ನವದೆಹಲಿ: 19 ವರ್ಷದ ಒಬ್ಬ ಯುವಕನನ್ನು ನಾಲ್ಕು ಮಂದಿ ಥಳಿಸಿರುವ ಘಟನೆ ಕೇಂದ್ರ ದೆಹಲಿಯ ನಬಿ ಕರೀಂ ಪ್ರದೇಶದಲ್ಲಿ ನಡೆದಿದೆ.
ಈ ಘಟನೆ ಗುರುವಾರ ನಡೆದಿದ್ದು, ನಬಿ ಕರೀಂ ಪ್ರದೇಶದ ಪ್ರೇಮ್ನಗರ ನಿವಾಸಿ ಅಶ್ಜದ್ ಥಳಿತಕ್ಕೆ ಒಳಗಾಗಿರುವ ವ್ಯಕ್ತಿ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಶ್ಜದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
‘ನಾನು ಚಿಕಪ್ಪನ ಅಂಗಡಿಯಲ್ಲಿ ಕುಳಿತಿದ್ದಾಗ ನನಗೆ ಪರಿಚಯವಿದ್ದ ನಾಲ್ಕು ಮಂದಿ ಅಂಗಡಿಗೆ ಆಗಮಿಸಿದರು. ಅವರನ್ನು ನಾನು ನಿಂದಿಸಿದ್ದೇನೆ ಎಂದು ಆರೋಪಿಸಿ, ನನ್ನನ್ನು ಥಳಿಸಲು ಆರಂಭಿಸಿದರು’ ಎಂದು ಪೊಲೀಸರಿಗೆ ಅಶ್ಜದ್ ಮಾಹಿತಿ ನೀಡಿದರು.
‘ಈ ಸಂಬಂಧ ಪ್ರಕರಣವನ್ನು ದಾಖಲಿಸಲಾಗಿದ್ದು, ಬಾಲಕನೊಬ್ಬನನ್ನು ಸಹ ಬಂಧಿಸಲಾಗಿದೆ. ಇತರರಿಗಾಗಿ ಶೋಧ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.