ಉದ್ಘಾಟನಾ ಸಮಾರಂಭವೊಂದರಲ್ಲಿ ರಾಜಕೀಯ ನಾಯಕರ ಎರಡು ಗುಂಪು ಹೊಡೆದಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಶಿವಸೇನಾ ಮತ್ತು ಎನ್ಸಿಪಿ ನಾಯಕರು ಪರಸ್ಪರ ಹೊಡೆದಾಡುತ್ತಿದ್ದಾರೆ. ಎರಡೂ ಪಕ್ಷಗಳು ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿವೆ. ಎರಡೂ ಪಕ್ಷಗಳ ನಡುವೆ ಎಂದೋ ಹೊಡೆದಾಟ ನಡೆಯಬೇಕಿತ್ತು. ಈಗ ನಡೆಯುತ್ತಿದೆ ಅಷ್ಟೆ’ ಎಂಬ ವಿವರಣೆಯನ್ನು ಈ ವಿಡಿಯೊಗೆ ನೀಡಲಾಗಿದೆ. ಶಿವಸೇನಾದ ಕೆಲವು ಶಾಸಕರು ಮೈತ್ರಿಕೂಟ ತೊರೆಯುವಂತೆ ಪಕ್ಷದ ಮುಖ್ಯಸ್ಥರ ಮೇಲೆ ಬಂಡಾಯ ಎದ್ದಿರುವ ಸಂದರ್ಭದಲ್ಲಿ ಈ ವಿಡಿಯೊ ವೈರಲ್ ಆಗಿದೆ.
‘ಈ ವಿಡಿಯೊಗೂ, ಮಹಾರಾಷ್ಟ್ರ ಸರ್ಕಾರದ ಪ್ರಸ್ತುತ ಬಿಕ್ಕಟ್ಟಿಗೂ ಯಾವುದೇ ಸಂಬಂಧವಿಲ್ಲ. ಇದು 2019ರ ಮಾರ್ಚ್ 1ರ ವಿಡಿಯೊ. ಬೃಹನ್ ಮುಂಬೈ ನಗರ ಪಾಲಿಕೆ ನಿರ್ಮಿಸಿದ್ದ ಸಮುದಾಯ ಭವನ ಒಂದರ ಉದ್ಘಾಟನೆ ಸಮಾರಂಭದಲ್ಲಿ ದೀಪ ಬೆಳಗಿಸುವ ವಿಚಾರಕ್ಕಾಗಿ ಎನ್ಸಿಪಿ ಮತ್ತು ಶಿವಸೇನಾ ನಾಯಕರ ಮಧ್ಯೆ ಹೊಡೆದಾಟ ನಡೆದಿತ್ತು. 2019ರ ಮಾರ್ಚ್ನಲ್ಲಿ ಶಿವಸೇನಾ–ಎನ್ಸಿಪಿ–ಕಾಂಗ್ರೆಸ್ ಮೈತ್ರಿಕೂಟದ ಎಂವಿಎ ಸರ್ಕಾರ ಅಸ್ತಿತ್ವಕ್ಕೇ ಬಂದಿರಲಿಲ್ಲ. ಹಳೆಯ ವಿಡಿಯೊವನ್ನು ತಪ್ಪು ಮಾಹಿತಿಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ’ ಎಂದು ‘ದಿ ಲಾಜಿಕಲ್ ಇಂಡಿಯನ್’ ಫ್ಯಾಕ್ಟ್ಚೆಕ್ ಪ್ರಕಟಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.