಿ ಅನೇಕ ಪ್ರಕರಣಗಳು ದಾಖಲಾಗಿವೆ.

ಈಗ ಏಕೆ ಪಿಎಫ್‌ಐ ವಿರುದ್ಧ ತನಿಖೆ ನಡೆಯುತ್ತಿದೆ?

ದೇಶದಲ್ಲಿ ಪೌರತ್ವ ವಿರೋಧಿ (ತಿದ್ದುಪಡಿ) ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಗಳು, ಹಾಥರಸ್ ಅತ್ಯಾಚಾರ ಪ್ರಕರಣ ಖಂಡಿಸಿ ನಡೆದ ಪ್ರತಿಭಟನೆಗಳ ವೇಳೆ ಹಿಂಸಾಚಾರಕ್ಕೆ ಉತ್ತೇಜನ ನೀಡಲು ಹಣಕಾಸಿನ ನೆರವು ನೀಡಿದ ಪಿಎಫ್‌ಐ ವಿರುದ್ಧದ ಆರೋಪಗಳ ಕುರಿತಂತೆ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುತ್ತಿದೆ.

ಪ್ರಕರಣ ಸಂಬಂಧಿತ ದೋಷಾರೋಪಪಟ್ಟಿಯಲ್ಲಿ ಸಿಎಫ್‌ಐನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ ಎ ರೌಫ್ ಷರೀಫ್, ಪಿಎಫ್‌ಐ ಸದಸ್ಯ ಅತಿಕುರ್ ರೆಹಮಾನ್, ಸಿಎಫ್‌ಐ ರಾಷ್ಟ್ರೀಯ ಖಜಾಂಚಿ ಮಸೂದ್ ಅಹ್ಮದ್, ದೆಹಲಿ ಮೂಲದ ಸಿಎಫ್‌ಐ ಪ್ರಧಾನ ಕಾರ್ಯದರ್ಶಿ ಮತ್ತು ಪಿಎಫ್‌ಐ ಸಂಬಂಧ ಹೊಂದಿರುವ ಆರೋಪ ಹೊತ್ತಿರುವಪತ್ರಕರ್ತ ಸಿದ್ದಿಕ್ ಕಪ್ಪನ್ ಮತ್ತು ಮತ್ತೊಬ್ಬ ಪಿಎಫ್‌ಐ ಸದಸ್ಯ ಮೊಹಮ್ಮದ್ ಆಲಂ ಹೆಸರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT