ಸಂಜೆ ನಾಲ್ಕು ಗಂಟೆಯಾಗುತ್ತಿದಂತೆ, ಶಿವಣ್ಣನವರು ಬಾಣಲೆಗೆ ಎಣ್ಣೆ ಸುರಿದು, ಹದವಾಗಿ ಕಡಲೇ ಹಿಟ್ಟು ಕಲಿಸಲು ಶುರು ಮಾಡುತ್ತಾರೆ. ಬಿಸಿಯಾದ ಎಣ್ಣೆಯಲ್ಲಿ ಗರಿಗರಿಯಾದ ಚಕ್ಕುಲಿ, ಸೇವು-ಖಾರ, ಗುಳಿಗೆಗಳು, ಒಂದಾದ ಮೇಲೆ ಒಂದರಂತೆ ರೆಡಿಯಾಗಿ ಗಾಜಿನ ಪೆಟ್ಟಿಗೆ ಏರಿ ಕೂತುಬಿಡುತ್ತವೆ. ನಂತರದಲ್ಲಿ, ಮಸಾಲ ವಡ, ಆಲೂ ಬೋಂಡಾ, ಕ್ಯಾಪ್ಸಿಕಂ ಬೋಂಡಾ, ದಾವಣಗೆರೆಯ ಮಿರ್ಚಿ ಬೋಂಡಾದ ಜೊತೆಗೆ ಸಿದ್ದವಾಗಿ ಬಿಡುತ್ತವೆ. ಅವುಗಳಿಗೆ ಸಾಥ್ ಕೊಡಲು ನರ್ಗೀಸ್ ಮಂಡಕ್ಕಿ, ಮಸಾಲ ಮಂಡಕ್ಕಿಗಳು ದೊಡ್ಡ ದೊಡ್ಡ ಗಾಜಿನ ಭರಣಿ ಹೊಕ್ಕು ತಿಂಡಿ ಪೋತರನ್ನು ಕೂಗಿ ಕರೆಯುತ್ತವೆ. ಇವೆಲ್ಲ ಸಂಜೆ ತಿಂಡಿಗಳು.