ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಡಮೂಲಿಕೆಗಿರಲಿ ಕಿಚನ್ ಗಾರ್ಡನ್‌ನಲ್ಲಿ ಜಾಗ

Last Updated 20 ಜುಲೈ 2020, 20:30 IST
ಅಕ್ಷರ ಗಾತ್ರ

ಕಿಚನ್‌ ಗಾರ್ಡನ್‌ ಇಂದಿನನಗರ ಜೀವನಶೈಲಿಯ ಟ್ರೆಂಡ್‌. ನಗರದ ಮನೆಗಳಲ್ಲಿ ಇರುವ ಸಣ್ಣ ಜಾಗದಲ್ಲೇ ಪುಟ್ಟ ಪುಟ್ಟ ಪಾಟ್‌ಗಳಲ್ಲಿ ಗಿಡಗಳನ್ನು ಬೆಳೆಸುತ್ತಾರೆ. ಇವು ಮನೆಯ ಅಂದ ಹೆಚ್ಚಿಸುತ್ತವೆ.ಹೀಗೆ ಮನೆಗೆ ಅಂದ ನೀಡುವ ಗಿಡಗಳನ್ನು ಬೆಳೆಸುವ ಜೊತೆಗೆ ಕಿಚನ್ ‌ಗಾರ್ಡನ್‌ನಲ್ಲಿ ಗಿಡಮೂಲಿಕೆಗೂ ಜಾಗ ನೀಡಿದರೆ ಆರೋಗ್ಯಕ್ಕೂ ಹಿತ, ಅಡುಗೆಗೂ ರುಚಿ.

ಅದರಲ್ಲೂ ಮಳೆಗಾಲದಲ್ಲಿ ಸೋಂಕು, ಅಲರ್ಜಿಯಂತಹ ಕಾಯಿಲೆಗಳು ಹರಡುವುದು ಹೆಚ್ಚು. ಗಿಡಮೂಲಿಕೆಗಳನ್ನು ಕಿಚನ್‌ ಗಾರ್ಡನ್‌ನಲ್ಲೇ ಬೆಳೆಯುವುದರಿಂದ ಹೊರಗಡೆಯಿಂದ ಹಣ ಕೊಟ್ಟು ತರುವುದು ತಪ್ಪುತ್ತದೆ. ಜೊತೆಗೆ ಆರೋಗ್ಯವು ಸುಧಾರಿಸುತ್ತದೆ. ಅಲ್ಲದೇ ಇವು ಅಡುಗೆಮನೆಯ ಅಂದವನ್ನು ಹೆಚ್ಚಿಸುತ್ತವೆ. ಅಡುಗೆಮನೆಯಲ್ಲಿ ಇವನ್ನು ಬೆಳೆಯುವ ಮುನ್ನ ಸೂರ್ಯನ ಬೆಳಕು ಚೆನ್ನಾಗಿ ಬೀಳುವ ಜಾಗವನ್ನು ಆರಿಸಿಕೊಳ್ಳಿ. ಅಂದರೆ ದಿನದಲ್ಲಿ ಕನಿಷ್ಠ 5 ರಿಂದ 7 ಗಂಟೆ ಸೂರ್ಯನ ಬಿಸಿಲು ತಾಕುವ ಜಾಗದಲ್ಲಿಡಿ. ಹಾಗಾದರೆ ಅಡುಗೆಮನೆಯಲ್ಲಿ ಬೆಳೆಯುವ ಕೆಲವು ಗಿಡಮೂಲಿಕೆಗಳು ಹಾಗೂ ಉಪಯೋಗ ಇಲ್ಲಿದೆ.

ಪಚ್ಚೆಕದಿರು (ಬೆಸೀಲ್‌)
ಇಟಾಲಿಯನ್ ತಿನಿಸುಗಳಾದ ಪಿಜ್ಝಾ, ಸಾಸ್ ಹಾಗೂ ಪಾಸ್ತಾಗಳಲ್ಲಿ ಫ್ಲೇವರ್‌ಗಾಗಿ ಬೆಸೀಲ್‌ ಗಿಡದ ಎಲೆಗಳನ್ನು ಬಳಸುತ್ತಾರೆ. ಅಲ್ಲದೇ ದೇಹಾರೋಗ್ಯಕ್ಕೂ ಇದರಿಂದ ಅನೇಕ ಉಪಯೋಗಗಳಿವೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶ ಅಧಿಕವಾಗಿದೆ. ಇದು ಉರಿಯೂತವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಜೀರ್ಣಕ್ರಿಯೆಗೂ ಉತ್ತಮ. ಅಲ್ಲದೇ ಚರ್ಮದ ಆರೋಗ್ಯಕ್ಕೂ ಸಹಕಾರಿ. ಮಧುಮೇಹಿಗಳು ಪ್ರತಿದಿನ ಈ ಎಲೆಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.

ಪುದಿನ
ಸಾಮಾನ್ಯವಾಗಿ ಪುದಿನವನ್ನು ಒಂದಲ್ಲ ಒಂದು ಅಡುಗೆಗೆ ಬಳಸುತ್ತೇವೆ. ಪ್ರತಿದಿನ ಮಾರುಕಟ್ಟೆಗೆ ಹೋಗಿ ಪುದಿನ ಸೊಪ್ಪು ತರುವುದಕ್ಕಿಂತ ಅಡುಗೆಮನೆಯಲ್ಲಿ ಬೆಳೆದುಕೊಳ್ಳಬಹುದು. ಇದಕ್ಕೆ ಹೆಚ್ಚು ಸೂರ್ಯನ ಬಿಸಿಲಿನ ಅವಶ್ಯಕತೆ ಇಲ್ಲ. ಅಗಲವಾದ ಪಾಟ್‌ನಲ್ಲಿ ಬೆಳೆಯಬಹುದು. ಪುದಿನ ಗಿಡ ಬೇಗ ಬೆಳೆಯುತ್ತದೆ. ಅಲ್ಲದೇ ಇದು ಮನೆಯೊಳಗೆ ಘಮ ಹರಡಿಸುತ್ತದೆ. ನಮ್ಮ ಡಯೆಟ್ ಕ್ರಮದಲ್ಲಿ ಪುದಿನ ಸೇರಿಸಿಕೊಳ್ಳುವುದು ಉತ್ತಮ. ಇದರಿಂದ ಜೀರ್ಣಶಕ್ತಿಯೂ ಹೆಚ್ಚುತ್ತದೆ. ಇದು ನೋವು ನಿವಾರಕವೂ ಹೌದು. ನಿಮ್ಮ ಕೈ ಕಾಲುಗಳಲ್ಲಿ ಊತವಿದ್ದರೆ ಪುದಿನ ರಸವನ್ನು ಹಚ್ಚುವುದರಿಂದ ಬೇಗನೇ ಊತ ಇಳಿಯುತ್ತದೆ.

ಕೊತ್ತಂಬರಿ ಸೊಪ್ಪು
ಇದನ್ನು ಸುಲಭವಾಗಿ ಮನೆಯ ಕಿಚನ್‌ ಗಾರ್ಡನ್‌ನಲ್ಲಿ ಬೆಳೆಯಬಹುದು. ಕಂಟೈನರ್‌ನಲ್ಲಿ ಇದು ಸುಲಭವಾಗಿ ಬೆಳೆಯುತ್ತದೆ. ಇದರ ಜೀವಿತಾವಧಿಯೂ ಕಡಿಮೆ. ಆ ಕಾರಣಕ್ಕೆ ತಾಜಾ ಕೊತ್ತಂಬರಿ ಸೊಪ್ಪನ್ನು ಆಗಾಗ ಬಳಸುತ್ತಿರಬಹುದು. ಇದು ನೋಡಲು ಸುಂದರ ಅಲ್ಲದೇ ಆರೋಗ್ಯಕ್ಕೂ ಉತ್ತಮ. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಹೃದಯದ ಆರೋಗ್ಯಕ್ಕೂ ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT