ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಯಾಲಿಸಿಸ್: ಏನು? ಏಕೆ? ಹೇಗೆ?

Published 2 ಅಕ್ಟೋಬರ್ 2023, 23:30 IST
Last Updated 2 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಶರೀರದಲ್ಲಿ ಉತ್ಪತ್ತಿಯಾಗುವ ದ್ರವರೂಪದ ತ್ಯಾಜ್ಯಗಳನ್ನು ದೇಹದಿಂದ ಹೊರಹಾಕುವ ಮುಖ್ಯ ಕೆಲಸವನ್ನು ಮೂತ್ರಪಿಂಡಗಳು ನಿರ್ವಹಿಸುತ್ತವೆ. ಅದರೊಂದಿಗೆ ದೇಹದ ಆಮ್ಲ-ಪ್ರತ್ಯಾಮ್ಲ, ಲವಣಾಂಶಗಳು ಮತ್ತು ದ್ರವಾಂಶವನ್ನು ಸೂಕ್ತ ಮಟ್ಟದಲ್ಲಿ ಕಾಯ್ದಿರಿಸುವ ಮಹತ್ವದ ಕೆಲಸವೂ ಅವುಗಳದ್ದೇ. ಅಲ್ಲದೆ, ರಕ್ತಕಣಗಳು ಮತ್ತು ಹಿಮೊಗ್ಲೋಬಿನ್‌ನ ಉತ್ಪಾದನೆಗೆ ಅತ್ಯಗತ್ಯವಾದ ಎರಿಥ್ರೋಪೊಯೆಟಿನ್ ಮತ್ತು ವಿಟಮಿನ್ ಡಿ ಜೀವಸತ್ವದ ಕ್ರಿಯಾಶೀಲರೂಪದ ತಯಾರಿ ನಡೆಯುವುದೂ ಮೂತ್ರಪಿಂಡಗಳಲ್ಲಿಯೇ. ‘ರೆನಿನ್’ ಎಂಬ ವಸ್ತುವಿನ ಉತ್ಪಾದನೆಯ ಮೂಲಕ ರಕ್ತದೊತ್ತಡವನ್ನು ಸಹಜ ಮಟ್ಟದಲ್ಲಿ ನಿರ್ವಹಿಸುವ ಮುಖ್ಯ ಜವಾಬ್ದಾರಿಯೂ ಈ ಅಂಗಾಂಗಗಳದ್ದೇ.

ಶರೀರದಲ್ಲಿ ಎರಡು ಮೂತ್ರಪಿಂಡಗಳಿದ್ದರೂ, ಹಲವು ಸಂದರ್ಭಗಳಲ್ಲಿ ಒಂದೇ ಮೂತ್ರಪಿಂಡವು ಎರಡರ ಕಾರ್ಯಕ್ಷಮತೆಯನ್ನು ತೋರಬಲ್ಲದು. ಹಾಗಾಗಿಯೇ ಮೂತ್ರಪಿಂಡಗಳ ಸಂಪೂರ್ಣ ವೈಫಲ್ಯ ಎಂದು ವೈದ್ಯರು ಸೂಚಿಸಿದರೆ ಎರಡರ ಕಾರ್ಯಕ್ಷಮತೆಯೂ ಕುಂಠಿತವಾಗಿದೆ ಎಂದರ್ಥ.

ಹಲವು ಕಾರಣಗಳಿಂದಾಗಿ ಮೂತ್ರಪಿಂಡಗಳು ತಮ್ಮ ಕಾರ್ಯನಿರ್ವಹಿಸಲು ವಿಫಲವಾಗಬಹುದು. ಮುಖ್ಯವಾಗಿ ದೀರ್ಘಕಾಲಿಕ ಮಧುಮೇಹ ಮತ್ತು ರಕ್ತದೊತ್ತಡವನ್ನು ಸಮರ್ಪಕವಾಗಿ ನಿಯಂತ್ರಣದಲ್ಲಿಡದಿದ್ದಾಗ ವ್ಯಕ್ತಿಯ ಮೂತ್ರಪಿಂಡಗಳು ಅಪಾಯದಲ್ಲಿರುತ್ತವೆ. ಹಾಗಾಗಿಯೇ ಮಧುಮೇಹಿಗಳು ಮತ್ತು ರಕ್ತದೊತ್ತಡದಿಂದ ಬಳಲುವವರು ನಿಯಮಿತವಾಗಿ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಸೂಕ್ತ ಚಿಕಿತ್ಸೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು ಸಮಸ್ಯೆಯನ್ನು ಆರಂಭದಿಂದಲೇ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ವೈದ್ಯರ ಸಲಹೆಯಿಲ್ಲದೆ ದೀರ್ಘಾವಧಿಯವರೆಗೆ ಸೇವಿಸುವ ಔಷಧಗಳೂ ಕೆಲವೊಮ್ಮೆ ಮೂತ್ರಪಿಂಡಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲವು.

ದೀರ್ಘಕಾಲಿಕ ಮೂತ್ರಪಿಂಡಗಳ ವೈಫಲ್ಯಕ್ಕೆ ತುತ್ತಾದ ವ್ಯಕ್ತಿಗೆ ಎರಡು ಆಯ್ಕೆಗಳಿರುತ್ತವೆ. ಒಂದು: ಡಯಾಲಿಸಿಸ್; ಮತ್ತೊಂದು: ಮೂತ್ರಪಿಂಡದ ಕಸಿ. ಮೂತ್ರಪಿಂಡಕಸಿ ಮಾಡಿಸಿಕೊಳ್ಳಲು ಮುಖ್ಯವಾಗಿ ಹೊಂದುವ ದಾನಿ ಲಭ್ಯವಿರಬೇಕು. ಅಷ್ಟೇ ಅಲ್ಲದೆ, ಕಸಿ ಮಾಡಿಸಿಕೊಳ್ಳುವ ವ್ಯಕ್ತಿಯ ಆರೋಗ್ಯವೂ ಸುಸ್ಥಿತಿಯಲ್ಲಿದ್ದು, ಅದಕ್ಕೆ ತಗುಲುವ ವೆಚ್ಛವನ್ನು ಭರಿಸಲೂ ಅವರು ಸಿದ್ಧರಿರಬೇಕು.
ಆದರೆ ಮೂತ್ರಪಿಂಡ ವಿಭಾಗವಿರುವ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ಡಯಾಲಿಸಿಸ್ ಉಪಕರಣಗಳು ಲಭ್ಯವಿದ್ದು, ಚಿಕಿತ್ಸೆಯ ಸೌಲಭ್ಯವಿರುತ್ತದೆ. ಮೂತ್ರಪಿಂಡತಜ್ಞರ ಸಲಹೆ ಮತ್ತು ಸೂಚನೆಯಂತೆ ಚಿಕಿತ್ಸೆಗೆ ಮುಂದಾಗಬಹುದು. ಒಮ್ಮೆ ವ್ಯಕ್ತಿಯ ಎರಡೂ ಮೂತ್ರಪಿಂಡಗಳು ತಮ್ಮ ಕಾರ್ಯನಿರ್ವಹಿಸಲು ಸಂಪೂರ್ಣ ವಿಫಲವಾದಾಗ ದೇಹದಲ್ಲಿ ವಿಷಕಾರಕ ವಸ್ತುಗಳು ಸಂಗ್ರಹವಾಗಲು ಶುರುವಾಗುತ್ತದೆ. ಅಷ್ಟೇ ಅಲ್ಲ, ಮೂತ್ರಪಿಂಡ ನಿರ್ವಹಿಸುವ ಇತರ ಕಾರ್ಯಗಳೂ ಸ್ಥಗಿತಗೊಳ್ಳುತ್ತವೆ. ಇದು ದೇಹದ ಇತರ ಅಂಗಾಂಗ ವ್ಯವಸ್ಥೆಗಳ ಕಾರ್ಯಕ್ಷಮತೆಯನ್ನೂ ಕ್ಷೀಣಿಸಿ, ವ್ಯಕ್ತಿಯನ್ನು ನಿತ್ರಾಣನನ್ನಾಗಿ ಮಾಡುತ್ತದೆ.

ಡಯಾಲಿಸಿಸ್ ಉಪಕರಣದಲ್ಲಿರುವ ಅತ್ಯಂತ ಸೂಕ್ಷ್ಮ ಶೋಧಕವು ವ್ಯಕ್ತಿಯ ರಕ್ತದಲ್ಲಿ ಸಂಗ್ರಹವಾದ ಜೈವಿಕ ತ್ಯಾಜ್ಯ ವಸ್ತುಗಳನ್ನು ಶೋಧಿಸಿ ಶುದ್ಧ ರಕ್ತವನ್ನು ಪುನಃ ವ್ಯಕ್ತಿಯ ದೇಹವನ್ನು ಸೇರುವಂತೆ ಮಾಡುತ್ತದೆ. ಒಂದು ರೀತಿಯಲ್ಲಿ, ಡಯಾಲಿಸಿಸ್ ಉಪಕರಣವು ಕೃತಕ ಮೂತ್ರಪಿಂಡಗಳಂತೆ ಕಾರ್ಯನಿರ್ವಹಿಸುತ್ತದೆ. ವ್ಯಕ್ತಿಯ ಮೂತ್ರಪಿಂಡ ವೈಫಲ್ಯದ ತೀವ್ರತೆ ಮತ್ತಿತರ ಅಂಶಗಳನ್ನು ಗಮನದಲ್ಲಿರಿಸಿ ಸಾಮಾನ್ಯವಾಗಿ ವಾರದಲ್ಲಿ ಮೂರು ಬಾರಿ, ಅಂದರೆ ಒಟ್ಟು ಹನ್ನೆರಡು ತಾಸುಗಳ ಕಾಲ ವ್ಯಕ್ತಿ ಡಯಾಲಿಸಿಸ್ ಪ್ರಕ್ರಿಯೆಗೆ ಒಳಗಾಗುವುದು ಸೂಕ್ತ ಎಂದು ತಜ್ಞರು ನಿರ್ಧರಿಸಿರುತ್ತಾರೆ. ಮೊದಲ ಬಾರಿ ಡಯಾಲಿಸಿಸ್‍ಗೆ ಒಳಗಾಗುವಾಗ ಅಲ್ಲಿನ ತಂತ್ರಜ್ಞರು ವಿಶೇಷ ಎಚ್ಚರಿಕೆಯನ್ನು ವಹಿಸುವುದಷ್ಟೇ ಅಲ್ಲದೆ ಕನಿಷ್ಠ ವೇಗದಲ್ಲಿ ಪ್ರಕ್ರಿಯೆಯನ್ನು ಪೂರೈಸುತ್ತಾರೆ. ಮುಂದಿನ ದಿನಗಳಲ್ಲಿ ಪ್ರಕ್ರಿಯೆಯ ವೇಗವನ್ನು ಕ್ರಮೇಣ ಹೆಚ್ಚಿಸುತ್ತಾ ಹೋಗಿ ಗರಿಷ್ಠ ಮಟ್ಟಕ್ಕೆ ತಲುಪುತ್ತಾರೆ. ರೋಗಿಯು ರಕ್ತಹೀನತೆಯಿಂದ ಬಳಲುತ್ತಿದ್ದರೆ ಆತನಿಗೆ ಅದಕ್ಕೆ ಪೂರಕವಾದ ಚುಚ್ಚುಮದ್ದುಗಳನ್ನು (ಎರಿಥ್ರೋಪೊಯೆಟಿನ್ ಮತ್ತು ಕಬ್ಬಿಣಾಂಶದ ಚುಚ್ಚುಮದ್ದುಗಳನ್ನು) ಮತ್ತು ವಿಟಮಿನ್ ಡಿ ಪೂರಕಗಳನ್ನು ಕೊಡುವುದೂ ಮುಖ್ಯ. ಒಂದು ಬಾರಿಯ ಡಯಾಲಿಸಿಸ್ ಸಾಮಾನ್ಯವಾಗಿ ನಾಲ್ಕು ತಾಸುಗಳ ಅವಧಿ ಹಿಡಿಯುತ್ತದೆ.

ಯಾವ ಎಚ್ಚರಿಕೆಗಳನ್ನು ವಹಿಸಬೇಕು?

ಡಯಾಲಿಸಿಸ್‍ಗೆ ಒಳಗಾಗುವ ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆ ದುರ್ಬಲವಾಗಿರುವುದರಿಂದ ಆತ ಸಾಮಾನ್ಯ ಜನರಿಗಿಂತ ಸುಮಾರು ಹತ್ತು ಪಟ್ಟು ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಸೋಂಕು ತಗುಲದಂತೆ ಎಲ್ಲ ರೀತಿಯ ಎಚ್ಚರಿಕೆಗಳನ್ನು ಆತ ವಹಿಸಬೇಕು. ಕುಟುಂಬದವರ ಸಹಕಾರ ಹಾಗೂ ಬೆಂಬಲ ಈ ನಿಟ್ಟಿನಲ್ಲಿ ಬಹಳ ಮುಖ್ಯ.

• ವೈಯಕ್ತಿಕ ಕಾರಣಗಳಿಗಾಗಿ ಡಯಾಲಿಸಿಸ್ ಪ್ರಕ್ರಿಯೆಯನ್ನು ಮುಂದೂಡಬಾರದು. ವೈದ್ಯರು ಸೂಚಿಸದ ಸಮಯ ಮತ್ತು ದಿನಾಂಕದಂದೇ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಾ ಬರುವುದು ಶರೀರವನ್ನು ಸುಸ್ಥಿತಿಯಲ್ಲಿಡಲು ಸಹಕಾರಿ.
• ಜನದಟ್ಟಣೆ ಇರುವಂತಹ ಸ್ಥಳಗಳಿಂದ ದೂರವಿರಬೇಕು. ಅಂತಹ ಸಂದರ್ಭದಲ್ಲಿ ಮಾಸ್ಕ್ ಬಳಸುವುದು ಸೂಕ್ತ.
• ಲಭ್ಯವಿರುವ ಸೋಂಕಿನ ವಿರುದ್ಧದ ಲಸಿಕೆಗಳನ್ನು (ಇನ್‍ಫ್ಲುಯೆಂಜಾ, ನ್ಯೂಮೊಕಾಕೈ) ಹಾಕಿಸಿಕೊಳ್ಳಬೇಕು.
• ಪ್ರೋಟೀನ್ ಹೇರಳವಾಗಿರುವ ಆಹಾರವನ್ನು ಸೇವಿಸಬೇಕು. ಮೀನು, ಮೊಟ್ಟೆ, ಮಾಂಸ, ಪನ್ನೀರು, ಮೊಳಕೆ ಬರಿಸಿದ ಕಾಳುಗಳು, ಸೋಯಾ ಚಂಕ್‍ಗಳನ್ನು ಆಹಾರದಲ್ಲಿ ಬಳಸಬೇಕು.
• ಉಪ್ಪಿನ ಅಂಶದ ಬಳಕೆ ಕನಿಷ್ಠ ಪ್ರಮಾಣದಲ್ಲಿರಬೇಕು.
• ದ್ರವಾಂಶದ ಆಹಾರವನ್ನು ಮಿತಿಯಲ್ಲಿ ಸೇವಿಸಬೇಕು. ವೈದ್ಯರ ಸಲಹೆಯಂತೆ ಒಟ್ಟು ದ್ರವಾಂಶದ ಆಹಾರವು (ನೀರು, ಪಾನೀಯಗಳು, ಸಾಂಬಾರು) ಒಂದು ಲೀಟರ್ ಒಳಗೇ ಬರುವಂತೆ ಗಮನವನ್ನು ವಹಿಸಬೇಕು.
• ಡಯಾಲಿಸಿಸ್‍ಗೆಂದು ಸಿದ್ಧಪಡಿಸಿದ ಫಿಸ್ಟುಲವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಆ ಭಾಗದಲ್ಲಿ ಸೋಂಕು ತಗುಲದಂತೆ ಎಚ್ಚರವಹಿಸಬೇಕು.
• ಶೌಚಾಲಯದ ಸ್ವಚ್ಛತೆಯೂ ಬಹಳ ಮುಖ್ಯ. ಪ್ರತಿ ಬಾರಿ ಬಳಸುವ ಮೊದಲು ಸ್ವಚ್ಛಗೊಳಿಸುವುದು ಉತ್ತಮ.

ಮೂತ್ರಪಿಂಡಗಳನ್ನು ಸುಸ್ಥಿತಿಯಲ್ಲಿಡುವುದು ಹೇಗೆ?

• ದಿನವೂ ಕಡ್ಡಾಯವಾಗಿ ಮೂರು ಲೀಟರ್‌ಗಳಿಗೂ ಅಧಿಕ ನೀರನ್ನು ಕುಡಿಯಬೇಕು.
• ಅತಿಯಾದ ಉಪ್ಪಿನ ಅಂಶದ ಆಹಾರ ಒಳ್ಳೆಯದಲ್ಲ.
• ನೀವು ರಕ್ತದೊತ್ತಡ ಅಥವಾ ಮಧುಮೇಹದಿಂದ ಬಳಲುತ್ತಿದ್ದರೆ ತಜ್ಞವೈದ್ಯರಿಂದ ಸೂಕ್ತ ಸಲಹೆ ಮತ್ತು ಔಷಧೋಪಚಾರವನ್ನು ಪಡೆದುಕೊಳ್ಳಬೇಕು. ರಕ್ತದ ಸಕ್ಕರೆ ಅಂಶ ಮತ್ತು ರಕ್ತದೊತ್ತಡ ಸದಾ ಸಹಜ ಮಟ್ಟದಲ್ಲಿರುವಂತೆ ನಿಗಾ ವಹಿಸಬೇಕು.
• ಯಾವುದೇ ಗುರುತು ಪಟ್ಟಿಯಿಲ್ಲದ ಔಷಧಗಳು, ಹೆಸರು ಸೂಚಿಸದ ಗಿಡಮೂಲಿಕೆ ಔಷಧಗಳು, ಜಿಮ್‍ನಲ್ಲಿ ದೇಹದಾರ್ಢ್ಯಕ್ಕೆಂದು ಪೂರೈಸುವ ಹೆಸರಿಲ್ಲದ ಪ್ರೋಟೀನ್ ಪುಡಿಗಳು – ವೈದ್ಯರ ಸಲಹೆಯಿಲ್ಲದೆ ಸೇವಿಸುವ ಇಂಥವು ಮೂತ್ರಪಿಂಡಗಳ ಆರೋಗ್ಯಕ್ಕೆ ಮಾರಕವಾಗಬಹುದು.
• ದೀರ್ಘಾವಧಿಯವರೆಗೆ ವೈದ್ಯರ ಸಲಹೆಯಿಲ್ಲದೆ ಸೇವಿಸುವ ನೋವುನಿವಾರಕಗಳೂ ಮೂತ್ರಪಿಂಡದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
• ಮೂವತ್ತು ವರ್ಷದ ನಂತರ ವರ್ಷಕ್ಕೊಮ್ಮೆಯಾದರೂ ಮೂತ್ರಪಿಂಡಗಳ ಕಾರ್ಯಕ್ಷಮತೆಯ ಪರೀಕ್ಷೆಗಳನ್ನು ಮಾಡಿಸತಕ್ಕದ್ದು.
• ಮಧುಮೇಹಿಗಳು ಮತ್ತು ರಕ್ತದೊತ್ತಡದಿಂದ ಬಳಲುವವರು ವರ್ಷಕ್ಕೆ ಎರಡು ಬಾರಿ ಪರೀಕ್ಷೆಗಳನ್ನು ಮಾಡಿಸುವುದು ಉತ್ತಮ.
• ಅತಿಯಾದ ಧೂಮಪಾನ ಮತ್ತು ಮದ್ಯಪಾನ ಮೂತ್ರಪಿಂಡಗಳ ಆರೋಗ್ಯಕ್ಕೆ ಮಾರಕ.
• ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮ ಕೂಡ ಮೂತ್ರಪಿಂಡಗಳನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT