ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ ಕುಶಲ | ಕಡಿಮೆ ರಕ್ತದ ಒತ್ತಡ: ಬೇಡ ತಾತ್ಸಾರ

Published 22 ಏಪ್ರಿಲ್ 2024, 23:32 IST
Last Updated 22 ಏಪ್ರಿಲ್ 2024, 23:32 IST
ಅಕ್ಷರ ಗಾತ್ರ

ಹೃದಯದಿಂದ ನಿರಂತರವಾಗಿ ರಕ್ತವು ದೇಹದ ಎಲ್ಲಾ ಅಂಗಗಳಿಗೆ ಸರಬರಾಜು ಆಗುತ್ತಲೇ ಇರುತ್ತದೆ. ಹೃದಯದಿಂದ ರಕ್ತ ಹೊರಹಾಕಲ್ಪಟ್ಟ ಮೇಲೆ ರಕ್ತದ ಏಕಮುಖ ಹರಿವು ರಕ್ತನಾಳಗಳ ಒಳಪದರಗಳ ಮೇಲೆ ಹೇರುವ ಒತ್ತಡವನ್ನು ‘ರಕ್ತದ ಒತ್ತಡ’ ಎಂದು ಕರೆಯಲಾಗುತ್ತದೆ. ಆರೋಗ್ಯವಂತ ಮಧ್ಯವಯಸ್ಕ ಮಹಿಳೆ ಮತ್ತು ಪುರುಷರಲ್ಲಿ ರಕ್ತದ ಒತ್ತಡವು 120/80 ಮಿಲಿ ಮೀಟರ್‌ನಷ್ಟು (ಪಾದರಸ ಕಂಬದ ಎತ್ತರ) ಇರುತ್ತದೆ. ವಯಸ್ಸಾದಂತೆಲ್ಲ 50ರ ಹರೆಯದ ನಂತರ ಸುಮಾರು 130/90 ಮಿಲಿ ಮೀಟರ್‌ನಷ್ಟು ಇರುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ದೇಹದ ತೂಕ, ಎತ್ತರ, ಗಾತ್ರ ಅಂಗಗಳಿಗೆ ಅನುಗುಣವಾಗಿ ಅಲ್ಪಸ್ವಲ್ಪ ಬದಲಾವಣೆ ಇರಲೂಬಹುದು. ಆದರೆ ರಕ್ತದ ಒತ್ತಡ 90/60 ಮಿಲಿ ಮೀಟರ್‌ಗಳಿಗಿಂತಲೂ ಕಡಿಮೆಯಾದಾಗ ಅದನ್ನು ‘ಕಡಿಮೆ ರಕ್ತದ ಒತ್ತಡ’ ಎಂದು ಕರೆಯುತ್ತೇವೆ.

ಕಡಿಮೆ ರಕ್ತದ ಒತ್ತಡದಿಂದಾಗಿ ದೇಹದ ಪ್ರಮುಖ ಅಂಗಗಳಾದ ಕಿಡ್ನಿ, ಹೃದಯ, ಮಿದುಳು, ಕಣ್ಣು, ಶ್ವಾಸಕೋಶ, ಯಕೃತ್ತು ಮುಂತಾದ ಅಂಗಗಳಿಗೆ ರಕ್ತದ ಸರಬರಾಜಿನಲ್ಲಿ ವ್ಯತ್ಯಯವಾಗಿ ದೀರ್ಘಕಾಲಿಕ ತೊಂದರೆಗಳಿಗೆ ಕಾರಣವಾಗುತ್ತದೆ.

 ಕಾರಣಗಳು:

1. ಅತೀವ ರಕ್ತಸ್ರಾವ.
2. ನಿರ್ಜಲೀಕರಣ.
3. ಥೈರಾಯಿಡ್ ಗ್ರಂಥಿಯ ಕಾರ್ಯದಕ್ಷತೆಯು ಕ್ಷೀಣಿಸಿದಾಗ. ‘ಹೆಪೋಥೈರಾಯಿಡಿಸಮ್’ ಎಂಬ ಕಾಯಿಲೆಯಲ್ಲಿ ಕಡಿಮೆ ರಕ್ತದೊತ್ತಡ ಇರುತ್ತದೆ.
4. ರಕ್ತದಲ್ಲಿ ತೀವ್ರತರವಾದ ಸೋಂಕು ತಗುಲಿ ದೇಹದೆಲ್ಲೆಡೆ ಸೋಂಕು ಹರಡಿದಾಗ.
5. ಮಧುಮೇಹಿಗಳಲ್ಲಿ ಗ್ಲೂಕೋಸ್ ಅಂಶ ಕಡಿಮೆಯಾದಾಗ.
6. ಗರ್ಭಾವಸ್ಥೆಯ ಮೊದಲ ತಿಂಗಳಲ್ಲಿ ರಕ್ತದಲ್ಲಿ ಪ್ರೋಜೆಸ್ಟರಾನ್ ಎಂಬ ರಸದೂತ ರಕ್ತನಾಳಗಳನ್ನು ಹಿಗ್ಗಿಸುವುದರಿಂದ ರಕ್ತದೊತ್ತಡ ಕಡಿಮೆಯಾಗುವ ಸಾಧ್ಯತೆ ಇದೆ.
7. ವಿಪರೀತ ರಕ್ತಹೀನತೆ.
8. ಹೃದಯಾಘಾತವಲ್ಲದೆ ಹೃದಯದ ಮಾಂಸಖಂಡಗಳಿಗೆ ಹಾನಿಯಾದಾಗ.
9. ಅತಿಯಾದ ಮದ್ಯಪಾನ ಮತ್ತು ಅತಿಯಾದ ಔಷಧಿ ಸೇವನೆ.
10. ದೇಹದ ಉಷ್ಣತೆ ಕಡಿಮೆಯಾದಾಗ.
11. ರಕ್ತದ ಒತ್ತಡ ಕಡಿಮೆ ಮಾಡುವ ಔಷಧಿಗಳನ್ನ ಅತಿಯಾದ ಸೇವಿನೆ.
12. ಮೂತ್ರಪಿಂಡದ ವೈಫಲ್ಯ.

ಲಕ್ಷಣಗಳು:

1. ಕಣ್ಣು ಮಂಜಾಗುವುದು, ನಡೆದಾಡಲು ಕಷ್ಟವಾಗಬಹುದು, ತಲೆತಿರುಗಿ ಬೀಳುವಂತಾಗುವುದು.
2. ವಿಪರೀತ ಸುಸ್ತು.
3. ಉಸಿರಾಡಲು ತೊಂದರೆ, ಶರೀರದ ಚರ್ಮ ಬಿಳಿಚಿಕೊಳ್ಳುವುದು, ಮೂರ್ಛೆ ಹೋದಂತೆ ಅನಿಸುವುದು.
4. ಬೆವರುವುದು, ವಾಂತಿ ಬಂದಂತಾಗುವುದು.
5. ತಲೆನೋವು, ಕುತ್ತಿಗೆ ಹಿಡಿದಂತಾಗುವುದು.
6. ಎದೆಯ ಬಳಿ ನೋವು, ತೋಳುಗಳ ಸುತ್ತ ನೋವು.
7. ಹೃದಯದ ಬಡಿತದಲ್ಲಿ ಏರುಪೇರಾಗಬಹುದು.
8. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ, ಅಪಸ್ಮಾರ ಉಂಟಾಗಿ, ಪ್ರಜ್ಞೆ ತಪ್ಪಬಹುದು.

ತಾತ್ಕಾಲಿಕ ಚಿಕಿತ್ಸೆ:

ತಲೆ ಸುತ್ತಿದಾಗ ತಕ್ಷಣವೇ ನೀರಿಗೆ ಸ್ವಲ್ಪ ಗ್ಲೂಕೋಸ್ ಮತ್ತು ಉಪ್ಪನ್ನು ಬೆರೆಸಿ ಸೇವಿಸತಕ್ಕದ್ದು. ಉಪ್ಪಿನ ಬಿಸ್ಕತ್ ತಿನ್ನಬೇಕು. ಸಾಕಷ್ಟು ಪ್ರಮಾಣದಲ್ಲಿ ನೀರು ಮತ್ತು ದ್ರವಾಹಾರವನ್ನು ಸೇವಿಸಬೇಕು. ತಕ್ಷಣವೇ ವೈದ್ಯರನ್ನು ಸಂದರ್ಶಿಸಬೇಕು; ರಕ್ತದೊತ್ತಡ ಕಡಿಮೆಯಾಗಲು ಕಾರಣ ತಿಳಿದು ಚಿಕಿತ್ಸೆಯನ್ನು ಪಡೆಯತಕ್ಕದ್ದು.

ತಡೆಗಟ್ಟುವುದು ಹೇಗೆ?

  • ಪ್ರತಿ ಆರು ತಿಂಗಳಿಗೊಮ್ಮೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ತಲೆ ಸುತ್ತುವುದು, ಉಸಿರಾಟದ ತೊಂದರೆ ಸುಸ್ತು ಇದ್ದಲ್ಲಿ ತಕ್ಷಣವೇ ವೈದ್ಯರನ್ನು ಕಾಣಬೇಕು.

  • ಸಾಕಷ್ಟು ಪ್ರಮಾಣದಲ್ಲಿ ಉಪ್ಪು, ಲವಾಣಾಂಶವಿರುವ ಆಹಾರ ಸೇವಿಸತಕ್ಕದ್ದು. ಸಾಕಷ್ಟು ದ್ರವ್ಯಾಹಾರವನ್ನು ಸೇವಿಸತಕ್ಕದ್ದು.

  • ಮದ್ಯಪಾನವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಮದ್ಯಪಾನದಿಂದಾಗಿ ನಿರ್ಲಜಲೀಕರಣವಾಗಿ ರಕ್ತದೊತ್ತಡ ಕಡಿಮೆಯಾಗಬಹುದು.

  • ರಕ್ತಹೀನತೆ ಕೂಡ ಕಡಿಮೆ ರಕ್ತದೊತ್ತಡಕ್ಕೆ ಪರೋಕ್ಷವಾಗಿ ಕಾರಣವಾಗುತ್ತದೆ. ಸಾಕಷ್ಟು ಪೋಷಕಾಂಶಗಳಿರುವ ಆಹಾರವನ್ನು ಸೇವಿಸಬೇಕು.

ಕೊನೆ ಮಾತು

ಹೃದಯ, ಮಿದುಳು, ಮೂತ್ರಪಿಂಡ, ಯಕೃತ್ತಿಗೆ ನಿರಂತರವಾಗಿ ಆಮ್ಲಜನಕ ಮತ್ತು ಪೋಷಕಾಂಶಗಳು ರಕ್ತದ ಮೂಲಕ ಪೂರೈಕೆಯಾಗುತ್ತವೆ. ಕಡಿಮೆ ರಕ್ತದೊತ್ತಡ ಇದ್ದಲ್ಲಿ, ಸೂಕ್ತ ಪ್ರಮಾಣದಲ್ಲಿ ಪೌಷ್ಠಿಕಾಂಶ ದೊರಕದೇ ಸಾಕಷ್ಟು ತೊಂದರೆಗಳು ಉದ್ಭವಿಸುತ್ತದೆ. ಕಡಿಮೆ ರಕ್ತದೊತ್ತಡ, ಅಧಿಕ ರಕ್ತದೊತ್ತಡಷ್ಟು ಮಾರಾಣಾಂತಿಕವಲ್ಲ; ಆದರೆ ನಿಧಾನವಾಗಿ ಅದು ಎಲ್ಲಾ ಅಂಗಗಳನ್ನು ಹಾಳುಗೆಡವಬಹುದು. ಹೀಗಾಗಿ ಕಾಲಕಾಲಕ್ಕೆ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಬೇಕು. ಸಕಾಲದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ ಮುಂದೆ ಬರಬಹುದಾದ ಅನಾಹುತಗಳನ್ನು ತಪ್ಪಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT