ನಾಸಿಕ್: 'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರೈತರ ಧ್ವನಿಯಾಗಲಿದೆ ಮತ್ತು ರೈತರನ್ನು ರಕ್ಷಿಸಲು ನೀತಿಗಳನ್ನು ರೂಪಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು.
ಗುರುವಾರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಚಂದವಾಡದಲ್ಲಿ ನಡೆದ 'ಭಾರತ ಜೋಡೊ ನ್ಯಾಯ ಯಾತ್ರೆ' ಭಾಗವಾಗಿ ರೈತರ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು. ಈ ವೇಳೆ ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಮತ್ತು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್ ಭಾಗಿಯಾಗಿದ್ದರು.
'ಇಂಡಿಯಾ ಮೈತ್ರಿ ಕೂಟ ರೈತರ ಧ್ವನಿಯಾಗಲಿದೆ. ಅವರ ಹಿತಾಸಕ್ತಿಯನ್ನು ರಕ್ಷಿಸಲು ಕೆಲಸ ಮಾಡಲಿದೆ. ನಮ್ಮ ಹಾಗೂ ಇಂಡಿಯಾ ಮೈತ್ರಿಕೂಟ ಸರ್ಕಾರದ ಬಾಗಿಲು ಯಾವಾಗಲೂ ರೈತರಿಗೆ ತೆರೆದಿರಲಿದೆ' ಎಂದು ಅವರು ಹೇಳಿದರು.