ನವದೆಹಲಿ: ನಗರದ ರೋಹಿಣಿ ಪ್ರದೇಶದಲ್ಲಿ ಮೂವರು ಬಾಲಕಿಯರನ್ನು ಅಪಹರಿಸಿ, ನಿದ್ದೆ ಬರಿಸುವ ಪದಾರ್ಥಗಳನ್ನು ಮಿಶ್ರಣ ಮಾಡಿದ್ದ ಪಾನೀಯ ಕುಡಿಸಿ ಅವರ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಇಬ್ಬರು ಬಂಗಾಳಿಲಾಲ್ ಶರ್ಮಾ (45), ಸಂದೀಪ್ (36), ರುಕ್ಸಾನಾ (40) ಹಾಗೂ ಜ್ಯೋತಿ (19) ಎಂಬುವವರನ್ನು ಬಂಧಿಸಲಾಗಿದೆ. ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾದ ಪ್ರಕಾಶ್ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ರಮ ಕೈಗೊಂಡಿರುವ ಬಗ್ಗೆ ಆ.14ರ ಒಳಗಾಗಿ ವರದಿ ಸಲ್ಲಿಸುವಂತೆ ದೆಹಲಿ ಮಹಿಳಾ ಆಯೋಗವು ಪೊಲೀಸರಿಗೆ ಸೂಚಿಸಿದೆ.
‘ರುಕ್ಸಾನಾ ಜೊತೆಗೂಡಿ ಮಾನವ ಕಳ್ಳಸಾಗಣೆ ಜಾಲ ನಡೆಸುತ್ತಿದ್ದೆ. ಅಪಹರಿಸಲಾಗಿದ್ದ ಬಾಲಕಿಯರನ್ನು ಚಂಡೀಗಡದಲ್ಲಿ ಮಾರಾಟ ಮಾಡಲು ಉದ್ದೇಶಿಸಿದ್ದೆ ಎಂಬುದಾಗಿ ಆರೋಪಿ ಶರ್ಮಾ ವಿಚಾರಣೆ ವೇಳೆ ತಿಳಿಸಿದ್ದಾನೆ’ ಎಂದು ಡಿಸಿಪಿ (ದಕ್ಷಿಣ) ಬೆನಿಟಾ ಮೇರಿ ಜೈಕರ್ ತಿಳಿಸಿದ್ದಾರೆ.