ಸಂದೇಶ್ಖಾಲಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಬೆನ್ನಲ್ಲೇ ರಾಜ್ಯದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರಾಜೀವ್ ಕುಮಾರ್ ಅವರು ಸ್ಥಳಕ್ಕೆ ಧಾವಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರತಿಭಟನಕಾರರಿಗೆ ಭರವಸೆ ನೀಡಿದ್ದಾರೆ.
ಟಿಎಂಸಿ ನಾಯಕ ಶಹಜಹಾನ್ ಶೇಖ್ ಮತ್ತು ಅವರ ಸಹೋದರ ಸಿರಾಜ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಭೂಕಬಳಿಕೆ ಆರೋಪ ಮಾಡಿರುವ ಸ್ಥಳೀಯರು, ಅವರಿಬ್ಬರಿಗೆ ಸೇರಿದ ಸ್ವತ್ತುಗಳಿಗೆ ಬೆಂಕಿ ಇಟ್ಟಿದ್ದಾರೆ. ಅದಲ್ಲದೇ, ಟಿಎಂಸಿಯ ಸ್ಥಳೀಯ ಮುಖಂಡರ ಸ್ವತ್ತುಗಳ ಮೇಲೆ ದಾಳಿ ನಡೆಸಿ, ವಸ್ತುಗಳನ್ನು ಲೂಟಿ ಮಾಡಿದ್ದಾರೆ.
ಪ್ರತಿಭಟನೆ ವೇಳೆ ಸ್ಥಳೀಯರು ಮರದ ದಿಮ್ಮಿಗಳನ್ನು ರಸ್ತೆಗಳಿಗೆ ಅಡ್ಡಲಾಗಿ ಇರಿಸಿ, ಅವುಗಳಿಗೆ ಬೆಂಕಿ ಹಚ್ಚುವ ಮೂಲಕ ಪೊಲೀಸ್ ವಾಹನಗಳು ಝುಪ್ಖಾಲಿ ಮತ್ತು ಸಂದೇಶ್ಖಾಲಿ ಪ್ರದೇಶಗಳಿಗೆ ಪ್ರವೇಶಿಸದಂತೆ ತಡೆದಿದ್ದಾರೆ.
ಉದ್ವಿಗ್ನ ಗುಂಪು ಸಂದೇಶ್ಖಾಲಿ ಬಳಿಯ ಬೆಲ್ಮಾಜೂರ್ ಪ್ರದೇಶದಲ್ಲಿನ ಮೀನುಗಾರಿಕಾ ನೆಲೆ ಬಳಿಯ ಸ್ವತ್ತುಗಳಿಗೂ ಬೆಂಕಿ ಹಚ್ಚಿದೆ. ಇವು ಸಿರಾಜ್ಗೆ ಸೇರಿದ ಸ್ವತ್ತುಗಳು ಎಂದು ತಿಳಿದುಬಂದಿದೆ.