ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19ರಿಂದ ಮೂಡಲಿದೆ ಹೊಸ ಸ್ವರೂಪದ ಮಾನಸಿಕ ಗೊಂದಲ

Last Updated 1 ಜೂನ್ 2020, 11:12 IST
ಅಕ್ಷರ ಗಾತ್ರ

ನಮ್ಮ ನಿತ್ಯ ಜೀವನವನ್ನು ಬುಡಮೇಲು ಮಾಡುವ ಪ್ರಸಂಗಗಳು ಮನದಾಳದಲ್ಲಿ ಅವಿತುಕೊಂಡಿರುವ ಅದ್ಭುತ ಶಕ್ತಿಗಳನ್ನು ಹೊರ ತರಬಲ್ಲವು ಎನ್ನುವುದಕ್ಕೆ ನಿದರ್ಶನಗಳು ಬೇಕಾದಷ್ಟಿವೆಯಾದರೂ ಈಚಿನ ಕೊರೊನಾ ವೈರಾಣುವಿನ ಆಕ್ರಮಣದ ಸನ್ನಿವೇಶದಲ್ಲಿಯೂ ಕೆಲವನ್ನು ಕಾಣಬಹುದು. ಹದಿಹರೆಯದ ಬಡ ಹೆಣ್ಣು ಮಗಳೊಬ್ಬಳು ತನ್ನ ಅಸಹಾಯಕ ತಂದೆಯನ್ನು ಸಾವಿರಾರು ಕಿ.ಮೀ.ಗಳಷ್ಟು ದೂರದ ಹುಟ್ಟೂರನ್ನು ಅಡಕಲಾಸಿ ಸೈಕಲ್‌ ಹಿಂದೆ ಕೂಡಿಸಿಕೊಂಡು ತಲುಪಿದ್ದು ಸಂಚಲನ ಮೂಡಿಸುವ ಸಂಗತಿ. ಸೋಂಕಿತರ ಸೇವೆಯಲ್ಲಿ ಅವಿರತವಾಗಿ ದುಡಿದಿದ್ದ ವೈದ್ಯರೊಬ್ಬರು ಸೋಂಕಿನಿಂದಲೇ ಅಸುನೀಗಿದಾಗ ಚೆನ್ನೈ ನಗರದಲ್ಲಿ ಮೃತರ ಸಾವಿನ ಸಂಸ್ಕಾರಕ್ಕೂ ಅವಕಾಶ ಮಾಡಿಕೊಡದೇ ದಾಂಧಲೇ ಎಬ್ಬಿಸಿದ್ದು ಈ ಆಂತರಿಕ ಅದ್ಭುತ ಶಕ್ತಿಯ ಪ್ರಭಾವದಿಂದಲೇ ಇದ್ದಿರಬಹದು. ಪರಿಚಿತ ಪರಿಸರದ ಸ್ವರೂಪ ಗ್ರಹಿಸಲಾರದಷ್ಟು ವೇಗವಾಗಿ ಬದಲಾದಾಗ ಅಘೋಚರ ಮನೋಬಲ ದಿಢೀರನೆ ಪ್ರತ್ಯಕ್ಷಗೊಳ್ಳಬಲ್ಲದು. ಆದರೆ ಇವುಗಳಲ್ಲಿ ಒಳಿತು ಯಾವುದು ಕೆಡಕು ಯಾವುದು ಎನ್ನುವುದನ್ನು ವ್ಯಕ್ತಿತ್ವವಷ್ಟೇ ನಿರ್ಧರಿಸುವುದು.

ಸದ್ಯದ ಕಾಲಘಟ್ಟವು ಇಂತಹದೊಂದು ಪರಿಸ್ಥಿತಿಯ ಸುಳಿಯಲ್ಲಿ ಜಗತ್ತಿನ ಬಹುಪಾಲು ರಾಷ್ಟ್ರಗಳನ್ನು ಸಿಕ್ಕಿಹಾಕಿಸಿಸಡ. ತಮ್ಮ ಪ್ರಜೆಗಳನ್ನು ರೋಗದಿಂದ ಕಾಪಾಡುವ ಸಲುವಾಗಿ, ಸರ್ಕಾರಗಳು ಹೇರಿರುವ ಕಡ್ಡಾಯ ಗೃಹಬಂಧನದ ನಿಯಮ ಜನತೆಯಲ್ಲಿ ಅತ್ಯಂತ ಅಸಹಾಯಕ ಮಾನಸಿಕ ಪರಿಸರವನ್ನು ಸೃಷ್ಟಿಸಿದೆ. ಇವುಗಳಿಂದಾಗಬಲ್ಲ ಪರಿಣಾಮಗಳು ಬಹುರೂಪಿಯಷ್ಟೇ ಅಲ್ಲ ದೀರ್ಘಾವಧಿಯದ್ದು ಎನ್ನುವುದರ ಮುನ್ಸೂಚನೆಗಳು ಈಗಾಗಲೇ ಗೋಚರಿಸುತ್ತಿವೆ. ಅವುಗಳೀಗ ಮಂದಗತಿಯಲ್ಲಿದ್ದರೂ ಜನಜೀವನದ ಮೇಲೆ ಉಂಟುಮಾಡುತ್ತಿರುವ ಪರಿಣಾಮಗಳು ಆಘಾತಕಾರಿ ಎನ್ನುವುದರ ಅರಿವು ಜನರಲ್ಲಿ ಮೂಡಿದೆ.

ಹೊಸ ಸ್ವರೂಪದ ಮಾನಸಿಕ ಸಮಸ್ಯೆ

ಶಾಲಾ– ಕಾಲೇಜುಗಳಿಗೆ ಹೋಗುವ ಮಕ್ಕಳ ಭವಿಷ್ಯ, ಕುಟುಂಬದೊಳಗಿನ ಸಂಬಂಧ ಮತ್ತು ಹೊಂದಾಣಿಕೆಗಳು ಹೊಸ ಸ್ವರೂಪದ ಮಾನಸಿಕ ಸ್ಥಿತಿ ಮತ್ತು ಸಮಸ್ಯೆಗಳನ್ನು ಹುಟ್ಟಿಸಿವೆ. ಇದನ್ನು ಇತರರ ನೆರವಿನಿಂದಲೋ, ವಿವೇಚನಾ ಸಾಮರ್ಥ್ಯದಿಂದಲೋ ಎದುರಿಸುತ್ತಿರುವವರ ಸಂಖ್ಯೆಗಿಂತಲೂ ಎದುರಿಸಲಾಗದವರ ಸಂಖ್ಯೆ ದೊಡ್ಡದಿದೆ. ಶಾಲೆ, ಕಾಲೇಜುಗಳು ಯಾವಾಗ ಆರಂಭವಾಗುತ್ತದೆ, ಪರೀಕ್ಷೆ ಮತ್ತು ಫಲಿತಾಂಶಗಳು ಯಾವಾಗ? ಮುಂದಿನ ಶಿಕ್ಷಣದ ಹಾದಿ ಯಾವುದಿರಬೇಕು ಎನ್ನುವ ಪ್ರಶ್ನೆಗಳು ವಿದ್ಯಾರ್ಥಿಗಳದಾಗಿದ್ದರೆ, ಮಕ್ಕಳಿಗೆ ಅತ್ಯತ್ತಮವಾದ ಮಾರ್ಗದರ್ಶನ ನೀಡುವುದು ಹೇಗೆ, ಅವರ ಹಣಕಾಸಿನ ಅಗತ್ಯಗಳನ್ನು ಒದಗಿಸುವುದು ಯಾವ ರೀತಿಯದ್ದಾಗಿರಬೇಕೆನ್ನುವುದು ಪೋಷಕರ ಮನಸನ್ನು ಆವರಿಸಿದೆ.

ಪ್ರೀತಿ, ವಾತ್ಸಲ್ಯ, ವೈವಾಹಿಕ ಸಂಬಂಧಗಳನ್ನು ಉಳಿಸಿಕೊಳ್ಳುವುದು, ಬೆಳಸಿಕೊಳ್ಳುವುದರ ಬಗ್ಗೆಯಂತೂ ಯುವಜನರ ಚೈತನ್ಯ ಮತ್ತು ವಿವೇಚನೆಗೆ ಸವಾಲು ಹಾಗಿರುವುದುಂಟು. ಹಾಗೆಯೇ ಉದ್ಯೋಗ ಕಳೆದುಕೊಂಡವರು, ಅರೆಸಂಪಾದನೆಗೆ ತಳ್ಳಿದವರ ಮಾನಸಿಕ ಒತ್ತಡಗಳು ನುಂಗಿದಷ್ಟು ವಾಕರಿಕೆಯಾಗಿ ಹೊರಬರುವಂತಹ ಸ್ಥಿತಿಯಾಗಿದೆ. ತಿಂಗಳುಗಳುಗಟ್ಟಲೆ ಮನೆಯಲ್ಲಿಯೇ ಕುಳಿತು ಕಲಿತ್ತಿದ್ದು ಏನು, ಮರೆತಿದ್ದು ಏನು ಎನ್ನುವಂತಹ ಮಾನಸಿಕ ಸ್ಥಿತಿಯು ಮಕ್ಕಳು, ಪೋಷಕರು ಮತ್ತು ಶಿಕ್ಷಕರಲ್ಲಿಯೂ ಉಂಟಾಗಿರುವುದಂತೂ ಬಲ್ಲ ಸಂಗತಿ. ಸಾಮಾಜಿಕ ಪರಿಸರವನ್ನು ಸೃಷ್ಟಿಸುತ್ತಿದ್ದ ಶಾಲಾ ಕಾಲೇಜಿನ ಆವರಣ, ಪರಸ್ಪರ ಸಂಬಂಧಗಳಿಗೆ ಸಂಬಂಧಿಸಿದ ಸಿಹಿಕಹಿ ಅನುಭವಗಳು, ಶಾಲಾ ಆವರಣದ ಹೊರಗಿನ ಪರಿಸರಗಳಾದ ಕ್ರೀಡಾಂಗಣ, ಕ್ಯಾಂಟೀನ್‌, ತಂಪುಪಾನೀಯದ ಅಂಗಡಿಗಳೆದುರೆಗೆ ಕೂತು, ನಿಂತು ಮಾತಾಡುವ ಸನ್ನಿವೇಶಗಳೆಲ್ಲವೂ ಬದಲಾದ ರೂಪವನ್ನು ತಾಳಲಿವೆ.

ಒತ್ತಡ ಸೃಷ್ಟಿ

ಹತ್ತಿರ ಬರಬಾರದು, ಕೈಕುಲಕಬಾರದು, ಕೆಮ್ಮು, ಸೀನುಗಳೆಲ್ಲದರ ಮೇಲೂ ಗಮನವಿರಿಸಿಕೊಂಡಿರಬೇಕೆನ್ನುವ ಎಚ್ಚರಿಕೆಯ ವಿಧಿಗಳು ವ್ಯಕ್ತಿ ಮನಸಿನಲ್ಲಿ ಒತ್ತಡದ ಭಾವಗಳನ್ನು ಸೃಷ್ಟಿಸದೇ ಇರಲು ಸಾಧ್ಯವೆ? ಸ್ವಲ್ಪ ಎಚ್ಚರಿಕೆ ತಪ್ಪಿದರೂ ವೈರಾಣುವಿನ ಹಿಡಿತಕ್ಕೆ ಸಿಕ್ಕಿಕೊಂಡಂತೆ ಎನ್ನುವ ಭಯ ಇರದಿರುವವರು ವಿರಳ. ಇನ್ನು ಈ ಸ್ಥಿತಿಯನ್ನೇ ಹಗೆತನ ಪ್ರದರ್ಶಿಸುವುದಕ್ಕೂ ಬಳಸುವವರು ಇದ್ದಾರೆ ಎನ್ನುವುದರ ಉದಾಹರಣೆಗಳು ಕಂಡುಬರುತ್ತಿವೆ. ಒಟ್ಟಿನಲ್ಲಿ ಇಡೀ ವಿಶ್ವವೇ ಕಡ್ಡಾಯ ಗೃಹಬಂಧನದ ಮನೋವೈಜ್ಞಾನಿಕ ಪ್ರಯೋಗಕ್ಕೆ ಒಳಪಟ್ಟಿದೆ. ಅತಿ ಅಪರೂಪವೆನ್ನಬಹುದಾದ ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಎದುರಿಸುವುದು ಇಂದಿನ ಅತಿ ಮುಖ್ಯ ಉದ್ದೇಶಗಳಲ್ಲಿ ಒಂದಾಗಬೇಕಿದೆ.

ವ್ಯಕ್ತಿಯ ಮಾನಸಿಕ ಶಕ್ತಿಗಳು ರಾಷ್ಟ್ರ ಪುನಶ್ಚೇತನದಲ್ಲಿ ಅತ್ಯಮೂಲ್ಯವಾದದ್ದಾಗಿರುವುದರಿಂದ ಈ ವಿಷಯದ ಕಡೆ ಪ್ರತಿಯೊಬ್ಬರ ಗಮನವೂ ಹರಿಯಬೇಕಿದೆ. ರೋಗವನ್ನು ನಿಯಂತ್ರಿಸಿದ ನಂತರದಲ್ಲಿ ಉದ್ಭವಿಸಬಹುದಾದ ಕ್ಷೋಭೆಯು ವ್ಯಕ್ತಿ ಮತ್ತು ಸಮುದಾಯದ ಮೇಲೆ ಹೊರೆಯಾಗುವ ಸಾಧ್ಯತೆಗಳಿವೆ. ವ್ಯಕ್ತಿತ್ವ, ಉದ್ದಿಮೆ, ಕುಟುಂಬ, ಕೆಲಸದ ಪರಿಸರಗಳ ಸಮತೋಲನವನ್ನು ಕೆಡಿಸುವ ಸಾಧ್ಯತೆಗಳೂ ಇವೆ. ಹೀಗೆ ಹೇಳುವುದಕ್ಕೆ ಕಾರಣ ಕಳೆದ ಐದು ದಶಕಗಳಲ್ಲಿ ಬೇರೆ ಬೇರೆ ದೇಶಗಳಲ್ಲಿ ಸಂಭವಿಸಿದ ಮನುಷ್ಯ ನಿರ್ಮಿತ ಮತ್ತು ಪ್ರಕೃತಿ ಆಕ್ರೋಶದಿಂದಾದ ಘಟನೆಗಳಿಂದ ಉಂಟಾದ ಮನೋದುಃಸ್ಥಿತಿಗಳು. ಈ ನಿಟ್ಟಿನಲ್ಲಿ ನೋಡುವುದಾದರೆ ಫ್ರಾನ್ಸ್‌ ದೇಶದಲ್ಲಿ 1992ರಲ್ಲಿ ನಡೆದ ಭಯೋತ್ಪಾದನೆಯ ಕೃತ್ಯ ಉಂಟುಮಾಡಿದ ಪರಿಸ್ಥಿತಿಯಲ್ಲಿ ಪ್ರಾಣಹಾನಿಯೊಂದಿಗೆ ಜನರು ಭಯಭೀತರಾಗಿದ್ದೂ ಉಂಟು. ಹೀಗಾಗಿಯೇ ಜನತೆಯ ಮನೋನೆಮ್ಮದಿಯನ್ನು ಕಾಪಾಡುವ ಸಲುವಾಗಿ ಶಿಬಿರಗಳನ್ನು ತೆರೆಯುವುದರ ಮೂಲಕ ವ್ಯಕ್ತಿಯ ಮಾನಸಿಕ ಆರೋಗ್ಯದ ಕಡೆಯೂ ಗಮನ ಹರಿಸಲಾಯಿತು. ಈ ರೀತಿಯ ಮನೋಒತ್ತಡದ ನಿರ್ವಹಣೆಯನ್ನು ಉತ್ತಮ ಮನೋಸುರಕ್ಷತಾ ಕ್ರಮ ಎನ್ನುತ್ತದೆ ಮನೋವಿಜ್ಞಾನ.

ಹೊಂದಾಣಿಕೆ ಸಮಸ್ಯೆ

ವ್ಯಕ್ತಿಯು ಎಷ್ಟೇ ಬಲಾಢ್ಯನಾಗಿದ್ದರೂ ಪರಿಸ್ಥಿತಿ ತಂದೊಡ್ಡುವ ಒತ್ತಡಗಳು ಎದೆಗುಂದುವಂತೆ ಮಾಡಿಬಿಡುತ್ತದೆ. ಹೀಗಾಗಿ ಕೋವಿಡ್‌–19 ತಕ್ಷಣದಲ್ಲಿಯೇ ಕಣ್ಮರೆಯಾದರೂ ಅದು ಈಗಾಗಲೇ ವ್ಯಕ್ತಿ ಮತ್ತು ಸಮುದಾಯದ ಮನಸಿನಲ್ಲಿ ಹೊಸ ಆತಂಕ, ಹೊಸ ಅಸಹಾಯಕತೆಯನ್ನು ಹುಟ್ಟಿಸಿದೆ. ಕಠಿಣ ಗೃಹಬಂಧನದಿಂದ ಬಿಡುಗಡೆಯಾದ ನಂತರದಲ್ಲಿ ವ್ಯಕ್ತಿಗಳ ಹೊಂದಾಣಿಕೆಯ ರೀತಿಯಲ್ಲಿಯೂ ಬದಲಾವಣೆಗಳಾಗಿರುವುದರ ಬಗ್ಗೆ ಪ್ರತಿಷ್ಠಿತ ವೈಜ್ಞಾನಿಕ ನಿಯತಕಾಲಿಕೆಗಳ ಸಂಶೋಧನಾ ಲೇಖನಗಳು ತಿಳಿಸಿವೆ.

ಆರೋಗ್ಯವಂತ ವ್ಯಕ್ತಿಯ ಚಲವಲನಗಳನ್ನು, ಯಾವುದೇ ಕಾರಣವಾದರೂ ಸರಿಯೇ, ದಿಢೀರನೆ ನಿಯಂತ್ರಿಸಿದಾಗ ಆಗುವಂತಹ ಮನೋಘಾತಗಳು ಅಷ್ಟಿಷ್ಟಲ್ಲ. ಇಂತಹದೊಂದು ಪರಿಸ್ಥಿತಿಯು ರೋಗದಿಂದ ಉಂಟಾಗುವ ನರಳುವಿಕೆಗಿಂತಲೂ ಭೀಕರವಾಗಿರುತ್ತದೆ. ಅತಿಚಂಚಲತೆ, ಅತಿಭೀತಿ, ತಡೆದುಕೊಳ್ಳಲಾಗದಂತಹ ಆಲೋಚನೆ, ನಕಾರಾತ್ಮಕ ಭಾವಗಳು, ಅತಿ ಸಿನಿಕತನ, ಆವೇಶಭರಿತ ನಡೆನುಡಿಗಳು ಇನ್ಮುಂದೆ ಮನೆಮಂದಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಮಕ್ಕಳಲ್ಲಿ ಕಂಡುಬರುವ ನಿರಾಸಕ್ತಿ, ಆಕ್ರೋಶದ ನಡೆನುಡಿಗಳು ಶಾಲಾಕಾಲೇಜಿನ ಆವರಣಗಳಲ್ಲಿ ಕಂಡುಬಂದರೂ ಅಚ್ಚರಿಯಲ್ಲ.

ಒಟ್ಟಿನಲ್ಲಿ ಸಮಸ್ಯಾತ್ಮಕ ವರ್ತನೆಗಳು ಬಹು ಸಾಮಾನ್ಯವಾಗಬಲ್ಲವು. ಹೀಗಾಗಿ ಮಾನಸಿಕ ಸ್ವರೂಪದ ಮುಂಜಾಗ್ರತಾ ಕ್ರಮಗಳನ್ನು ಜಾರಿಗೆ ತರುವುದು ಅತ್ಯಗತ್ಯ. ಜನರು ವ್ಯವಹರಿಸುವ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಾನಸಿಕ ಆರೋಗ್ಯದ ಬಗ್ಗೆ ಜಾಹೀರಾತು, ಶಿಬಿರ, ಕಾರ್ಯಾಗಾರದ ಮೂಲಕ ತಿಳಿವಳಿಕೆ ನೀಡುವುದರತ್ತ ಗಮನಹರಿಸುವುದು ಸೂಕ್ತ. ಹಾಗೆಯೇ ಅಂಧಶ್ರದ್ಧೆ, ಅಂಧಾಚರಣೆ, ಮಾಟಮಂತ್ರಗಳ ಮೂಲಕ ಮನೋಗೊಂದಲಗಳಿಗೆ ಪರಿಹಾರ ಸಿಗದು ಎನ್ನುವುದೂ ಕೂಡ ವ್ಯಾಪಕವಾಗಿ ಪ್ರಚಾರದಲ್ಲಿರಬೇಕು.

(ಲೇಖಕ ಮನೋವಿಜ್ಞಾನಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT