ಕೋಲ್ಕತ್ತಾ: ಸಂಬಂಧಿಕರನ್ನು ಭೇಟಿಯಾಗಲು ಬಾಂಗ್ಲಾದೇಶಕ್ಕೆ ಹೊರಟಿದ್ದ ಹಾಗೂ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಲು ಅಕ್ರಮವಾಗಿ ‘ಭಾರತ – ಬಾಂಗ್ಲಾ‘ ಗಡಿ ದಾಟುತ್ತಿದ್ದ ಹದಿನೇಳು ಮಂದಿ ಬಾಂಗ್ಲಾದೇಶೀಯರು ಮತ್ತು ಭಾರತೀಯರನ್ನು ಗಡಿಭದ್ರತಾ ಪಡೆಯ ಯೋಧರು ಬಂಧಿಸಿ, ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಬಂಧಿತರಲ್ಲಿ ಐವರು ಬಾಂಗ್ಲಾದೇಶೀಯರು ಮತ್ತು 12 ಮಂದಿ ಭಾರತೀಯರು ಇದ್ದಾರೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿರುವ ಭಾರತ – ಬಾಂಗ್ಲಾ ಗಡಿಯ ರಾಮನನಗರ ಔಟ್ಪೋಸ್ಟ್ ಮೂಲಕ ಗಡಿ ದಾಟುತ್ತಿದ್ದ ಈ ಹದಿನೇಳು ಮಂದಿಯನ್ನು ಬಿಎಸ್ಎಫ್ ಯೋಧರು ಬಂಧಿಸಿರುವುದಾಗಿ ಬಿಎಸ್ಎಫ್ ಪ್ರಕಟಣೆಯಲ್ಲಿ ತಿಳಿಸಿದೆ.
ಬಂಧಿತ ಭಾರತೀಯರು ‘ಪಶ್ಚಿಮ ಬಂಗಾಳದ ಬೆನಪೋಲೆ ಪ್ರದೇಶದಲ್ಲಿ ಅಕ್ರಮವಾಗಿ ಗಡಿ ದಾಟಿ ಬಾಂಗ್ಲಾದೇಶ ದಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿಯಾಗಿ ವಾಪಸ್ ಭಾರತಕ್ಕೆ ಹಿಂದಿರುಗುತ್ತಿದ್ದೆವು‘ ಎಂದು ಹೇಳಿದ್ದರೆ, ಬಾಂಗ್ಲಾದೇಶಿಯರು ‘ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗುತ್ತಿದ್ದೆವು‘ ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ, ಅದೇ ದಿನ ಒಬ್ಬ ಭಾರತೀಯನನ್ನು ಬಿಎಸ್ಎಫ್ ತಂಡದವರು ಖಾಸ್ಮಾಹಲ್ ಔಟ್ ಪೋಸ್ಟ್ನಲ್ಲಿ ವಶಕ್ಕೆ ಪಡೆದು, ಅವರಿಂದ 10 ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ವ್ಯಕ್ತಿ ಬಾಂಗ್ಲಾದೇಶಕ್ಕೆ ಜಾನುವಾರುಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಎಂದು ಆರೋಪಿಸಲಾಗಿದೆ.