ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಗೆಯುಗುಳುತ ಕತೆ ಹೇಳಿದ ಸಿಗರೇಟ್!

Published 31 ಮೇ 2024, 23:15 IST
Last Updated 31 ಮೇ 2024, 23:15 IST
ಅಕ್ಷರ ಗಾತ್ರ

ಎಂದಿನಂತೆ ಸಿದ್ಧಾಂತ್  ತನ್ನ ಬಿಡುವಿಲ್ಲದ ಕೆಲಸದ ಮಧ್ಯೆ ಏನನ್ನೋ ಕಳೆದುಕೊಂಡವನಂತೆ ತನ್ನ ಲ್ಯಾಪ್ ಟಾಪ್ ಪರದೆಯನ್ನು ದಿಟ್ಟಿಸುತ್ತಾ ಕುಳಿತಿದ್ದ. ಹಠಾತ್ತನೆ ಏನೋ  ಕಂಡುಹಿಡಿದವನಂತೆ ಆಫೀಸ್ ಮುಂದಿನ ಟೀ ಅಂಗಡಿಗೆ ಓಡಿದ. ಸಿದ್ಧಾಂತ್ ಏನನ್ನೂ ಕೇಳದೇ ಹೋದರೂ ಅಂಗಡಿಯವನು ತಾನಾಗಿಯೇ ಒಂದು ಸಿಗರೇಟ್ ಕೊಟ್ಟ.  

ಅಂಗಡಿಯ ಹುಡುಗ ರಾಜು ಕೊಟ್ಟ ಸಿಗರೇಟ್ ಹಿಡಿದ ಸಿದ್ಧಾಂತ್ ಆಫೀಸ್ ಮುಂದಿನ ಬೆಂಚ್ ಒಂದರ ಮೇಲೆ ಕೂತಿದ್ದ. ಕತ್ತಲಲ್ಲಿ ದೂರದ ಬೆಂಚ್ ಒಂದರ ಮೇಲೆ ಯಾರೋ  ಕೂತಂತಿತ್ತು.  ದೊಡ್ಡ ಬಿಳಿಯ ವಾಟರ್ ಪೈಪಿನಂತೆ ಅದರ ಆಕಾರ, ಹೆಚ್ಚಾಗಿ ತಲೆಯ ಮೇಲಿಂದ ಏನೂ ಹೊಗೆ ಬೇರೆ.

“ಯಾರದು?” ಎಂದ. “ನಾನು ಕಣೊ  ನಿನ್ನ ಫ್ರೆಂಡ್, ಸಿಗರೇಟ್ “ ಎಂದು ಉತ್ತರ ಬಂದೊಡನೆಯೇ ಸಮಾಧಾನದ  ನಿಟ್ಟುಸಿರು ಬಿಟ್ಟ.

ಸಿದ್ಧಾಂತ್: “ಅಯ್ಯೋ ನಿನಾ? ನಾನೆಲ್ಲೊ ದೆವ್ವ ಅಂದ್ಕೊಂಡು ಹೆದರುಕೊಂಡೆ…”

ಸಿಗರೇಟ್: “ಯಾಕೆ ನನ್ನ ಕಂಡರೆ ಭಯ ಇಲ್ವಾ ನಿಂಗೆ?”

ಸಿದ್ಧಾಂತ್ : “ನೀನು ನನ್ನ ಸ್ನೇಹಿತ ಅಲ್ವ! ನೀನೇನು ನನ್ನ ಪ್ರಾಣ ತಗೋಳೋಕಾಗುತ್ತಾ?”

ಸಿಗರೇಟ್ : “ನೀನು ನನ್ನ ಸ್ನೇಹಿತ, ನೀನು ನನ್ನನ್ನ ಬಿಟ್ಟಿರದೇ ಹುಡುಕಿಕೊಂಡು ಬರುತ್ತೀಯಾ. ಹಾಗಾಗಿ ಯಾರಿಗೂ ಹೇಳದ ರಹಸ್ಯ  ನಿನಗೆ ಹೇಳ್ತಿನಿ ಕೇಳು.. ಪ್ರತಿ ವರ್ಷ ಸುಮಾರು ಎಂಬತ್ತು ಲಕ್ಷ ಜನರ ಪ್ರಾಣ ತೆಗೀತಿನಂತೆ, ಈ  ಡಾಕ್ಟರ್ ಗಳು ಹೇಳ್ತಾರೆ.

ಸಿದ್ಧಾಂತ್ : ನಾನಿದನ್ನು ನಂಬೋಲ್ಲ. ಅವರೆಲ್ಲ ಒಳ್ಳೆ ಸ್ಟ್ರಾಂಗ್ ಬಾಡಿ ಇಲ್ಲದೇ , ಅಥವಾ ಬೇರೆ ಏನೂ ಕಾರಣಕ್ಕೆ ಸತ್ತುಹೋಗಿರ್ಬೇಕು. ನಮ್ಮ ತಾತ ಎಪ್ಪತ್ತು ವರ್ಷದಿಂದ ಸೇದುತ್ತ ಇದ್ದಾರೆ. ಏನೂ ಆಗಿಲ್ಲ ಅವರಿಗೆ.

ಸಿಗರೇಟ್: ಅಯ್ಯೋ, ನಿಮ್ಮ ತಾತನಿಗೆ ಆ ಕಾಲದಲ್ಲಿ ಐದು ಜನ ಸ್ನೇಹಿತರು ಇದ್ದರು. ಎಲ್ಲರೂ ಒಟ್ಟಿಗೇ ಸಿಗರೇಟ್ ಸೇದೋದು ಕಲಿತದ್ದು. ಅವರೆಲ್ಲ ನನ್ನಿಂದ ಶ್ವಾಸಕೋಶ ಖಾಯಿಲೆ ಮತ್ತೆ ಸ್ಟ್ರೋಕ್ ಬಂದು ಸತ್ತುಹೋದರು. ಏನೋ ಅಪರೂಪಕ್ಕೆ ಒಬ್ಬರು ಎಂಬಂತೆ ನಿಮ್ಮ ತಾತ  ಒಬ್ಬರು ಬದುಕಿ ಉಳಿದಿದ್ದಾರೆ. ಅವರಿಗೂ ನನ್ನಿಂದ ಅಸ್ತಮಾ ಬಂದಿದೆ ಪಾಪ!

ಸಿದ್ಧಾಂತ್ : ಮನುಷ್ಯ ಅಂದಮೇಲೆ ಯಾವತ್ತಿದ್ರೂ ಸಾಯೋದೇ ತಾನೇ?! ಈ ಆಫೀಸ್ ನವರು ಕೊಡೋ ಕಿರುಕುಳ ತಡ್ಕೊಂಡು ನೂರು ವರ್ಷ ಇರೋಕಾಗುತ್ತಾ? ಅದಕ್ಕೆ ಆಫೀಸ್ ನಲ್ಲಿ ಸ್ಟ್ರೆಸ್  ಅಂದಕೂಡಲೇ ನಾನ್ ನಿನ್ನನ್ನ ಹುಡುಕಿಕೊಂಡು ಓಡಿ ಬರೋದು.

ಸಿಗರೇಟ್ : ನೀನು ಒಂದು ವಿಷಯ ಗಮನಿಸಿದೆಯಾ?! ಮೊದಲೆಲ್ಲಾ ನಿನಗೆ ಸ್ಟ್ರೆಸ್ ಆದಾಗ ಏನ್ ಮಾಡ್ತಾ ಇದ್ದೆ?

ಸಿದ್ಧಾಂತ್ : ಹಾಡು ಕೇಳ್ತಾ ಇದ್ದೆ, ಧ್ಯಾನ ಮಾಡ್ತಾ ಇದ್ದೆ. ಈಗ ನೀನು ನನ್ನ ಸ್ಟ್ರೆಸ್ ಬಸ್ಟರ್, ನೀನಿಲ್ಲದೇ ಕೆಲಸ ನಡೀತಾನೇ ಇಲ್ಲ.

ಸಿಗರೇಟ್: ನನ್ನ ಬಳಸೋಕೆ ಶುರು ಮಾಡಿದ ಮೇಲೆ ತಡೆದುಕೊಳ್ಳುವ ಶಕ್ತಿ ಕಡಿಮೆ ಆಗ್ತಿದೆ ಅಲ್ವ?”

ಸಿದ್ಧಾಂತ್ : ಇರಬಹುದು, ನನ್ನ ಜೊತೆ ಕೆಲಸ ಮಾಡುವ ಬೇರೆಯವರಿಗೂ ಸ್ಟ್ರೆಸ್ ಇದೆ, ಆದ್ರೆ ಅವರು ಯಾವುದೇ ಅಭ್ಯಾಸ ಇಟ್ಟುಕೊಳ್ಳದೇ ಹೇಗೋ ಕೆಲಸ ಮಾಡ್ತಾರೆ, ಆದ್ರೆ ನನಗೆ ಆಗ್ತಾ ಇಲ್ಲ.

ಸಿಗರೇಟ್: ಪ್ರತಿಯೊಬ್ಬರಿಗೂ ದೈನಂದಿನ ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯ ಇರುತ್ತೆ, ಆದರೆ, ಸಿಗರೇಟ್ ಬಳಸಲು ಶುರು ಮಾಡಿದ ಮೇಲೆ ಅವರ ಸಂತೋಷಕ್ಕೆ ಕಾರಣವಾಗುವ ಮೆದುಳಿನಲ್ಲಿನ ಡೊಪಮೈನ್ ಅನ್ನು ನಾನು ನನ್ನಲ್ಲಿನ ನಿಕೋಟಿನ್ ಮೂಲಕ ಹಿಡಿತಕ್ಕೆ ತಂದುಕೊಳ್ಳುತ್ತೇನೆ. ಇದರಿಂದ ಅವರು ತಮ್ಮ ಸಂತೋಷವನ್ನು ಒಂದು ರೀತಿಯಾಗಿ ನನ್ನ ಬಳಿ ಒತ್ತೆ ಇಡುತ್ತಾರೆ. ಅವರಿಗೆ ಖುಷಿ ಆಗಲು, ಒಳ್ಳೆಯ ನಿದ್ದೆ ಬರಲು, ರಿಲಾಕ್ಸ್ ಆಗಲು ಸಿಗರೇಟ್ ಬೇಕೇ ಬೇಕು ಅಂತ ಅನಿಸೋಕೆ ಶುರು ಆಗುತ್ತೆ.

ಸಿದ್ಧಾಂತ್: ಅಯ್ಯೋ! ನಾನು ಸಿಗರೇಟ್ ನಿಂದ ಕೇವಲ ಕ್ಯಾನ್ಸರ್ ಬರುತ್ತೆ ಅಂದುಕೊಂಡೆ, ಇಷ್ಟೆಲ್ಲಾ ತೊಂದರೆ ಇದೆ ಅಂತ ನನಗೆ ಯಾರು ಹೇಳಲೇ ಇಲ್ವಲ್ಲ

ಸಿಗರೇಟ್: “ಇಷ್ಟೇ ಅಲ್ಲ, ನನ್ನನ್ನು ಬಳಸುವುದರಿಂದ ನಿನ್ನ ದೇಹದ ಸದೃಢತೆ, ಲೈಂಗಿಕ ಸಾಮರ್ಥ್ಯ ಸಹ ಕಡಿಮೆ ಆಗುತ್ತೆ. ಇನ್ನೂ ನಿನ್ನಂತಹ ಯುವಕ ಯುವತಿಯರಲ್ಲಿ ಮುಖದ ಕಾಂತಿ ಕುಗ್ಗುವಿಕೆ, ತುಟಿ ಕಪ್ಪಾಗುವುದು ಮತ್ತು ಮೊಡವೆಗಳು ಮೂಡುತ್ತವೆ.  ಜೊತೆಗೆ ನೀನು ತಂಬಾಕು ಬಳಸುವುದರಿಂದ, ಮನೆಯಲ್ಲಿರುವ ನಿನ್ನ ತಂದೆ ತಾಯಿ ಹಾಗೂ ಆ ನಿನ್ನ ಪ್ರೀತಿಯ ಅಣ್ಣನ ಮಕ್ಕಳಿಗೂ ಸಹ ತೊಂದರೆಯಾಗುತ್ತೆ. ಅಷ್ಟೇ ಯಾಕೆ! ನಿಮಗೆಲ್ಲ ಸಿಗರೇಟ್ ಮಾರಾಟ ಮಾಡಿ, ಅವನ ಅಂಗಡಿಯ ಮುಂದೆ ನೀವು ಬಿಡುವ ಸಿಗರೇಟ್ ಹೊಗೆಯನ್ನು ಸೇವಿಸುವ ಟೀ ಅಂಗಡಿಯ ರಾಜುವಿಗೂ ಇದರಿಂದ ತೊಂದರೆ ತಪ್ಪಿದ್ದಲ್ಲ.”

ಸಿದ್ಧಾಂತ್ ಭಯದಿಂದ ತನ್ನಲ್ಲಿ ಈಗಾಗಲೇ ಕಾಣಿಸಿಕೊಳ್ಳುತ್ತಿರುವ ಆಯಾಸ, ಕಾಂತಿಹೀನವಾದ ತನ್ನ ತ್ವಚೆಯನ್ನು ನೆನಪಿಸಿಕೊಳ್ಳಲಾರಂಭಿಸಿದ. ಯಾವ ಸಿಗರೇಟ್ ಕೂಡ ತನ್ನನ್ನು ಏನು ಮಾಡಲಾರದು ಎಂದು ತಿಳಿದಿದ್ದ ಅವನ ಭಂಡ ಧೈರ್ಯ ಕುಗ್ಗಲು ಇಷ್ಟು ಸಾಕಾಗಿತ್ತು

ಸಿದ್ಧಾಂತ: ಹಾಗಾದರೆ, ನಾನು ಮೊದಲು ನಿನ್ನ ಸಹವಾಸ ಬಿಟ್ಟು, ಗುಟುಕಾ ಅಥವಾ ಖೈನಿ ತಗೋಬಹುದಲ್ವಾ!? ಅದರ ಬೆಲೆ ಕೂಡ ಕಡಿಮೆ

ಸಿಗರೇಟ್: “ಅವೆಲ್ಲ ನನ್ನದೇ ಅವತಾರಗಳು ಅಷ್ಟೇ. ಅವುಗಳಿಂದಲೂ ಇಂತಹುದೇ ಸಮಸ್ಯೆಗಳು ಬರುತ್ತವೆ, ಜೊತೆಗೆ ಬಾಯಲ್ಲಿ ಹುಣ್ಣು, ಬಾಯಿಯ ಕ್ಯಾನ್ಸರ್ ಕೂಡ ಬರುತ್ತೆ!”

ಸಿದ್ಧಾಂತ್ : ಅರೆ! ನಿನ್ನ ಬಿಡಿಸುಕೊಳ್ಳೋಕೆ ಏನು ಮಾಡಬೇಕು ಅಂತ ಈಗಲೇ ಪತ್ತೆ ಹಚ್ಚುತ್ತೇನೆ

ತಂಬಾಕು ನಿಲ್ಲಿಸುವುದು ಕಷ್ಟವೇನಲ್ಲ. ಈ ಕಥೆ ಓದುತ್ತಿರುವ ಪ್ರತಿಯೊಬ್ಬ ತಂಬಾಕು ಹವ್ಯಾಸಿಯೂ ಒಮ್ಮೆಯಾದರೂ ಇದರ ಸಹವಾಸ ಸಾಕು ಅಂತ ಒಂದೆರೆಡು ದಿನವಾದರೂ ತಂಬಾಕು ಚಟವನ್ನು ನಿಲ್ಲಿಸಿರುತ್ತಾರೆ. ಅದು ಸಾಧ್ಯವಾಗದಾಗ ಅವರೆಲ್ಲರೂ ತಮ್ಮ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅಥವಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬಹುದು. ಅಲ್ಲಿ ನುರಿತ ಆಪ್ತಸಮಾಲೋಚಕರು ಅಥವಾ ಮನಶಾಸ್ತ್ರಜ್ಞರು ಅವರಿಗೆ ತಂಬಾಕು ಬಿಡಲು ಸಹಾಯ ಮಾಡುತ್ತಾರೆ. ಅಥವಾ, ತಂಬಾಕಿನ ಪ್ಯಾಕೆಟ್ ಮೇಲಿರುವ ನಿಮ್ಹಾನ್ಸ್ ನಲ್ಲಿಯ ಸಹಾಯವಾಣಿ ಕ್ವಿಟ್ ಲೈನಿನ 1800-11-2356 ಸಂಖ್ಯೆಗೆ ಅಥವಾ ಟೆಲಿ ಮನಸ್ ನ  14416 ಸಂಖ್ಯೆಗೆ ಕರೆ ಮಾಡಿ ಮೊಬೈಲ್ ಮೂಲಕವೇ ಉಚಿತ ಸಹಾಯ ಪಡೆಯಬಹುದು.”

-ಸುಭಾಷ್ ಹೆಚ್ ಜೆ, ಡಾ. ಮೀನಾ ಕೆ ಎಸ್, ಡಾ. ಲತಾ ಕೆ, ಡಾ. ದರ್ಶನ್ ಎಸ್

ನಮನ್ ಕಾರ್ಯಕ್ರಮ , ನಿಮ್ಹಾನ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT