‘'ಇಂಡಿಯಾ’ ಮೈತ್ರಿಕೂಟವು ಪದೇ ಪದೇ ಮತ್ತು ಉದ್ದೇಶಪೂರ್ವಕವಾಗಿ ಹಿಂದೂ ಧರ್ಮವನ್ನು ಅವಮಾನಿಸುತ್ತಿದೆ. ಅವರು (ಇಂಡಿಯಾ ಮೈತ್ರಿಕೂಟ) ಹಿಂದುತ್ವದ ವಿರುದ್ಧದ ಯೋಚನೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಇತರ ಧರ್ಮಗಳ ವಿರುದ್ಧ ಮಾತನಾಡದ ಅವರು, ಅವಕಾಶ ಸಿಕ್ಕಾಗಲೆಲ್ಲ ಒಂದು ಸೆಕೆಂಡು ಕೂಡ ವ್ಯರ್ಥ ಮಾಡದೇ ಹಿಂದುತ್ವವನ್ನು ಅವಮಾನಿಸುತ್ತಾರೆ. ನಾವು ಇದನ್ನು ಹೇಗೆ ಸಹಿಸಿಕೊಳ್ಳಬೇಕು?, ಇದನ್ನು ನಾವು ಹೇಗೆ ಒಪ್ಪಿಕೊಳ್ಳಬೇಕು?’ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ ಎಂದು ಡಿಎಂಕೆ ತಿಳಿಸಿದೆ.
ಚುನಾವಣಾ ಆಯೋಗಕ್ಕೆ ಮಾರ್ಚ್ 21ರಂದು ಪತ್ರ ಬರೆದಿರುವ ಡಿಎಂಕೆಯ ಸಂಘಟನಾ ಕಾರ್ಯದರ್ಶಿ ಆರ್. ಎಸ್. ಭಾರತಿ, ‘ಮುಂಬರುವ ಲೋಕಸಭಾ ಚುನಾವಣೆಗೆ ತಮಿಳುನಾಡಿನಲ್ಲಿ ಪ್ರಚಾರ ನಡೆಸುವ ವೇಳೆ ಪ್ರಧಾನಿ ಮೋದಿ ಅವರು ನೀಡಿರುವ ಹೇಳಿಕೆಯು, 1951ರ ಪ್ರಜಾಪ್ರತಿನಿಧಿ ಕಾಯಿದೆ ಮತ್ತು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ’ ಎಂದು ತಿಳಿಸಿದ್ದಾರೆ.
ಚುನಾವಣಾ ಆಯೋಗವು ಮಧ್ಯಪ್ರವೇಶಿಸುವ ಮೂಲಕ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಮತ್ತು ತಪ್ಪು ಹೇಳಿಕೆಗಳು, ಧರ್ಮ ಮತ್ತು ವಿಭಜನೆಯಂತಹ ವಿಧಾನಗಳನ್ನು ಅನುಸರಿಸುವ ಚುನಾವಣಾ ಪ್ರಚಾರಗಳನ್ನು ನಿಲ್ಲಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
‘ಈ ದೂರನ್ನು ಆಧರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಮತ್ತು ಕಾನೂನಿನ ಚೌಕಟ್ಟಿನೊಳಗೆ ನಡೆದುಕೊಳ್ಳುವಂತೆ ಸಂಬಂಧಪಟ್ಟವರಿಗೆ ನಿರ್ದೇಶಿಸುವಂತೆ ಚುನಾವಣಾ ಆಯೋಗದಲ್ಲಿ ನಾನು ಮನವಿ ಮಾಡುತ್ತೇನೆ’ ಎಂದು ಭಾರತಿ ಹೇಳಿದ್ದಾರೆ.