ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು: ಆತಂಕ ಬೇಡ!

Last Updated 28 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಸೋಂಕು ಮಾನವರಲ್ಲಿ ಅಥವಾ ಇತರ ಪ್ರಾಣಿಗಳಲ್ಲಿ ಸೂಕ್ಷ್ಮಜೀವಿಗಳಿಂದ ಉಂಟಾಗುವ ಅನಾರೋಗ್ಯ ಸ್ಥಿತಿ. ಈ ಸೂಕ್ಷ್ಮ ಜೀವಿಗಳು ಬ್ಯಾಕ್ಟೀರಿಯಾ, ವೈರಸ್ ಅಥವಾ ಶಿಲೀಂಧ್ರಗಳಾಗಿರಬಹುದು. ಕೆಲವೊಮ್ಮೆ ಸ್ವಲ್ಪ ದೊಡ್ಡ ಗಾತ್ರದ ಪರಾವಲಂಬಿ ಜೀವಿಗಳಿಂದಲೂ ಸೋಂಕುಗಳು ಉಂಟಾಗಬಹುದು.

ಈ ಸೋಂಕುಗಳು ಹೆಚ್ಚಾಗಿ ರೋಗಿಯಿಂದ ಇತರರಿಗೆ ಹರಡುತ್ತವೆ. ಹರಡುವ ವಿಧಾನಗಳು ಹಲವಾರು. ರೋಗಿ ಕೆಮ್ಮುವಾಗ, ಸೀನುವಾಗ ಉಸಿರಿನಲ್ಲಿರುವ ಕೀಟಾಣುಗಳು ಗಾಳಿಗೆ ಸೇರಿ ಇನ್ನೊಬ್ಬರಿಗೆ ಹರಡಬಹುದು. ರೋಗಿಯ ಮಲದಲ್ಲಿರುವ ರೋಗಾಣುಗಳು ಕುಡಿಯುವ ನೀರು, ತಿನ್ನುವ ಆಹಾರಗಳನ್ನು ಕಲುಷಿತಗೊಳಿಸಿ ರೋಗ ಹರಡುವುದಕ್ಕೆ ಕಾರಣವಾಗಬಹುದು. ಸೊಳ್ಳೆ, ಉಣ್ಣೆಗಳಂತಹ ಕೀಟಗಳು ಮಲೇರಿಯಾ, ಫೈಲೇರಿಯಾ, ಡೆಂಗಿ, ಚಿಕುನ್ ಗುನ್ಯ, ಟೈಫಸ್, ಮಂಗನ ಕಾಯಿಲೆಯಂತಹ ಸೋಂಕುಗಳನ್ನು ಪಸರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಲೈಂಗಿಕ ಸಂಪರ್ಕದಿಂದ ಹರಡುವ ರೋಗಗಳು ಕೆಲವಾದರೆ, ರಕ್ತದಿಂದ ಪಸರಿಸುವ ಸೋಂಕುಗಳು ಹೆಪಟೈಟಿಸ್ ಬಿ ಮತ್ತು ಸಿ, ಏಡ್ಸ್‌. ಆಸ್ಪತ್ರೆಗಳಲ್ಲಿ ಭರ್ತಿಯಾದ ರೋಗಿಗಳ ಮಧ್ಯೆಯೂ ಆರೋಗ್ಯ ಸಿಬ್ಬಂದಿಯ ಮೂಲಕ, ಆರೋಗ್ಯ ಸಿಬ್ಬಂದಿಗೆ ರೋಗಿಗಳಿಂದ ಸೋಂಕುಗಳು ಹರಡುವ ಸಾಧ್ಯತೆಗಳಿವೆ.

ಈ ಸೋಂಕುಗಳನ್ನು ತಡೆಗಟ್ಟುವುದು ಹೇಗೆ?

ಸ್ವಚ್ಛತೆ:

* ಕೈ ತೊಳೆದು ಶುದ್ಧವಾಗಿಟ್ಟುಕೊಳ್ಳುವುದು, ಕೆಮ್ಮುವಾಗ, ಸೀನುವಾಗ ಬಾಯಿಗೆ ಬಟ್ಟೆ ಅಡ್ಡ ಹಿಡಿಯುವುದು, ಎಲ್ಲೆಂದರಲ್ಲಿ ಉಗುಳದೇ ಇರುವುದು, ಶೌಚಾಲಯದಲ್ಲೇ ಮಲ ವಿಸರ್ಜನೆ ಮಾಡುವುದು.

* ಸಾಬೂನು ಮತ್ತು ನೀರಿನಿಂದ ಅವಶ್ಯವಿದ್ದಾಗಲೆಲ್ಲಾ ಕೈ ತೊಳೆಯುವುದು.

* ಸೊಳ್ಳೆಗಳು ಹುಟ್ಟದಂತೆ ಪರಿಸರವನ್ನು ಶುದ್ಧವಾಗಿಡುವುದು, ಸೊಳ್ಳೆಗಳು ಕಚ್ಚದಂತೆ ಜಾಗ್ರತೆ ವಹಿಸುವುದು.

* ಅನವಶ್ಯಕವಾದ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳದೇ ಇರುವುದು ರಕ್ತದ ಮೂಲಕ ಹರಡುವ ಹೆಪಟೈಟಿಸ್ ತಡೆಯಲು ಸಹಕಾರಿ.

* ಕ್ಷೌರದ ಅಂಗಡಿಗಳಲ್ಲಿ ಕೂದಲು ತೆಗೆಸುವಾಗ ಹೊಸ ಬ್ಲೇಡ್ ಉಪಯೋಗಿಸಬೇಕು. ಹಾಗೆಯೇ ಹಚ್ಚೆ ಅಥವಾ ಟ್ಯಾಟ್ಟೂಗಳನ್ನು ಹಾಕಿಸಿಕೊಳ್ಳುವಾಗ ಹೊಸ ಸೂಜಿಗಳ ಉಪಯೋಗ ಮಾಡುವುದು ಅವಶ್ಯ. ಇದು ಅಕ್ಯುಪಂಕ್ಚರ್ ಚಿಕಿತ್ಸೆಗೂ ಅನ್ವಯಿಸುತ್ತದೆ.

* ಸಮಾಜದ ಮಟ್ಟದಲ್ಲಿ ಶುದ್ಧವಾದ ಕುಡಿಯುವ ನೀರಿನ ಪೂರೈಕೆ ಟೈಫಾಯ್ಡ್, ಆಮಶಂಕೆ, ಕಾಲರಾ, ಹೆಪಟೈಟಿಸ್ ಎ ಮತ್ತು ಇ ತಡೆಯುವಲ್ಲಿ ಸಹಕಾರಿ. ಬಯಲು ಶೌಚ ನಿಷೇಧವೂ ಸಮಾಜಮಟ್ಟದಲ್ಲಿ ಆಗಬೇಕಾಗಿದೆ.

* ತಾಜಾ, ಸ್ವಚ್ಛವಾಗಿ ತಯಾರಿಸಿದ ಆಹಾರವನ್ನು ಹಾಗೂ ಪರಿಶುದ್ಧವಾದ ನೀರನ್ನು ಸೇವಿಸುವುದರಿಂದ ಕಲುಷಿತ ನೀರು, ಆಹಾರದಿಂದ ಬರುವ ಸೋಂಕುಗಳನ್ನು ತಡೆಗಟ್ಟಬಹುದು.

* ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ದೂರವಿರುವುದು. ಕಾಂಡೋಮ್‌ಗಳ ಬಳಕೆ ಏಡ್ಸ್‌ ಮತ್ತು ಇತರ ಲೈಂಗಿಕ ಸೋಂಕುಗಳಿಂದ ರಕ್ಷಣೆ ನೀಡುತ್ತದೆ.

ಲಸಿಕೆಗಳು
ವಿಜ್ಞಾನ ಮುಂದುವರಿದಂತೆ ಹಲವಾರು ರೋಗಗಳಿಗೆ ಕಾರಣೀಭೂತವಾದ ರೋಗಾಣುಗಳನ್ನು ಪತ್ತೆ ಹಚ್ಚಿ, ರೋಗ ತಡೆಗಟ್ಟಲು ಲಸಿಕೆಗಳನ್ನೂ ಸಂಶೋಧಿಸಲಾಯಿತು. ಸಿಡುಬು, ಪೋಲಿಯೊ ನಿರ್ಮೂಲನೆಗೊಂಡಿವೆ. ಮಕ್ಕಳಿಗೆ ಕಾಲಕಾಲಕ್ಕೆ ನೀಡುವ ಲಸಿಕೆಗಳಿಂದಾಗಿ ಧನುರ್ವಾತ, ನಾಯಿಕೆಮ್ಮು, ಡಿಫ್ತೀರಿಯ, ದಡಾರ, ರುಬೆಲ್ಲಾಗಳ ಹಾವಳಿ ಗಣನೀಯವಾಗಿ ಕಡಿಮೆಯಾಗಿದೆ. ಅದೇ ತರಹ ಹೆಪಟೈಟಿಸ್ ಬಿ ವಿರುದ್ಧ ನೀಡುವ ಲಸಿಕೆ ಸಾಕಷ್ಟು ಪರಿಣಾಮಕಾರಿ. ಗರ್ಭಿಣಿಯರಿಗೆ ನೀಡುವ ಧನುರ್ವಾತದ ಚುಚ್ಚುಮದ್ದು ನವಜಾತ ಶಿಶುಗಳಲ್ಲಿ ಉಂಟಾಗುವ ರೋಗವನ್ನು ತಡೆಗಟ್ಟಿದೆ.

ಸಾಕಷ್ಟು ಸೋಂಕುಗಳು ಲಸಿಕೆಗಳಿಂದ ಜಗತ್ತಿನೆಲ್ಲೆಡೆ ಹತೋಟಿಗೆ ಬಂದಿದ್ದರೂ ಮಲೇರಿಯ, ಡೆಂಗೆ, ಇತ್ತೀಚಿನ ಕೋವಿಡ್‌–19 ಸೋಂಕು, ಹೆಪಟೈಟಿಸ್ ಸಿ ಗೆ ಇನ್ನೂ ಸರಿಯಾದ ಲಸಿಕೆಗಳು ಲಭ್ಯವಾಗಿಲ್ಲ.

ಔಷಧಿಗಳು
ಮಲೇರಿಯಾ ರೋಗ ಬರದಂತೆ ನೀಡುವ ಔಷಧಿಗಳು ಸಾಕಷ್ಟು ಪರಿಣಾಮಕಾರಿ. ಮಲೇರಿಯ ಬಾಧಿತ ಪ್ರದೇಶಗಳಿಗೆ ಭೇಟಿ ನೀಡುವ ಪ್ರಯಾಣಿಕರಿಗೆ ಪ್ರಯಾಣದ ಎರಡು ವಾರ ಮುಂಚಿತವಾಗಿ ವಾರಕ್ಕೊಂದು ಡೋಸ್ ಔಷಧಿಯನ್ನು ನೀಡಲಾಗುತ್ತದೆ. (ಕ್ಲೋರೋಕ್ವಿನ್ ಅಥವಾ ಮೆಫ್ಲೋಕ್ವಿನ್) ಪ್ರಯಾಣದ ಸಮಯದಲ್ಲೂ ವಾರಕ್ಕೊಂದು ಬಾರಿಯಂತೆ ನೀಡಿ, ತಿರುಗಿ ಬಂದ ನಂತರ ನಾಲ್ಕು ವಾರಗಳವರೆಗೆ ಮುಂದುವರಿಯುತ್ತದೆ. ಕುಟುಂಬದ ಸದಸ್ಯರಲ್ಲಿ ಕಫದಲ್ಲಿ ಬ್ಯಾಕ್ಟೀರಿಯಾಗಳು ಇರುವಂತಹ ಕ್ಷಯ ರೋಗವಿದ್ದಲ್ಲಿ ಇತರ ಸದಸ್ಯರಿಗೆ ತಡೆಗಟ್ಟುವ ಔಷಧಿಗಳನ್ನು ಕೆಲವು ಸಂದರ್ಭಗಳಲ್ಲಿ ಕೊಡಬೇಕಾಗಬಹುದು. (ವೈದ್ಯಕೀಯ ಸಲಹೆಯಂತೆ ಮಾತ್ರ, ಮನಬಂದಂತೆ ಎಲ್ಲರೂ ಇವುಗಳನ್ನು ತೆಗೆದುಕೊಳ್ಳುವಂತಿಲ್ಲ).

ರೋಗ ಪತ್ತೆ ಮತ್ತು ಚಿಕಿತ್ಸೆ
ಯಾವುದೇ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಸಮಾಜದಲ್ಲಿ ಸೋಂಕು ಹರಡುತ್ತಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಪೂರ್ಣ ಪ್ರಮಾಣದ ಚಿಕಿತ್ಸೆ ನೀಡಿ ಗುಣಪಡಿಸುವುದು ಮುಖ್ಯ ಹಂತ. ಕ್ಷಯರೋಗ, ಮಲೇರಿಯ, ಫೈಲೇರಿಯಾ ನಿಯಂತ್ರಣದಲ್ಲಿ ಸರ್ಕಾರ ವಿಶ್ವ ಆರೋಗ್ಯ ಸಂಸ್ಥೆಯ ಸಹಕಾರದೊಂದಿಗೆ ಈ ನಿಟ್ಟಿನಲ್ಲಿ ಶ್ರಮಿಸುತ್ತಿದೆ.

ಐಸೊಲೇಶನ್ ಮತ್ತು ಬ್ಯಾರಿಯರ್ ನರ್ಸಿಂಗ್
ಅತಿವೇಗವಾಗಿ ಗಾಳಿಯ ಅಥವಾ ನೇರ ಸಂಪರ್ಕದ ಮೂಲಕ ಹರಡುವ ಕಾಯಿಲೆ ಬಂದಿರುವವರನ್ನು ಪ್ರತ್ಯೇಕವಾಗಿ ಇಟ್ಟು ಶುಶ್ರೂಷೆ ಮಾಡುವುದು. ಎಷ್ಟು ದಿವಸಗಳ ಕಾಲ ಮತ್ತೊಬ್ಬರಿಗೆ ರೋಗ ಹರಡಬಹುದಾದ ಸಾಧ್ಯತೆ ಇದೆಯೋ ಅಷ್ಟು ದಿವಸಗಳ ಕಾಲ ರೋಗಿಗಳನ್ನು ಪ್ರತ್ಯೇಕಿಸಿ ಇಡಬೇಕು. ಹಾಗೆಯೇ ಆರೋಗ್ಯ ಸಿಬ್ಬಂದಿಯೂ ತಮ್ಮನ್ನು ರಕ್ಷಿಸಿಕೊಳ್ಳಲು ಹಾಗೂ ಒಬ್ಬರಿಂದ ಇನ್ನೊಬ್ಬರಿಗೆ ರೋಗ ಹರಡುವುದನ್ನು ತಡೆಯಲು ಮಾಸ್ಕ್, ಕೈಗವುಸು, ಗೌನ್‌ ಇತ್ಯಾದಿಬಳಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT