ಜೈಲಿನಲ್ಲಿ ಗಲಭೆ ಮಾಡಿ ಬೆಂಕಿ ಹಚ್ಚಿದ ಕೈದಿಗಳು: 30 ಪೊಲೀಸರಿಗೆ ಗಾಯ

ಫರೂಖಾಬಾದ್ (ಉತ್ತರ ಪ್ರದೇಶ): ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಕೈದಿಯೊಬ್ಬನ ಸಾವಿನಿಂದ ಆಕ್ರೋಶಗೊಂಡ ಸಹ ಕೈದಿಗಳು ಭಾನುವಾರ ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿ, ಜೈಲಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಸುಮಾರು 30 ಪೊಲೀಸರು ಮತ್ತು ಆರು ಕೈದಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೈದಿಯೊಬ್ಬ ಡೆಂಗಿ ಕಾಯಿಲೆಯಿಂದ ಇಲ್ಲಿನ ಸೈಫಾಯಿ ವೈದ್ಯಕೀಯ ಕಾಲೇಜಿನಲ್ಲಿ ಮೃತಪಟ್ಟ. ಈ ಸುದ್ದಿ ಹೊರಬೀಳುತ್ತಿದ್ದಂತೆ ಕಾರಾಗೃಹದಲ್ಲಿ ಕೈದಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು ಎಂದು ಜೈಲಿನ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಈ ವೇಳೆ ಕೈದಿಗಳು ಜೈಲಿಗೆ ಬೆಂಕಿಯನ್ನೂ ಹಚ್ಚಿದರು. ಕೂಡಲೇ ಅಗ್ನಿಶಾಮಕ ದಳವನ್ನು ಕರೆಸಿ, ಬೆಂಕಿ ನಂದಿಸಲಾಯಿತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಯಿತು ಎಂದು ಅವರು ಹೇಳಿದ್ದಾರೆ.
‘ಘಟನೆಯಲ್ಲಿ ಡೆಪ್ಯುಟಿ ಜೈಲರ್ ಸೇರಿದಂತೆ 30 ಪೊಲೀಸರು ಗಾಯಗೊಂಡಿದ್ದಾರೆ. ಈಗ ಪರಿಸ್ಥಿತಿಯ ನಿಯಂತ್ರಣದಲ್ಲಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಮೀನಾ ತಿಳಿಸಿದ್ದಾರೆ. ‘ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ’ ಎಂದು ಜಿಲ್ಲಾಧಿಕಾರಿ ಸಂಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.